ಸಾರಾಂಶ
ಶಾಲೆಯ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂದು ಕಾರ್ಯಾಗಾರವನ್ನು ಏರ್ಪಡಿಸಿಕೊಡಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಜಿಲ್ಲೆ 255 (ಎಸ್) ಮೈಸೂರಿನ ಸ್ಥಳೀಯ ಕ್ಲಬ್ ಗಳ 2024- 25ನೇ ಸಾಲಿನ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವು ನಗರದ ಹೊಟೇಲ್ ಲೀ ರುಚಿಯಲ್ಲಿ ಯಶಸ್ವಿಯಾಗಿ ಜರುಗಿತು.ಈ ತರಬೇತಿಯಲ್ಲಿ ಮೈಸೂರು ಜಿಲ್ಲೆಯ ವ್ಯಾಪ್ತಿಗೆ ಸೇರಿದ 35 ಕ್ಲಬ್ ನ ಸುಮಾರು 100 ಮಂದಿ ಅಲಯನ್ಸ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ತರಬೇತಿ ಉದ್ಘಾಟಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್.ಟಿ. ಜವರೇಗೌಡ ಮಾತನಾಡಿ, ಅಲಯನ್ಸ್ ಸಂಸ್ಥೆಗಳು ಸೇವಾ ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಶಾಲೆಯ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂದು ಕಾರ್ಯಾಗಾರವನ್ನು ಏರ್ಪಡಿಸಿಕೊಡಬೇಕು ಎಂದು ಮನವಿ ಮಾಡಿದರು.ಮೌಂಟ್ ಎವೆರೆಸ್ಟ್ ಶಿಖರವನ್ನೇರಿದ ಮೊದಲ ಮೈಸೂರಿನ ಹೆಮ್ಮೆಯ ಮಹಿಳೆ ಡಾ. ಉಷಾ ಹೆಗ್ಡೆ ಮಾತನಾಡಿ, ಎಲ್ಲರೂ ತಮ್ಮ ತಮ್ಮ ದೇಹದ ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳಬೇಕು ಮತ್ತು ಅದಕ್ಕೆ ನಿಯಮಿತವಾದ ವ್ಯಾಯಾಮಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಅಲಯನ್ಸ್ ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ್ ಬೈರಿ, ಕಲ್ಹಗಡ್, ನವೀನ ಶೆಟ್ಟಿಗಾರ್ ತರಬೇತಿ ನೀಡಿದರು.ಜಿಲ್ಲಾ ರಾಜ್ಯಪಾಲ ಬಾಲಕೃಷ್ಣರಾಜು, ಉಪ ರಾಜ್ಯಪಾಲ ವೆಂಕಟೇಶ್, ಮಹಾಬಲೇಶ್ವರ ಬೈರಿ, ಸಂತೋಷ್ ಕುಮಾರ್, ಶ್ರೀಶೈಲ, ಕೃಷ್ಣೋಜಿರಾವ್, ಬೆಟ್ಟೇಗೌಡ ಮೊದಲಾದವರು ಇದ್ದರು.