ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಪರವಾನಗಿ ರಿನಿವಲ್ ಮಾಡಿಸದೆ ನಡೆಸುತ್ತಿರುವ ಆಸ್ಪತ್ರೆ, ಅನಧಿಕೃತ ಆಸ್ಪತ್ರೆಗಳು, ಪರಿಣಿತಿ ಇಲ್ಲದೆ ನಡೆಸುತ್ತಿರುವ ಆಸ್ಪತ್ರೆಗಳ ಮೇಲೆ ತಹಸೀಲ್ದಾರ ಸಂಜೀವಕುಮಾರ ದಾಸರ್, ಟಿಎಚ್ಒ ಡಾ. ರವಿ ಬಿರಾದಾರ, ಆಯೂಷ್ ವೈದ್ಯಾಧಿಕಾರಿ ಡಾ. ಶ್ರೀಶೈಲ್ ಪಾಟೀಲ್ ದಾಳಿ ನಡೆಸಿದ ಘಟನೆ ಮಂಗಳವಾರ ನಡೆದಿದೆ.ಅಫಜಲ್ಪುರ ಪಟ್ಟಣದಲ್ಲಿರುವ ಖಾಸಗಿ ಆಸ್ಪತ್ರೆಗಳ ಮೇಲೆ ಕಂದಾಯ, ಆರೋಗ್ಯ, ಆಯುಷ್ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು ಪರವಾನಗಿ ಪಡೆಯುದೆ ಅನಧಿಕೃತವಾಗಿ ನಡೆಸುತ್ತಿದ್ದ ಮೂರು ಖಾಸಗಿ ಆಸ್ಪತ್ರೆಗಳಿಗೆ ಬೀಗ ಜಡಿಯಲಾಗಿದೆ. ಈ ಕುರಿತು ತಹಸೀಲ್ದಾರ ಸಂಜೀವಕುಮಾರ ದಾಸರ್ ಮಾಹಿತಿ ನೀಡಿದ್ದು ಕಳೆದ 6 ತಿಂಗಳ ಹಿಂದೆ ಎಲ್ಲಾ ಖಾಸಗಿ ಆಸ್ಪತ್ರೆಯವರಿಗೆ ನೋಟಿಸ್ ನೀಡಲಾಗಿತ್ತು. ಪರವಾನಗಿ ರಿನಿವಲ್, ಪರಿಣಿತಿ ಪಡೆದ ವಿಭಾಗದಲ್ಲೇ ವೈದ್ಯರು ಆಸ್ಪತ್ರೆಗಳನ್ನು ನಡೆಸತಕ್ಕದ್ದು, ವೈದ್ಯರು ಯಾವ ರೋಗಕ್ಕೆ ಚಿಕಿತ್ಸೆ ನೀಡುತ್ತಾರೆ ಅದಕ್ಕೆ ಸಂಬಂಧ ಪಟ್ಟ ಔಷಧಿಗಳನ್ನು ಮಾತ್ರ ಮೆಡಿಕಲ್ಗಳಲ್ಲಿ ಮಾರಾಟ ಮಾಡಬೇಕೆನ್ನುವ ನಿಯಮಗಳಿರುವ ನೊಟೀಸ್ಗೆ ಬಹಳಷ್ಟು ಕಡೆ ಸರಿಯಾಗಿ ಸ್ಪಂದನೆ ಬಾರದ ಹಿನ್ನೆಲೆ ದಾಳಿ ನಡೆಸಲಾಗಿದ್ದು ಅಫಜಲ್ಪುರ ಪಟ್ಟಣದಲ್ಲಿ ಸುಮಾರು 19 ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದು ಈ ಪೈಕಿ 3 ಆಸ್ಪತ್ರೆಗಳನ್ನು ಪರವಾನಗಿ ಇಲ್ಲದ ಹಿನ್ನೆಲೆ ಬೀಗ ಹಾಕಲಾಗಿದೆ. ಉಳಿದ ಕಡೆ ಪರವಾನಗಿ ರಿನಿವಲ್ ಮಾಡಿಸುವಂತೆ ತಾಕೀತು ಮಾಡಲಾಗಿದೆ ಎಂದ ಅವರು ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ಅನಧಿಕೃತ ಆಸ್ಪತ್ರೆ ನಡೆಸುತ್ತಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ ಎಂದರು.
ಗ್ರಾಮ, ನಗರ ಪ್ರದೇಶ ಎಲ್ಲಿಯಾದರೂ ಅನಧಿಕೃತವಾಗಿ ಖಾಸಗಿ ಆಸ್ಪತ್ರೆ ತೆರೆದಿರುವುದು, ಪರಿಣಿತಿ ಪಡೆಯದೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವುದು ಕಂಡು ಬಂದಲ್ಲಿ ಅಂತವುಗಳಿಂದ ಸಾರ್ವಜನಿಕ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸ್ಐ ಸಿದ್ದೇಶ್ವರ ಗೆರಡೆ ಸೇರಿದಂತೆ ಕಂದಾಯ, ಪೊಲೀಸ್, ಆರೋಗ್ಯ, ಆಯುಷ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.