ಸಾರಾಂಶ
ಯಳಂದೂರು: ತಾಲೂಕಿನ ಯರಿಯೂರು ಗ್ರಾಮದ ವಾಲ್ಮೀಕಿ ಜ್ಞಾನವಿಕಾಸ ಕೇಂದ್ರದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷೆ ದೊಡ್ಡಮ್ಮ ಅಧ್ಯಕ್ಷತೆಯಲ್ಲಿ ತರಕಾರಿ ಬೀಜ ವಿತರಣೆ ಮಾಡಲಾಯಿತು. ಯೋಜನಾಧಿಕಾರಿ ಆನಂದ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಜ್ಞಾನವಿಕಾಸದಲ್ಲಿ ಹತ್ತು ಹಲವಾರು ಕ್ರಿಯಾತ್ಮಕ ಕಾರ್ಯಕ್ರಮಗಳಿವೆ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ರವಿಕಿರಣ್ ಮಾತನಾಡಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪೌಷ್ಟಿಕ ಆಹಾರ ಮುಖ್ಯ ಪಾತ್ರ ವಹಿಸುತ್ತದೆ. ದುಡ್ಡು ಕೊಟ್ಟು ಖರೀದಿಸುವ ತರಕಾರಿಯಲ್ಲಿ ಎಷ್ಟೋ ಕ್ರಿಮಿನಾಶಕಗಳ ಸಿಂಪಡಣೆ, ರಾಸಾಯಿನಿಕ ಗೊಬ್ಬರಗಳ ಬಳಕೆ ಮಾಡುತ್ತಿದ್ದು ಇದು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ನೋಡೆಲ್ ಅಧಿಕಾರಿ ರಾಜು ಮಾತನಾಡಿ, ನಮ್ಮ ಸಿಎಸ್ಸಿ ಕೇಂದ್ರದಲ್ಲಿ ಸಿಗುವ ಸೌಲಭ್ಯಗಳು, ಪೌಷ್ಟಿಕ ಆಹಾರಗಳ ಪ್ರಾಮುಖ್ಯತೆ ಕುರಿತು ತಿಳಿಸಿದರು.ಕೇಂದ್ರದ ಆಯ್ದ ಸದಸ್ಯರಿಗೆ ಬಿನ್ಸ್, ಮೂಲಂಗಿ, ಬೀಟ್ರೂಟ್, ಕ್ಯಾರೆಟ್, ಬೆಂಡೆ, ಕೊತಂಬರಿ ಸೊಪ್ಪು ಬೀಜಗಳನ್ನು ವಿತರಿಸಿ ಬಳಕೆ ಮಾಡುವ ಕ್ರಮ ಹಾಗೂ ಪರಿಶೀಲನೆ ಕುರಿತು ತಿಳಿಸಲಾಯಿತು. ಈ ಬೆಳೆಗೆ ಆಸಕ್ತಿ ನಿಲ್ಲಿಸದೆ ಮುಂದಕ್ಕೆ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಬೀಜ ಬಳಕೆ ಮಾಡಿ ಮುಂದಿನ ವರ್ಷಕ್ಕೂ ಮುಂದುವರೆಸುವಂತೆ ತಿಳಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷ ಪುಟ್ಟಸಿದ್ದಮ್ಮ, ಊರಿನ ಮುಖಂಡ ರಂಗಸ್ವಾಮಿನಾಯಕ, ವಲಯಮೇಲ್ವಿಚಾರಕ ಶಿವಶಂಕರ್, ತಾಲೂಕಿನ ಆಂತರಿಕ ಲೆಕ್ಕಪರಿಶೋಧಕ ಜಯಕೀರ್ತಿ, ಸಮನ್ವಯ ಅಧಿಕಾರಿ ವಿನುತಾ, ಸೇವಾಪ್ರತಿನಿಧಿ ಮಹಾದೇವಮ್ಮ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.