ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಸಂಘ, ಪಟೇಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಲ್ಕನೇ ವರ್ಷದ ವೀರಯೋಧ ಅರ್.ಲೋಕೇಶ್ ಪಟೇಲ್ ಸ್ಮರಣಾರ್ಥ ವಿದ್ಯಾರ್ಥಿ ಪುರಸ್ಕಾರ, ನಿಂಗಮ್ಮ ಪಟೇಲರ ಜೋಗಿಗೌಡ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭ ಸೆ.೧೩ರಂದು ಸಂಜೆ ೫ ಗಂಟೆಗೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸಂಘದ ನಿರ್ದೇಶಕ ಕೆ.ಜಯರಾಂ ಹೇಳಿದರು.

ದಿವ್ಯಸಾನ್ನಿಧ್ಯವನ್ನು ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಕೊಮ್ಮೇರಹಳ್ಳಿ ವಿಶ್ವಮಾನವ ಶಾಖಾಮಠದ ಪುರುಷೋತ್ತಮಾನಂದನಾಥ ಸ್ವಾಮೀಜಿ ವಹಿಸುವರು ಎಂದು ಬುಧೇವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಅರಕಲಗೂಡು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ವಿದ್ಯಾರ್ಥಿ ಪುರಸ್ಕಾರ, ಕೃಷಿ ಪ್ರಶಸ್ತಿ ಪ್ರದಾನ ಮಾಡುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸುವರು. ನಾಗಮಂಗಲ ತಾಲೂಕು ತಟ್ಟಹಳ್ಲಿ ಗ್ರಾಮದ ಜ್ಯೋತಿ ಟಿ.ಕೆ.ಶಿವರಾಮು ಕೃಷಿ ಪ್ರಶಸ್ತಿಗೆ ಭಾಜರಾಗಿದ್ದಾರೆ. ಪ್ರಶಸ್ತಿಯು ೨೫ ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದರು.

ವಿದ್ಯಾರ್ಥಿ ನಗದು ಪುರಸ್ಕಾರಕ್ಕೆ ಮೈಸೂರಿನ ಸರ್ಕಾರಿ ವೈದ್ಯಕೀಯ ಸಂಸ್ಥೆ ವಿದ್ಯಾರ್ಥಿ ಭಗವಂತ್ರಾಯ ಕಲ್ಲೂರ, ಕೆ.ಆರ್.ಪೇಟೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಶಂಕರ ಬಳಗಾನೂರು, ಹಾಸನದ ಪಶುವೈದ್ಯಕೀಯ ವಿದ್ಯಾರ್ಥಿನಿ ಎಂ.ವಿ.ಜನನಿ, ಬೆಂಗಳೂರಿನ ದಂತ ವೈದ್ಯಕೀಯ ವಿದ್ಯಾರ್ಥಿ ಡಿ.ಎಸ್.ರಾಹುಲ್, ಮಂಡ್ಯ ವಿ.ಸಿ.ಫಾರಂ ಕೃಷಿ ವಿಜ್ಞಾನ ವಿದ್ಯಾರ್ಥಿನಿ ತಾಜುದ್ದೀನ್, ಮೈಸೂರಿನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಸುಶ್ಮಿತಾ ಅವರಿಗೆ ತಲಾ ೨೫ ಸಾವಿರ ರು. ನೀಡಲಾಗುವುದು ಎಂದು ನುಡಿದರು.


ದೊಡ್ಡ ಗರುಡನಹಳ್ಳಿ ಗ್ರಾಮದ ಯಾವುದೇ ಬಡ ವಿದ್ಯಾರ್ಥಿಗೆ ಸ್ನಾತಕೋತ್ತರ ಮತ್ತು ಎಲ್‌ಎಲ್‌ಬಿ ಓದಲು ಸರ್ಕಾರಿ ಶುಲ್ಕ ನೀಡಲಾಗುವುದು ಎಂದರು.

ಗೋಷ್ಠಿಯಲ್ಲಿ ಎಚ್.ನಾಗಪ್ಪ, ಶಿವಶಂಕರ್, ವಿಜಯಲಕ್ಷ್ಮೀರಘುನಂದನ್ ಇದ್ದರು.