ಸಾರಾಂಶ
ಕನ್ನಡಪ್ರಭ ವಾರ್ತೆ ಭಾರತೀನಗರ
ಭಾರತೀ ವಿದ್ಯಾ ಸಂಸ್ಥೆಯಲ್ಲಿ ಹಲವು ದಶಕಗಳಿಂದ ಅಕ್ಷರ ಕಲಿತು ವಿವಿಧ ಹುದ್ದೆಗಳಲ್ಲಿರುವ ಹಳೇ ವಿದ್ಯಾರ್ಥಿಗಳು, ಗುರುಗಳ ಸಮ್ಮಿಲನ ಸಂಭ್ರಮದಿಂದ ನಡೆಯಿತು.ಬೆಂಗಳೂರಿನ ಕನಕಪುರ ರಸ್ತೆಯ ಕಗ್ಗಲೀಪುರ ಗ್ರಾಮದ ಬಳಿ ಇರುವ ದಿ.ಡೈಮೆಂಡ್ ಪೆವಿಲಿಯನ್ ರೆಸಾರ್ಟ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮಗೆ ಅಕ್ಷರ ಕಲಿಸಿದ ಪ್ರೀತಿಯ ಗುರುಗಳಿಗೆ ಹಿರಿಯ ವಿದ್ಯಾರ್ಥಿಗಳು ಗುರುವಂದನೆ ಹಾಗೂ ಕೃತಜ್ಞತೆ ಸಲ್ಲಿಸಿದರು.
ಓದು ಮುಗಿಸಿ ವಿವಿಧೆಡೆ ಉದ್ಯೋಗದಲ್ಲಿರುವ 1975 ರಿಂದ 2010 ರವರೆಗೆ ವಿದ್ಯಾಭ್ಯಾಸ ಮಾಡಿದ ಸುಮಾರು 500ಕ್ಕೂ ಹೆಚ್ಚು ಹಿರಿಯ ವಿದ್ಯಾರ್ಥಿಗಳು, ಗುರುಗಳು ಗುರುಶಿಷ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು.ನಾಲ್ಕೈದು ದಶಕಗಳ ಬಳಿಕ ಒಬ್ಬರನ್ನೊಬ್ಬರು ನೋಡಿ ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿದರು. ಸೆಲ್ಫಿ ಸಂಭ್ರಮದಲ್ಲಿ ಮುಳುಗೆದ್ದರು.
ಕಾಲೇಜಿನಲ್ಲಿ ತಮ್ಮ ಚಿಣ್ಣಾಟ, ತುಂಟಾಟಗಳು, ಓದಿನ ರಸಘಳಿಗೆಯನ್ನು ನೆನಪಿಸಿಕೊಂಡು ಭಾವಪರವಶರಾದರು. ತಮ್ಮ ಕಾಲೇಜಿನ ದಿನಗಳ ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕಿದರು. ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಿದರು. ವಿದ್ಯಾರ್ಥಿಗಳ ಪ್ರೀತಿ, ಅಭಿಮಾನವನ್ನು ಕಂಡು ಹಲವು ಗುರುಗಳು ಆನಂದದಿಂದ ಕಣ್ಣೀರಿಟ್ಟರು.ಕರ್ನಾಟಕದ ವಿವಿಧೆಡೆ ನೆಲೆಗೊಂಡಿರುವವರು ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಬದುಕು ರೂಪಿಸಿಕೊಂಡಿರುವ ಭಾರತೀ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ತಮ್ಮ ಹುದ್ದೆಗಳನ್ನೇ ಬದಿಗಿಟ್ಟು ಸಾಮಾನ್ಯ ವಿದ್ಯಾರ್ಥಿಯಂತೆ ಭಾವಿಸಿ ಓಡಾಡುತ್ತಿದ್ದಂತಹದ್ದು ಕಂಡುಬಂದಿತು. ಭಾರತೀ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದವರು ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಗುರುಗಳು, ಹಿರಿಯ ಪ್ರೀತಿಯ ವಿದ್ಯಾರ್ಥಿಗಳ ಆತಿಥ್ಯ ಸ್ವೀಕರಿಸಿ ತವರಿನ ಸಂಭ್ರಮ ಅನುಭವಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಗುರುಗಳನ್ನು ಮುಖ್ಯ ದ್ವಾರದಿಂದಲೇ ಹೂ ಸುರಿಮಳೆಯೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಬಳಿಕ ನಡೆದ ವೇದಿಕೆ ಸಮಾರಂಭವನ್ನು ನಿವೃತ್ತ ಹಿರಿಯ ಪ್ರಾಧ್ಯಾಪಕ ಡಾ.ಸಿ.ಪಿ.ನಾಗರಾಜು ಉದ್ಘಾಟಿಸಿದರು.ನಿವೃತ್ತ ಪ್ರಾಂಶುಪಾಲ ಡಾ.ಟಿ.ಹನುಮಪ್ಪ, ಪ್ರೊ.ಎಂ.ವೆಂಕಟರೆಡ್ಡಿ, ಕೆ.ಪುಟ್ಟಲಿಂಗಯ್ಯ, ನಿವೃತ್ತಿ ಕನ್ನಡ ಪ್ರಾಧ್ಯಾಪಕರಾದ ಡಾ.ಸಿ.ಪಿ.ನಾಗರಾಜು, ಎಚ್.ಪಿ. ಬಸಪ್ಪ, ಸಿ.ಚನ್ನಯ್ಯ, ಪುಟ್ಟಲಿಂಗಯ್ಯ, ಡಾ.ಗೀತಾಕುಮಾರಿ, ಮಾ.ರಾಮಕೃಷ್ಣ, ದೊರೆಸ್ವಾಮಿ. ಡಾ.ಡಿ.ಚನ್ನೇಗೌಡ ಸೇರಿದಂತೆ ಹಲವರು ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿದರು.
ಐಪಿಎಸ್ ಅಧಿಕಾರಿ ಡಾ.ಎ.ಎನ್.ಪ್ರಕಾಶ್ಗೌಡ ಸ್ವಾಗತ ಭಾಷಣ ಮಾಡಿದರು. ಆರ್.ಜೆ.ನಂಜುಂಡಸ್ವಾಮಿ ಪ್ರಾಸ್ತಾವಿಕ ನುಡಿ ಮಾಡಿದರು. ಹಿರಿಯ ವಿದ್ಯಾರ್ಥಿಗಳಾದ ಡಾ.ಬೆಳ್ಳೂರು ಕೃಷ್ಣ, ಡಾ.ನವೀನ್ಕುಮಾರ್, ವಕೀಲ ಬೊಮ್ಮೇಗೌಡ, ಸೂನಗನಹಳ್ಳಿ ವಕೀಲ ರಾಜು, ಇನ್ಸ್ಪೆಕ್ಟರ್ ಸತೀಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಭಾರತೀ ಎಜುಕೇಷನ್ ಟ್ರಸ್ಟ್ನ ಅಧ್ಯಕ್ಷ ಮಧು ಜಿ.ಮಾದೇಗೌಡ, ಸಿಇಒ ಆಶಯ್ಮಧು ಅವರನ್ನು ಸಹ ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿ ಗೌರವಿಸಿದರು. ನಿವೃತ್ತ ಉಪಕುಲಪತಿ ಡಾ.ಎನ್.ಎ.ರಾಮೇಗೌಡ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ ಅಗಲಿದ ಗುರು ಹಿರಿಯರಾದ ಭಾರತೀ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಜಿ.ಮಾದೇಗೌಡರು, ಸಂಸ್ಥಾಪಕ ಕಾರ್ಯದರ್ಶಿ ಅಣ್ಣೂರು ಸಿದ್ದೇಗೌಡ, ಪ್ರಾಧ್ಯಾಪಕರಾದ ವಿ.ಆರ್.ಅನಂತನ್, ಬಿಳೀಗೌಡ, ಹೊನ್ನಾಯಕನಹಳ್ಳಿ ರೇವಣ್ಣ, ಎಂ.ಟಿ.ಪುಟ್ಟಸ್ವಾಮಿ, ಸಿದ್ದಪ್ಪಾಜಿ, ಎಂ.ವಿ.ನಾಗರಾಜು, ವೆಂಕಟೇಶ್, ಗ್ರಂಥಪಾಲಕ ಸಿದ್ದರಾಮೇಗೌಡ ಅವರಿಗೆ ಶ್ರದ್ಧಾಂಜಲಿ ಸಭೆ ನಡೆಸಿದರು.