ಸಾರಾಂಶ
ರಾಜ್ಯದ ಗಡಿಗ್ರಾಮ ಕೂಡ್ಲೂರಿನಲ್ಲಿ ವಿಜೃಂಭಣೆಯಿಂದ ಏಳು ದಂಡು ಜೋಡಿ ಮುನಿಯಪ್ಪನ ಜಾತ್ರಾ ಮಹೋತ್ಸವ ಜ.16, 17 ರಂದು ನಡೆಯಲಿದೆ. ತಮಿಳುನಾಡಿಗೆ ಗಡಿಯಂತಿರುವ ಕೂಡ್ಲೂರು ಗ್ರಾಮದಲ್ಲಿ ಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವ 3 ವರ್ಷಗಳಿಗೊಮ್ಮೆ ನಡೆಯುತ್ತದೆ.
3 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ । ಪ್ರಾಣಿ ಬಲಿ ನಿಷೇಧ । ಭಕ್ತರ ಸುರಕ್ಷತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್
ಕನ್ನಡಪ್ರಭ ವಾರ್ತೆ ಹನೂರುರಾಜ್ಯದ ಗಡಿಗ್ರಾಮ ಕೂಡ್ಲೂರಿನಲ್ಲಿ ವಿಜೃಂಭಣೆಯಿಂದ ಏಳು ದಂಡು ಜೋಡಿ ಮುನಿಯಪ್ಪನ ಜಾತ್ರಾ ಮಹೋತ್ಸವ ಜ.16, 17 ರಂದು ನಡೆಯಲಿದೆ. ತಮಿಳುನಾಡಿಗೆ ಗಡಿಯಂತಿರುವ ಕೂಡ್ಲೂರು ಗ್ರಾಮದಲ್ಲಿ ಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವ 3 ವರ್ಷಗಳಿಗೊಮ್ಮೆ ನಡೆಯುತ್ತದೆ. ಜ.16ರ ಮಂಗಳವಾರ ಸಂಜೆ 4:30 ಗಂಟೆಗೆ ಗುಂಡೇಗಾಲದಯ್ಯ ಸ್ವಾಮೀಜಿಯ ಅಲಂಕಾರ ಮಹಾಮಂಗಳಾರತಿ ಹಾಗೂ ಏಳು ದಂಡು ಜೋಡಿ ಮುನಿಯಪ್ಪ ದೇವಸ್ಥಾನಕ್ಕೆ ಹೊರಡುವುದು ವಿಶೇಷ. ಜಾತ್ರಾ ಮಹೋತ್ಸವ ಜ.17ರ ಬೆಳಗ್ಗೆ 5:30 ರಿಂದ ಸಂಜೆ 6:30 ಗಂಟೆ ಒಳಗೆ ಸಲ್ಲುವ ಬ್ರಾಹ್ಮಿ ಮುಹೂರ್ತದಲ್ಲಿ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ.ಜಾತ್ರೆ ವಿಶೇಷ:ಮೂರು ವರ್ಷಗಳಿಗೊಮ್ಮೆ ನಡೆಯುವ ಏಳು ದಂಡು ಜೋಡಿ ಮುನಿಯಪ್ಪನ ಜಾತ್ರಾ ಮಹೋತ್ಸವದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳಾದ ನೂರೊಂದು ಪೂಜೆ, ಹಾಲುಮಜ್ಜನ, ಎಣ್ಣೆ ಮಜ್ಜನ, ತುಪ್ಪದ ಮಜ್ಜನ ಎಡೆಸೇವೆ ತಲೆಮುಡಿ, ಪಿಂಡಪ್ರಸಾದ ಮಹಾಮಂಗಳಾರತಿ ಏಳು ದಂಡು ಜೋಡಿ ಮುನಿಯಪ್ಪನ ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗಿಸಲಾಗುವುದು. ಪ್ರಾಣಿ ಬಲಿ ನಿಷೇಧ:
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಕಟ್ಟುನಿಟ್ಟಿನ ಆದೇಶದ ಅನ್ವಯ ಕೂಡ್ಲೂರು ಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿರುವುದರಿಂದ ಸ್ಥಳಕ್ಕೆ ಜಿಲ್ಲಾ ಎಸ್ಪಿ ಪದ್ಮಿನಿ ಸಾಹು ಹಾಗೂ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಸೋಮೇಗೌಡ ಹಾಗೂ ರಾಮಾಪುರ ಎಸ್ಐ ಸಂತೋಷ್ ಕಶ್ಯಪ್ ಅಧಿಕಾರಿಗಳು ಭೇಟಿ ನೀಡಿ ಇಲ್ಲಿನ ಜಾತ್ರಾ ಮಹೋತ್ಸವದ ಪದಾಧಿಕಾರಿಗಳಿಗೆ ಮತ್ತು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಪ್ರಾಣಿ ಬಲಿ ನಿಷೇಧಿಸಿರುವ ಬಗ್ಗೆ ಅರಿವು ಮೂಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಮೂರು ವರ್ಷಗಳಿಗೊಮ್ಮೆ ಜಾತ್ರೆ:ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಂತೆ ತಾಲೂಕಿನ ಗಡಿಗ್ರಾಮ ಕೂಡ್ಲೂರಿನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಏಳು ದಂಡು ಜೋಡಿ ಮುನಿಯಪ್ಪನ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಸಹ ಮಾಡಲಾಗಿದೆ. ಏಳು ದಂಡು ಜೋಡಿ ಮುನಿಯಪ್ಪನ ಜಾತ್ರೆ ಹಿನ್ನೆಲೆ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ನಾಲಾ ರೋಡ್, ಚೆಕ್ ಪೋಸ್ಟ್, ಮಿಣ್ಯಂ ಚೆಕ್ ಪೋಸ್ಟ್, ಅರಣ್ಯ ಇಲಾಖೆ ಚೆಕ್ಪೋಸ್ಟ್, ಗರಿಕೆ ಕಂಡಿ, ಗಡಿ ಭಾಗದ ಚೆಕ್ ಪೋಸ್ಟ್ಗಳಲ್ಲಿಯೂ ಸಹ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಪ್ರಾಣಿ ಬಲಿ ನಿಷೇಧ ಇರುವುದರಿಂದ ಜಾತ್ರೆಗೆ ಬರುವ ಭಕ್ತರು ಸಾತ್ವಿಕ ಪೂಜೆ ಸಲ್ಲಿಸಿ ತೆರಳಬೇಕಾಗಿದೆ. ಹೀಗಾಗಿ ಇಲ್ಲಿ ನಡೆಯುವ ಎರಡು ದಿನಗಳ ಜಾತ್ರೆಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಿಂದ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಸಂತೋಷ್ ಕಶ್ಯಪ್, ಇನ್ಸ್ಪೆಕ್ಟರ್ ರಾಮಾಪುರ