ಮದ್ದೂರು ತಾಲೂಕಿನ ಸಬ್ಬನಹಳ್ಳಿಯಲ್ಲಿ ವಿದ್ಯುತ್ ಟ್ರಾನ್ಸ್ ಫಾರಂ ಅಳವಡಿಸಿದ ನಂತರ ಅನ್ಯ ವ್ಯಕ್ತಿಗಳು ಅಕ್ರಮವಾಗಿ ವಿದ್ಯುತ್ ಸರಬರಾಜು ಮಾಡಿಕೊಳ್ಳುತ್ತಿರುವ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದೆ ಕರ್ತವ್ಯ ಲೋಪ ಎಸಗಿದ ಬೆಸ್ಕಾಂ ಅಧಿಕಾರಿಗಳನ್ನು ಜೈಲಿಗೆ ಹಾಕಿದರೆ ಮಾತ್ರ ಇವರಿಗೆ ಬುದ್ಧಿ ಬರುತ್ತದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಸಿ.ಎ.ಕೆರೆ ಹೋಬಳಿ ಕಾರ್ಕಳ್ಳಿಯಲ್ಲಿ ಅಂದಿನ ಮೈಸೂರು ಸಂಸ್ಥಾನದ ಮಹಾರಾಜರ ವಂಶಸ್ಥರು ದಾನವಾಗಿ ನೀಡಿದ್ದ ಜಮೀನಿನ ಖಾತೆ ಮಾಡದೇ ವಿಳಂಬ ಮಾಡಿದ ಕಂದಾಯ ಇಲಾಖೆ ಅಧಿಕಾರಿಗಳನ್ನು ಜೈಲುಗಟ್ಟುವುದಾಗಿ ಉಪ ಲೋಕಾಯುಕ್ತ ವೀರಪ್ಪ ಎಚ್ಚರಿಕೆ ನೀಡಿದರು. ಕಾರ್ಕಳ್ಳಿಯಲ್ಲಿರುವ ಸರ್ವೇ ನಂಬರ್ 920 ಜಮೀನನ್ನು 1955ರಲ್ಲಿ ಮೈಸೂರು ಅರಸರು ದಾನವಾಗಿ ನೀಡಿದ್ದರು. ಆದರೆ, ಸಂಬಂಧಿಸಿದವರಿಗೆ ಖಾತೆ ಮಾಡದೆ ವಿಳಂಬ ಮಾಡಿದ್ದೀರಿ. ಅಲ್ಲದೇ, ಈ ವಿವಾದದ ಬಗ್ಗೆ ನ್ಯಾಯಾಲಯಕ್ಕೂ ಸರಿಯಾದ ಮಾಹಿತಿ ನೀಡದಿರುವ ನಿಮ್ಮನ್ನು ಜೈಲಿಗೆ ಕಳಿಸುವುದಾಗಿ ಉಪ ವಿಭಾಗಾಧಿಕಾರಿ ಶಿವಮೂರ್ತಿ ಮತ್ತು ತಹಸೀಲ್ದಾರ್ ಡಾ. ಶಿವಕುಮಾರ ಬಿರಾದಾರ ಅವರಿಗೆ ಎಚ್ಚರಿಕೆ ನೀಡಿದರು.

ಜೈಲಿಗೆ ಹಾಕಿದರೆ ಬುದ್ಧಿ ಬರುತ್ತದೆ:

ತಾಲೂಕಿನ ಸಬ್ಬನಹಳ್ಳಿಯಲ್ಲಿ ವಿದ್ಯುತ್ ಟ್ರಾನ್ಸ್ ಫಾರಂ ಅಳವಡಿಸಿದ ನಂತರ ಅನ್ಯ ವ್ಯಕ್ತಿಗಳು ಅಕ್ರಮವಾಗಿ ವಿದ್ಯುತ್ ಸರಬರಾಜು ಮಾಡಿಕೊಳ್ಳುತ್ತಿರುವ ದೂರಿನ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದೆ ಕರ್ತವ್ಯ ಲೋಪ ಎಸಗಿದ ಬೆಸ್ಕಾಂ ಅಧಿಕಾರಿಗಳನ್ನು ಜೈಲಿಗೆ ಹಾಕಿದರೆ ಮಾತ್ರ ಇವರಿಗೆ ಬುದ್ಧಿ ಬರುತ್ತದೆ ಎಂದು ಉಪಲೋಕಾಯುಕ್ತ ವೀರಪ್ಪ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಬಗ್ಗೆ ಅಮ್ಮ ಗಮನದಲ್ಲಿದ್ದರೂ ಸಹ ವ್ಯಕ್ತಿ ವಿರುದ್ಧ ಯಾವುದೇ ಕ್ರಮ ಕೊಂಡಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಚೆಸ್ಕಾಂನ ಎಇಇ ಶಿವಕುಮಾರ್ ಹಾಗೂ ಎಇ ಮಹದೇವ್ ಅವರುಗಳನ್ನು ದೂರುದಾರರ ಎದುರೇ ಉಪಲೋಕಾಯುಕ್ತ ವೀರಪ್ಪ ತರಾಟೆಗೆ ತೆಗೆದುಕೊಂಡು ಇಂತಹ ಕೆಟ್ಟ ವ್ಯವಸ್ಥೆ ಸರಿ ಹೋಗಬೇಕಾದರೆ ಮೊದಲು ನಿಮ್ಮನ್ನು ಜೈಲಿಗೆ ಹಾಕಬೇಕು ಆಗ ಎಲ್ಲವೂ ಸರಿ ಹೋಗುತ್ತದೆ ಎಂದು ಕಿಡಿಕಾರಿದರು.ಪುರಸಭೆ ಮಾಜಿ ಸದಸ್ಯನ ಮನೆ ನೆಲಸಮಗೊಳಿಸಲು ಆದೇಶ

