ಸಾರಾಂಶ
ವಿಶೇಷ ಸಭೆ । ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾಹಿತಿ । 15ನೇ ಹಣಕಾಸು ಯೋಜನೆಯಡಿ ಬಿಡುಗಡೆ । ಪ್ರತಿ ವಾರ್ಡ್ ಸದಸ್ಯರಿಗೆ ತಲಾ ₹3 ಲಕ್ಷ ಹಂಚಿಕೆ
ಕನ್ನಡಪ್ರಭ ವಾರ್ತೆ ಬೀರೂರುಕೇಂದ್ರ ಸರ್ಕಾರ ಪ್ರತಿ ಐದು ವರ್ಷಗಳಿಗೊಮ್ಮೆ ಪುರಸಭೆ ಅಭಿವೃದ್ದಿಗಾಗಿ 15ನೇ ಹಣಕಾಸು ಯೋಜನೆಯಡಿ ಈ ಬಾರಿ 1.19 ಕೋಟಿ ರು. ಹಣವನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಶೇ.60ರಷ್ಟು ಹಣವನ್ನು ಘನತ್ಯಾಜ್ಯ ವಿಲೇವಾರಿ ಮತ್ತು ಕುಡಿಯುವ ನೀರಿಗೆ ಸಮನಾಗಿ ಮೀಸಲಿರಿಸಿ ಉಳಿದ ಶೇ.40 ಹಣವನ್ನು ರಸ್ತೆ, ಚರಂಡಿ ಮತ್ತಿತರ ಕಾಮಗಾರಿಗಳಿಗೆ ಮೀಸಲಿರಿಸಬೇಕು ಎಂದು ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ ಪ್ರಭಾರ ಅಧ್ಯಕ್ಷ ಎನ್.ಎಂ.ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದರು.ಈ ಹಂತದಲ್ಲಿ ಮಾತನಾಡಿದ ಸದಸ್ಯ ಬಿ.ಆರ್.ಮೋಹನ್ ಕುಮಾರ್, ಪುರಸಭೆಗೆ 15ನೇ ಹಣಕಾಸು ಕ್ರೀಯಾಯೋಜನೆ ತಯಾರಿಸಲು ಜಿಲ್ಲಾಧಿಕಾರಿ ಯಾವಾಗ ಪತ್ರ ಬರೆದಿದ್ದಾರೆ, ನೀವ್ಯಾಕೆ ನಮಗೆ ಮಾಹಿತಿ ನೀಡದೆ ಪುರಸಭೆ ಎಂಜಿನಿಯರ್ ಮೂಲಕ ಸದಸ್ಯರಿಂದ ಕ್ರಿಯಾಯೋಜನೆ ಪಟ್ಟಿ ಕೇಳುತ್ತಿದ್ದೀರೀ. ಇಡೀ ಜಿಲ್ಲೆಯ ಎಲ್ಲಾ ನಗರಸಭೆ, ಪುರಸಭೆಯಲ್ಲಿ ಕ್ರಿಯಾ ಯೋಜನೆ ತಯಾರಿಸಿಕೊಟ್ಟು 1 ತಿಂಗಳಾದರೂ ಸಹ ಸದಸ್ಯರಿಗೆ ಮಾಹಿತಿ ನೀಡಿಲ್ಲ, ಕಾಮಗಾರಿಗೆ ಹಣ ಹಂಚಿಕೆ ನಿರ್ಧಾರ ತೆಗೆದುಕೊಳ್ಳಲು ನಿಮಗೆ ಅಧಿಕಾರವಿದೆಯೇ?, ಹಿಂದಿನ ಅಧ್ಯಕ್ಷರ ಅವಧಿಯಲ್ಲೇ ಮಾಡಿದ್ದರೇ ಇಷ್ಟೊತ್ತಿಗಾಗಲೇ ಕಾಮಗಾರಿ ಕ್ರಿಯೋಜನೆ ರೂಪಿಸಬಹುದಿತ್ತು ಎಂದು ಮುಖ್ಯಾಧಿಕಾರಿಗಳನ್ನು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ರವಿಕುಮಾರ್, ಸದಸ್ಯರನ್ನು