ಸಾರಾಂಶ
ಚನ್ನರಾಯಪಟ್ಟಣ: ತಾಲೂಕಿನ ನುಗ್ಗೇಹಳ್ಳಿ ಗ್ರಾಮದ ಗ್ರಾಮ ದೇವತೆ ಶ್ರೀ ನುಗ್ಗೆಳ್ಳಮ್ಮ ಹಾಗೂ ಶ್ರೀ ಕೆಂಪಮ್ಮ ದೇವಿಯವರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀನುಗ್ಗೇಳ್ಳಮ್ಮ, ಶ್ರೀ ಕೆಂಪಮ್ಮ ದೇವಿಗೆ ಬೆಳಿಗ್ಗೆಯಿಂದಲೇ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜೆಗಳು ನಡೆದವು. ಬೆಂಗಳೂರು ಸೇರಿದಂತೆ ಈ ಭಾಗದ ಬಸವನಪುರ, ಮುದ್ದನಹಳ್ಳಿ, ಅಕ್ಕನಹಳ್ಳಿ ಕ್ರಾಸ್, ಹೂವಿನಹಳ್ಳಿ, ಸಮುದ್ರ ಹಳ್ಳಿ, ವಿರುಪಾಕ್ಷಪುರ, ಜಿ.ಎನ್. ಕೊಪ್ಪಲು ಸೇರಿದಂತೆ ಅನೇಕ ಗ್ರಾಮಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಂಪ್ರದಾಯದಂತೆ ಶ್ರೀನುಗ್ಗೆಳ್ಳಮ್ಮ, ಶ್ರೀ ಕೆಂಪಮ್ಮಗೆ ರಾತ್ರಿ ಮಹಾಮಂಗಳಾರತಿ ನಂತರ ಸೋಮನ ಕುಣಿತದೊಂದಿಗೆ ದೇವಾಲಯದ ಆವರಣದಲ್ಲಿ ಉತ್ಸವ ನಡೆಸಿ ನಂತರ ರಥದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಪ್ರದಾಯದಂತೆ ವಿಧಿವಿಧಾನ ಪೂರ್ಣಗೊಂಡ ತರುವಾಯ ಅಲಂಕೃತ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಭಕ್ತರು ಹಣ್ಣುದವನ ಎಸೆಯುವ ಮೂಲಕ ದೇವರಿಗೆ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಶಾಸಕ ಸಿ.ಎನ್. ಬಾಲಕೃಷ್ಣ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಎ. ಗೋಪಾಲಸ್ವಾಮಿ ಪಾಲ್ಗೊಂಡು ಶ್ರೀನುಗ್ಗೇಳ್ಳಮ್ಮ, ಶ್ರೀ ಕೆಂಪಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಶುಭಕೋರಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯ ಸೇರಿದಂತೆ ಪ್ರಮುಖ ರಸ್ತೆಗಳು ವಿದ್ಯುತ್ ದೀಪಲಂಕಾರಗಳಿಂದ ಕಂಗೊಳಿಸುತ್ತಿದ್ದವು. ಹಾಗೂ ಬಾರಿ ಮುದ್ದು ಗುಂಡಿನ ಪ್ರದರ್ಶನ ಮತ್ತು ರಸ ಸಂಜೆ ಕಾರ್ಯಕ್ರಮ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ನುಗ್ಗೇಳ್ಳಮ್ಮ ಅನ್ನದಾನ ಯುವಕ ಬಳಗದ ವತಿಯಿಂದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಯಿತು.ಜಾತ್ರಾ ಮಹೋತ್ಸವದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಠಲ್ ಕುಮಾರ್, ಉದ್ಯಮಿ ಜಗದೀಶ್, ಪ್ರಮುಖರಾದ ತೋಟಿ ನಾಗರಾಜ್, ಫೈನಾನ್ಸ್ ಪ್ರಕಾಶ್, ಸಬ್ಸಿಡಿ ದೇವರಾಜ್, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಮ್ .ಜಯರಾಮ್, ಎಚ್.ಜೆ ಕಿರಣ್, ಯುವ ಮುಖಂಡ ಸನ್ ರವಿ, ಎನ್.ಡಿ ದೇವರಾಜ್, ಎನ್.ಆರ್ ಮುರಳಿ, ಆಟೋ ರಮೇಶ್, ಸದಾಶಿವ, ಎನ್.ಆರ್ ಚಂದ್ರು, ಎನ್.ವಿ ಲೋಕೇಶ್, ಪಟೇಲ್ ಕುಮಾರ್, ಕೆಡಿಪಿ ಸದಸ್ಯ ಸಮಿವುಲ್ಲಾ, ಮಸೀದಿ ಮಾಜಿ ಅಧ್ಯಕ್ಷ ಮಹಮ್ಮದ್ ಜಾವಿದ್, ಬಾರಿನ್ ನಂಜುಂಡೇಗೌಡ, ಮಾಳೇರ್ ನಿತಿನ್, ಕಿರಣ್ ಗವಿರಂಗಯ್ಯ, ರಂಗಸ್ವಾಮಿ ಸೇರಿದಂತೆ ದೇವರು ಒಕ್ಕಲಿನ ಎಲ್ಲಾ ಗ್ರಾಮಗಳ ಗ್ರಾಮಸ್ಥರು, ಪ್ರಮುಖರು ಮತ್ತು ನುಗ್ಗೇಹಳ್ಳಿ ಗ್ರಾಮಸ್ಥರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.