ಒನಕೆ ಓಬವ್ವಳ ಶೌರ್ಯ ಎಲ್ಲರಿಗೂ ಮಾದರಿ: ಅನ್ನಪೂರ್ಣ ಎಂ.

| Published : Nov 11 2024, 11:48 PM IST

ಸಾರಾಂಶ

ವೀರ ಮಹಿಳೆಯರ ಸಾಲಿನಲ್ಲಿ ಒನಕೆ ಓಬವ್ವ ಸಹಿತ ವಿರಾಜಮಾನರಾಗಿದ್ದಾರೆ. ಒನಕೆ ಓಬವ್ವ ಸಾಹಸ ಎಲ್ಲರಿಗೂ ಆದರ್ಶಪ್ರಾಯ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಹೇಳಿದರು.

ಗದಗ: ತಾಯ್ನೆಲಕ್ಕಾಗಿ ಶೌರ್ಯದಿಂದ ಹೋರಾಡಿದ ವೀರವನಿತೆ ಒನಕೆ ಓಬವ್ವ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ. ಹೇಳಿದರು.

ಸೋಮವಾರ ಗದಗ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾದ ವೀರವನಿತೆ ಒನಕೆ ಓಬವ್ವ ಜಯಂತಿಯಲ್ಲಿ ಮಾತನಾಡಿದರು.

ಕರ್ನಾಟಕ ಇತಿಹಾಸವನ್ನು ಗಮನಿಸಿದಾಗ ದೇಶದ ರಕ್ಷಣೆಗಾಗಿ ಅನೇಕ ವೀರ ಮಹಿಳೆಯರು ತಮ್ಮ ಪ್ರಾಣ ಮುಡುಪಾಗಿಟ್ಟಿದ್ದನ್ನು ಸ್ಮರಿಸಬಹುದಾಗಿದೆ. ಅಂತಹ ವೀರ ಮಹಿಳೆಯರ ಸಾಲಿನಲ್ಲಿ ಒನಕೆ ಓಬವ್ವ ಸಹಿತ ವಿರಾಜಮಾನರಾಗಿದ್ದಾರೆ. ಒನಕೆ ಓಬವ್ವ ಸಾಹಸ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.

ಗದಗ ಬೆಟಗೇರಿ ನಗರಸಭೆ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ ವೀರವನಿತೆ ಓಬವ್ವ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಉದ್ಘಾಟಿಸಿದರು. ಉಪನ್ಯಾಸಕರಾಗಿ ಆಗಮಿಸಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ. ವಿರೂಪಾಕ್ಷ ಮಾತನಾಡಿ, ಜಗತ್ತಿನಲ್ಲಿ ಮೂಢನಂಬಿಕೆ, ತಾರತಮ್ಯ ಹೋಗಲಾಡಿಸಿ ಸಮಾನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಅನೇಕ ನೇತಾರರು, ಶರಣರು, ಮುಖಂಡರು ಶ್ರಮಿಸಿದ್ದಾರೆ. ಅದರಿಂದ ಸಾಮಾಜಿಕ, ತಂತ್ರಜ್ಞಾನ, ರಾಜಕೀಯ ಕ್ರಾಂತಿಗಳೂ ನಡೆದಿವೆ ಎಂದರು.

ಶತ್ರುಗಳ ಕುಟಿಲ ಆಕ್ರಮಣವನ್ನು ತಡೆದು ಓಬವ್ವಳು ತನ್ನ ಸಮಯ ಪ್ರಜ್ಞೆ ಹಾಗೂ ಧೈರ್ಯ ಶೌರ್ಯ ಎಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದು ಇತಿಹಾಸದ ಕುರಿತು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಭರತ್ ಎಸ್., ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಉಪವಿಭಾಗಾಧಿಕಾರಿ ಎಂ. ಗಂಗಪ್ಪ, ಗದಗ ಬೆಟಗೇರಿ ನಗರಸಭೆ ಪೌರಾಯುಕ್ತ ಮಹೇಶ ಪೋತದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ ಬಿ., ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಮುದಾಯದ ಮುಖಂಡರು, ಗಣ್ಯರು, ಹಾಜರಿದ್ದರು. ಬಾಹುಬಲಿ ಜೈನರ ನಿರೂಪಿಸಿದರು.