ಕೃಷಿ ಪರಿಕರ ಮಾರಾಟ ಮಳಿಗೆಗೆ ಅಧಿಕಾರಿಗಳ ದಿಢೀರ್‌ ಭೇಟಿ

| Published : May 24 2025, 12:07 AM IST

ಕೃಷಿ ಪರಿಕರ ಮಾರಾಟ ಮಳಿಗೆಗೆ ಅಧಿಕಾರಿಗಳ ದಿಢೀರ್‌ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹೂವಿನಹಡಗಲಿ ತಾಲೂಕಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಉಪ ಕೃಷಿ ನಿರ್ದೇಶಕ ನಯೀಮ್‌ ಪಾಷಾ ಹಾಗೂ ಸಹಾಯಕ ಕೃಷಿ ನಿರ್ದೇಶಕ ಮೊಹಮ್ಮದ್ ಅಶ್ರಫ್ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದರು.

ಹೂವಿನಹಡಗಲಿ: ಇಲ್ಲಿನ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಅಧಿಕಾರಿಗಳು ದಿಢೀರ್‌ ಭೇಟಿ ಪರಿಶೀಲನೆ ವೇಳೆ, ಕೆಲವು ಅಕ್ರಮ ಬೀಜ ಮಾರಾಟ ಮಾಡಿರುವುದು ಗಮನಕ್ಕೆ ಬಂದಿದೆ. ಜತೆಗೆ ವಿವಿಧ ದಾಖಲೆಗಳು ಮತ್ತು ನಾಮಫಲಕ ಇಲ್ಲದ, 11 ಅಂಗಡಿಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ ಎಂದು ಉಪ ಕೃಷಿ ನಿರ್ದೇಶಕ ನಯೀಮ್‌ ಪಾಷಾ ಹೇಳಿದರು.

ತಾಲೂಕಿನಲ್ಲಿರುವ ಕೃಷಿ ಪರಿಕರ ಮಾರಾಟ ಮಳಿಗೆಗೆ ಭೇಟಿ ನೀಡಿದ್ದ ಅವರು, 2025-26ನೇ ಸಾಲಿನ ಮುಂಗಾರು ಹಂಗಾಮು ಚುರುಕುಗೊಂಡಿದ್ದು, ಕೃಷಿ ಪರಿಕರಗಳ ಕುರಿತು ಜಾಗೃತಿ ಮೂಡಿಸಲು ಬಂದಿದ್ದ ಕೃಷಿ ಅಧಿಕಾರಿಗಳ ತಂಡದಲ್ಲಿ ಕೃಷಿ ಇಲಾಖೆಯ ಉಪ ಕೃಷಿ ನಿರ್ದೇಶಕ ನಯೀಮ್‌ ಪಾಷಾ, ಸಹಾಯಕ ಕೃಷಿ ನಿರ್ದೇಶಕ ಎಚ್. ನಾಗರಾಜ್, ಮೊಹಮ್ಮದ್ ಅಶ್ರಫ್‌ ನೇತೃತ್ವದಲ್ಲಿ ಕೃಷಿ ಅಧಿಕಾರಿಗಳ ತಂಡವು ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಆನಂತರದಲ್ಲಿ ಮಾತನಾಡಿದ ಅವರು, ಮುಂಗಾರು ಬಿತ್ತನೆ ಚಟುವಟಿಕೆ ಜೋರಾಗಿದೆ. ಇದರಿಂದ ರಸಗೊಬ್ಬರಕ ಬೇಡಿಕೆ ಇದ್ದು, ಇದನ್ನೇ ಬಂಡವಾಳವಾಗಿಸಿಕೊಳ್ಳುವ ನಿಟ್ಟಿನಲ್ಲಿ ಮಾರಾಟಗಾರರು ರಸಗೊಬ್ಬರ ಅಕ್ರಮ ದಾಸ್ತಾನು ಮಾಡಿಕೊಳ್ಳುವುದು. ಹೆಚ್ಚಿನ ಬೆಲೆ ಮಾರಾಟ ಮಾಡುವ ದೂರು ಬಂದರೆ ಅಂತಹ ಮಾರಾಟಗಾರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಂಗಡಿಗಳಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ದಾಸ್ತಾನು ಮತ್ತು ಮಾರಾಟ ದರದ ಫಲಕ ಕಡ್ಡಾಯವಾಗಿ ಹಾಕಬೇಕು. ನಿಷೇಧಿತ ಮತ್ತು ಅವಧಿ ಮೀರಿದ ಬಿತ್ತನೆ ಬೀಜ, ಕೀಟನಾಶಕ ಮಾರಾಟ ಮಾಡಬಾರದು. ರೈತರಿಗೆ ಕಡ್ಡಾಯವಾಗಿ ಜಿಎಸ್‌ಟಿ ಬಿಲ್ ನೀಡಬೇಕು. ಹೆಚ್ಚಿನ ಲಾಭದ ಆಸೆಗೆ ಸರ್ಕಾರ ನಿತಯಮಾವಳಿ ಮೀರಿದ್ದು ಕಂಡುಬಂದಲ್ಲಿ ಅಂತಹ ಮಾರಾಟಗಾರರ ಪರವಾನನಿ ರದ್ದುಪಡಿಸುವ ಜತೆಗೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಸಹಾಯಕ ಕೃಷಿ ನಿರ್ದೇಶಕ ಮೊಹಮ್ಮದ್ ಅಶ್ರಫ್ ಮಾತನಾಡಿ, ಎಲ್ಲ ಕಡೆಗೂ ಡಿಎಪಿ ರಸಗೊಬ್ಬರ ಲಭ್ಯತೆ ಕಡಿಮೆಯಾಗಿದೆ. ಇದಕ್ಕೆ ಪರ್ಯಾಯವಾಗಿ ಇತರೆ ಸಂಯುಕ್ತ (20-20-0-13, 10-26-26 ಹಾಗೂ ಇತರ) ರಸಗೊಬ್ಬರ ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವುದು ಕಂಡುಬಂದಲ್ಲಿ ಅವರ ಮಾರಾಟ ಪರವಾನಗಿ ರದ್ದುಪಡಿಸುವ ಜತೆಗೆ, ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕೃಷಿ ಅಧಿಕಾರಿಗಳಾದ ಮಂಜುನಾಥ ಲಮಾಣಿ, ಕಿರಣಕುಮಾರ್‌ ಇತರರಿದ್ದರು.