ಮದ್ದೂರು: ಪಟ್ಟಣದ ಲೀಲಾವತಿ ಬಡಾವಣೆಯಲ್ಲಿ ಪುರಸಭೆ ಮಾಜಿ ಸದಸ್ಯರು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಯನ್ನು ನೆಲಸಮಗೊಳಿಸಲು ಉಪ ಲೋಕಾಯುಕ್ತ ವೀರಪ್ಪ ಗುರುವಾರ ಆದೇಶ ಹೊರಡಿಸಿದರು.

ಪುರಸಭೆ ಮಾಜಿ ಸದಸ್ಯೆ ಪ್ರಮೀಳಾ ಅವರು ಪುರಸಭೆಗೆ ಸೇರಿದ ನಿವೇಶನದಲ್ಲಿ ಮನೆ ಮತ್ತು ಶೌಚಾಲಯ ನಿರ್ಮಿಸಿಕೊಂಡಿದ್ದರು. ಇದರಿಂದ ರಸ್ತೆ ಮತ್ತು ಚರಂಡಿ ನಿರ್ಮಿಸಲು ತೊಂದರೆಯಾಗಿತ್ತು.

ಈ ಬಗ್ಗೆ ಪುರಸಭೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು ಮಾಜಿ ಸದಸ್ಯೆ ಕ್ಯಾರೆ ಎನ್ನಲಿಲ್ಲ. ಈ ಬಗ್ಗೆ ಈಕೆಯ ಮನೆ ಎದುರಿನ ಸುರೇಶ್ ಅವರು ರಸ್ತೆಗೆ ಮೂಲ ಸೌಲಭ್ಯ ಕಲ್ಪಿಸಲು ತೊಂದರೆಯಾಗುತ್ತಿದೆ ಎಂದು ದಾಖಲೆ ಸಮೇತ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಈ ಬಗ್ಗೆ ನಗರಸಭೆ ಅಧಿಕಾರಿಗಳು ಹಾಗೂ ದೂರುದಾರರ ವಿಚಾರಣೆ ನಡೆಸಿದ ಉಪಲೋಕಾಯುಕ್ತ ವೀರಪ್ಪ ಒಂದು ತಿಂಗಳೊಳಗೆ ಪ್ರಮೀಳ ನಿರ್ಮಿಸಿರುವ ಮನೆಯನ್ನು ನೆಲಸಮ ಮಾಡಿ ವರದಿ ನೀಡುವಂತೆ ಪೌರಾಯುಕ್ತೆ ರಾಧಿಕಾ ಅವರಿಗೆ ಸೂಚನೆ ನೀಡಿದರು.

ಅಹವಾಲು ಸ್ವೀಕಾರದ ವೇಳೆ ಕೈ ಕೊಟ್ಟ ವಿದ್ಯುತ್

ಮದ್ದೂರು: ಸಾರ್ವಜನಿಕ ಅಹವಾಲು ಅಲಿಸುವ ವೇಳೆ ಇದ್ದಕ್ಕಿದ್ದಂತೆ ವಿದ್ಯುತ್ ಕೈ ಕೊಟ್ಟ ಕಾರಣ ಉಪಲೋಕಾಯುಕ್ತ ವೀರಪ್ಪ ಕಸಿವಿಸಿಗೊಂಡ ಘಟನೆ ಜರುಗಿತು.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಲೋಕಾಯುಕ್ತದಲ್ಲಿ ದಾಖಲಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದರು.

ಈ ವೇಳೆ ಕೆಲಕಾಲವಿದ್ಯುತ್ ಸ್ಥಗಿತಗೊಂಡು ಉಪಲೋಕಾಯುಕ್ತರು ಕಸಿವಿಸಿಗೊಂಡರು. ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಕಲ್ಯಾಣ ಮಂಟಪದಲ್ಲಿದ್ದ ಜನರೇಟರ್ ಚಾಲನೆ ಮಾಡಿಸಿದರು. ನಂತರ ಚೆಸ್ಕಾಂ ಅಧಿಕಾರಿಗಳು ವಿದ್ಯುತ್ ವಿತರಣಾ ಕೇಂದ್ರಕ್ಕೆ ದೂರವಾಣಿ ಕರೆ ಮಾಡಿ ಸಂಪರ್ಕ ಕಲ್ಪಿಸಿದರು.