ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಭಾರತದ ಗ್ರಂಥಾಲಯ ವಿಜ್ಞಾನ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ 132ನೇ ಜನ್ಮದಿನಾಚರಣೆ ಅಂಗವಾಗಿ ನಗರದ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಗ್ರಂಥಾಲಯಗಳನ್ನು ಒಳಗೊಂಡಿದ್ದು, ರಾಜ್ಯದಲ್ಲಿ 1312 ಗ್ರಂಥಾಲಯಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಗ್ರಂಥಾಲಯಗಳ ಪ್ರಯೋಜನ ಪಡೆಯಬೇಕೆಂದ ಅವರು, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಕರು ವಾರದಲ್ಲಿ ಒಂದು ದಿನ ವಿಶೇಷ ತರಗತಿ ನಡೆಸಬೇಕು ಎಂದು ಈಗಾಗಲೇ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ತುಮಕೂರು ವಿಶ್ವ ವಿದ್ಯಾನಿಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಕೇಶವ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆ ಆಯುಕ್ತ ಎಂ.ಕನಗವಲ್ಲಿ, ಬೆಂಗಳೂರು ದಕ್ಷಿಣ ವಲಯ ಗ್ರಂಥಾಲಯ ಉಪನಿರ್ದೇಶಕಿ ಸರಸ್ವತಿ, ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕ ದಿವಾಕರ ಮತ್ತಿತರರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಪ್ರಶಸ್ತಿ ಪುರಸ್ಕೃತರಿಗೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಕ್ಸ್ಬಹುಮಾನ ವಿತರಣೆ
ಕಾರ್ಯಕ್ರಮದ ನಿಮಿತ್ತ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಆರ್ಯನ್ ಪ್ರೌಢಶಾಲೆಯ ಬಿ.ಜಿ.ಯಶಸ್ವಿನಿ ಪ್ರಥಮ ಬಹುಮಾನ, ಎಂಪ್ರೆಸ್ ಪ್ರೌಢಶಾಲೆಯ ಹೆಚ್.ಆರ್.ಉಮಾ ದ್ವಿತೀಯ, ಆರ್ಯನ್ ಪ್ರೌಢಶಾಲೆಯ ಮುಸ್ಕಾನ್ ತೃತೀಯ ಬಹುಮಾನ ಗಳಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಎಂಪ್ರೆಸ್ ಪ್ರೌಢಶಾಲೆಯ ಹೆಚ್.ಆರ್.ಉಮಾ ಪ್ರಥಮ, ಭಾರತ್ ಮಾತಾ ಶಾಲೆಯ ಟಿ.ಡಿ.ದಿವ್ಯ ದ್ವಿತೀಯ, ಬಾಪೂಜಿ ಪ್ರೌಢಶಾಲೆಯ ಕೆ.ಎನ್.ಬಸವರಾಜು ತೃತೀಯ ಬಹುಮಾನ ಪಡೆದುಕೊಂಡರು. ಗಾಯನ ಸ್ಪರ್ಧೆಯಲ್ಲಿ ಶ್ರೀ ವಾಲ್ಮಿಕಿ ಸನಿವಾಸ ಪ್ರೌಢಶಾಲೆಯ ಗಂಗೋತ್ರಿ ಪ್ರಥಮ, ಭಾರತ್ ಮಾತಾ ಶಾಲೆಯ ಟಿ.ಡಿ. ದಿವ್ಯ ದ್ವಿತೀಯ ಹಾಗೂ ಬಾಪೂಜಿ ಪ್ರೌಢಶಾಲೆಯ ಯದುನಂದನ ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು. ಚಿತ್ರಕಲಾ ಸ್ಪರ್ಧೆಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಫೈಸಲ್ ಖಾನ್ ಪ್ರಥಮ ಶ್ರೀ ಗುರುಕುಲ ಶಾಲೆಯ ಕೆ.ಎಂ. ವೇದಾಂತ್ ದ್ವಿತೀಯ, ಮಾರುತಿ ವಿದ್ಯಾಕೇಂದ್ರದ ಹೆಚ್.ಆರ್. ಅನುಷ್ಕ ತೃತೀಯ ಬಹುಮಾನ ಗಳಿಸಿದ್ದು, ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.