ಸಾರಾಂಶ
ಗದಗ: ವೈದ್ಯಕೀಯ ಕ್ಷೇತ್ರದಲ್ಲಿ ಶುಶ್ರೂಷಕರ ಪಾತ್ರ ಅತ್ಯಂತ ಮಹತ್ವವಾಗಿದ್ದು, ಶುಶ್ರೂಷಕರು, ವೈದ್ಯರಷ್ಟೆ ಪ್ರಾಮುಖ್ಯತೆ ಹೊಂದಿದ್ದು, ಶುಶ್ರೂಷಕರನ್ನು ಪ್ರತಿಯೊಬ್ಬ ರೋಗಿಯು ಮಾತೃ ಸಮಾನವಾಗಿ ಕಾಣಬೇಕು ಎಂದು ಹಿರಿಯ ವೈದ್ಯ ಡಾ. ಶ್ರೀಧರ ಕುರಡಗಿ ಹೇಳಿದರು.
ಅವರು ನಗರದ ಡಾ. ಎಸ್.ವ್ಹಿ.ತೋಟಗಂಟಿಮಠ ಕಾಲೇಜ ಆಫ್ ನರ್ಸಿಂಗ್, ಮದರ್ ಥೆರೇಸಾ ನರ್ಸಿಂಗ್ ಕಾಲೇಜ ಮತ್ತು ಗಾಂಧೀಜಿ ಪ್ಯಾರಾ ಮೆಡಿಕಲ್ ಕಾಲೇಜಿನ 2023-24 ನೇ ಸಾಲಿನ ನೂತನ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಮತ್ತು ಪ್ರತಿಜ್ಞಾವಿಧಿ ಸಮಾರಂಭದ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.ಅತಿಥಿಗಳಾಗಿ ಆಗಮಿಸಿದ್ದ ಸ್ತ್ರೀ ರೋಗ ವೈದ್ಯೆ ಡಾ. ಸ್ನೇಹಾ ಪಾಟೀಲಶಿರೋಳ ಮಾತನಾಡಿ, ನರ್ಸಿಂಗ್ ಮತ್ತು ಅರೆ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಪಠ್ಯದ ಜತೆಗೆ ಇಂದಿನ ವೈದ್ಯಕೀಯ ಆವಿಷ್ಕಾರ ಹೊಂದಿದ ಚಿಕಿತ್ಸಾ ಕ್ರಮಗಳ ಬಗ್ಗೆ ಪ್ರಾಯೋಗಿಕವಾಗಿ ಕೌಶಲ್ಯ ತರಬೇತಿ ಪಡೆದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುವಲ್ಲಿ ಶ್ರಮಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಮ್ಸ್ ನರ್ಸಿಂಗ ಕಾಲೇಜಿನ ಪ್ರಾಚಾರ್ಯ ಶಿವನಗೌಡ ಮಲಗೌಡ್ರ ಪ್ರಸ್ತುತ ದಿನಗಳಲ್ಲಿ ಜಾಗತಿಕವಾಗಿ ಭಾರತೀಯ ಶುಶ್ರೂಷಕರಿಗೆ ಒಳ್ಳೆಯ ಬೇಡಿಕೆ ಇದ್ದು, ಹೆಚ್ಚಿನ ವ್ಯಾಸಂಗ ಮಾಡುವ ಮೂಲಕ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನ ಹೊಂದುವ ಮೂಲಕ ಕಲಿತ ಸಂಸ್ಥೆಗೆ ಹಾಗೂ ಪಾಲಕರಿಗೆ ಶ್ರೇಯಸ್ಸನ್ನು ನೀಡಬೇಕೆಂದು ತಿಳಿಸಿದರು.ಜಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಸ್ಟಿಫನ್ ಜಾನ್ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನ ಮೆಲಕು ಹಾಕುವುದರೊಂದಿಗೆ ನರ್ಸಿಂಗ್ ವೃತ್ತಿಯ ಪ್ರಾಮುಖ್ಯತೆ ತಿಳಿಸಿದರು.
ಪ್ರಿಯದರ್ಶಿನಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ, ಅಧ್ಯಕ್ಷತೆಯನ್ನು ಡಾ.ಎಸ್.ವಿ..ಟಿ ಸಂಸ್ಥೆಯ ಚೇರಮನ್ನ ವನಜಾಕ್ಷಿ ತೋಟಗಂಟಿಮಠ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಡಾ. ಸಂತೋಷ ತೋಟಗಂಟಿಮಠ, ಆನಂದ ತೋಟಗಂಟಿಮಠ, ಪ್ರಾಚಾರ್ಯ ಶಿವಕುಮಾರ ಕಾತರಕಿ, ರೋಟರಿ ಗದಗ ಸೆಂಟ್ರಲ್ನ ಅಧ್ಯಕ್ಷ ವಿಜಯಕುಮಾರ ಹಿರೇಮಠ ಪಾಲ್ಗೊಂಡಿದ್ದರು.ಅಂಬಿಕಾ ಬಳಗಾರ, ಕಿರಣಕುಮಾರ ಚಲವಾದಿ, ತೇಜಸ್ವಿನಿ, ಭಾಗ್ಯ, ಪ್ರೇಮಾ ಲಮಾಣಿ, ಸಂತೋಷ ಹುಣಸೀಮರದ, ರಾಧಾ ಬೂಧಿಹಾಳ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿನಯ ಕುಪ್ಪಸ್ತ ಸ್ವಾಗತಿಸಿದರು. ಜಾಯ್ಸನ್ ಬಂಡಿ ನಿರೂಪಿಸಿದರು. ಪ್ರಿಯಾಂಕಾ ರಡ್ಡೇರ ವಂದಿಸಿದರು.