ಹಿರೇಕೆರೂರು:ಮುಸ್ಲಿಮರ ರಂಜಾನ್‌, ಹಿಂದೂಗಳ ಯುಗಾದಿ ಹಬ್ಬ ಅಚರಣೆ ಸೌಹಾರ್ದದ ಸಂಕೇತವಾಗಿದೆ. ನಾಡಿನಲ್ಲಿ ಇರುವ ನಾವೆಲ್ಲರೂ ಒಂದಾಗಿ ಬಾಳುವ ಮೂಲಕ ದೇಶದ ಅಭಿವೃದ್ಧಿ ಕೈ ಜೋಡಿಸಬೇಕಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಹೇಳಿದರು.ತಾಲೂಕಿನ ಬಾಳಂಬೀಡ ಗ್ರಾಮದ ಅವರ ಗೃಹ ಕಚೇರಿಯಲ್ಲಿ ರಂಜಾನ್ ಹಬ್ಬದ ನಿಮಿತ್ತ ಏರ್ಪಡಿಸಿದ್ದ ಇಫ್ತಿಯಾರ್ ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲ ಧರ್ಮಿಯರು ಶಾಂತಿಯ ತೋಟವಾದ ನಮ್ಮ ದೇಶ ಜಗತ್ತಿನಲ್ಲಿ ಭದ್ರತೆ. ಶಾಂತಿ ಸುವ್ಯವಸ್ಥೆ, ನೆಮ್ಮದಿಯ ಜೀವನಕ್ಕೆ ಹೆಸರು ವಾಸಿಯಾಗಿದೆ. ಇದರ ವಿರುದ್ಧ ಷಡ್ಯಂತ್ರ ರೂಪಿಸುವವರಿಗೆ ಎಲ್ಲರೂ ಒಂದಾಗಿ ತಕ್ಕ ಪಾಠ ಕಲಿಸಬೇಕು. ರಂಜಾನ್ ಹಾಗೂ ಯುಗಾದಿ ಎಲ್ಲರಿಗೂ ಒಳಿತನ್ನು ಮಾಡಲಿ ಎಂದರು.ಈ ವೇಳೆ ಅಂಜಮನ್ ಕಮಿಟಿ ಅಧ್ಯಕ್ಷೆ ಅಲ್ತಾಫಖಾನ್ ಪಠಾಣ, ಮಾಜಿ ಅಧ್ಯಕ್ಷರಾದ ಜೀಲನಿ ಬಳಿಗಾರ, ಜಾಕಿರ್ ರಿಕಾರ್ಟಿ, ಪಪಂ ಮಾಜಿ ಸದಸ್ಯ ಮಹ್ಮದಹುಸೇನಸಾಬ ವಡ್ಡಿನಕ್ಕಟ್ಟಿ, ಮಲ್ಲಿಕ್ ರೇಹಾನ್ ಹಾಗೂ ಮುಸ್ಲಿಂ ಸಮಾಜದವರು ಇದ್ದರು.