ಕೇಳದೇ ನೀವೆ ನಿರ್ಧಾರ ತೆಗೆದುಕೊಳ್ಳುವ ಹಾಗಿದ್ದರೆ ನಮ್ಮನೇಕೆ ಸಭೆಗೆ ಕರೆಸುತ್ತೀರಾ, ವರ್ಷಕೊಮ್ಮೆ ಬರುವ ಹಣವನ್ನು ಬೇರೆಡೆಗೆ ಬಳಸುವ ದುರುದ್ದೇಶವಿದೇಯಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಜಿ.ಪ್ರಕಾಶ್, ಒಂದು ತಿಂಗಳ ಹಿಂದೆಯೇ ಕೇಂದ್ರ ಸರ್ಕಾರ 15ನೇ ಹಣಕಾಸು ಕ್ರೀಯಾಯೋಜನೆಗೆ ಎಲ್ಲಾ ನಗರಸಭೆ ಮತ್ತು ಪುರಸಭೆ ಆದೇಶ ನೀಡಿದ್ದು ಆದರೆ ಹಣ ಹಂಚಿಕೆ ಬಿಡುಗಡೆ ಮಾಡಿರಲಿಲ್ಲ, ಎಂಜಿನಿಯರ್ ಸಹ ತಡವಾಗಿ ಮಾಹಿತಿ ನೀಡಿದರು.
ತದ ನಂತರ ಸಭೆಯ ಎಲ್ಲಾ ಸದಸ್ಯರ ಒಕ್ಕೋರಲಿನ ತೀರ್ಮಾನದಂತೆ ಪ್ರತಿ ವಾರ್ಡಿನ ಚರಂಡಿ, ರಸ್ತೆ ಮತ್ತಿತರ ಕಾಮಗಾರಿ ಮಾಡಿಸಲು ಪ್ರತಿ ವಾರ್ಡನ ಸದಸ್ಯರಿಗೆ 3ಲಕ್ಷ ರು. ಕಾಮಾಗಾರಿಗೆ ಕ್ರೀಯಾ ಯೋಜನೆ ನೀಡುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.ಸದಸ್ಯೆ ಸಹನಾ ವೆಂಕಟೇಶ್, 17ನೇ ವಾರ್ಡ ಸದಸ್ಯೆ ಭಾಗ್ಯಲಕ್ಷ್ಮಿ ಮೋಹನ್, ನಾಮಿನಿ ಸದಸ್ಯರಾದ ಮಲ್ಲಿಕಾರ್ಜುನ್, ಕಾಂತರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣ್, ಸದಸ್ಯರಾದ ಬಿ.ಕೆ.ಶಶಿಧರ್, ಸುದರ್ಶನ್, ಮಾನಿಕ್ ಭಾಷ, ಶಾರದ ರುದ್ರಪ್ಪ, ಸುಮಿತ್ರಮ್ಮ, ಗಂಗಾಧರ್, ನಾಮಿನಿ ಸದಸ್ಯ ಮೋಹನ್ ಅಧಿಕಾರಿಗಳು ಇದ್ದರು.
ಹೊಸ ಅಜ್ಜಂಪುರ ರಸ್ತೆ ಫುಟ್ಪಾತ್ ನಿರ್ಮಾಣ ಮಾಡಲಿಕ್ಕೆ ಬಹು ದಿನಗಳಿಂದ ಹೋರಾಟ ಮಾಡಿದ್ದೇವೆ. ಪುರಸಭೆ ಮತ್ತು ಸದಸ್ಯರ ನಿರ್ಲಕ್ಷ್ಯ ಕಾರಣವಾಗಿದೆ. ಜೊತೆಗೆ 3ಲಕ್ಷದಲ್ಲಿ ವಾರ್ಡಿನಲ್ಲಿ ಏನು ಕಾಮಗಾರಿ ಮಾಡಿಸಲು ಸಾಧ್ಯವಾಗುತ್ತದೆ.ಬಿ.ಟಿ.ಚಂದ್ರಶೇಖರ್, ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ.