ಕುಂದಾಪುರ: ನಮ್ಮ ದೇಶದ ಸಂವಿಧಾನ ಮಾತ್ರ ಅಸಮಾನತೆಯನ್ನು ತೊಡೆದು ಸಮಾನತೆಯನ್ನು ಎತ್ತಿಹಿಡಿಯಬಲ್ಲದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಹೇಳಿದರು.ಅವರು ಇಲ್ಲಿನ ನಮ್ಮಭೂಮಿಯಲ್ಲಿ ನಡೆದ ‘ಸಂವಿಧಾನದ ಆಶಯಗಳಿಗೆ ಸೌಹಾರ್ದವೇ ಮೆಟ್ಟಿಲು’ ಎಂಬ ವಿಚಾರ ಸಂಕಿರಣ – ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು.

ಜಾತಿ, ಭೌಗೋಳಿಕ, ವರ್ಣ, ಭಾಷೆ, ಲಿಂಗ ಅಸಮಾನತೆಗಳು ಭಾರತದ ಸೌಹಾರ್ದತೆಯನ್ನು ಛಿದ್ರಗೊಳಿಸಿವೆ. ಈ ಅಸಮಾನತೆಯ ಗೋಡೆಯನ್ನು ಕೆಡವಬೇಕಾಗಿದೆ. ಇದಕ್ಕೆ ಪೂರಕವಾಗಿ ನಮ್ಮೊಂದಿಗೆ ಸಂವಿಧಾನವಿದೆ. ಅಸಮಾನತೆಗಳನ್ನು ತೊಡೆದು ಹಾಕುವ, ಸಮಾನತೆಯನ್ನು ಎತ್ತಿ ಹಿಡಿಯುವ ಎಲ್ಲವನ್ನೂ ಸಂವಿಧಾನ ಒಳಗೊಂಡಿದೆ. ಈ ಸಂವಿಧಾನ ನಮ್ಮದೇ ಕತೆ, ಅದನ್ನು ಓದಬೇಕಾದವರು ನಾವೇ, ಅನುಷ್ಠಾನ ಮಾಡಬೇಕಾದದವರೂ ನಾವೇ, ಕಿವಿಗೊಡಬೇಕಾದವರು ಹಾಗೂ ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಬೇಕಾದವರೂ ನಾವೇ. ಹಾಗಾಗಿ ನಮ್ಮ ಜವಾಬ್ದಾರಿಯನ್ನು ನಾವು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸದ್ಭಾವನಾ ವೇದಿಕೆಯ ಟಿ. ಬಿ. ಶೆಟ್ಟಿ, ಇಂದಿನ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಸೌಸಂವಿಧಾನದ ಆಶಯಗಳನ್ನು, ಅರ್ಥ ಮಾಡಿಕೊಳ್ಳುವ ಅಗತ್ಯ ಹೆಚ್ಚಿದೆ. ಮಕ್ಕಳು ಹಾಗೂ ಯುವ ಸಮುದಾಯಕ್ಕೆ ಸಂವಿಧಾನದ ಆಶಯಗಳು, ಪೂರ್ವ ಪೀಠಿಕೆಯ ಅಂಶಗಳನ್ನು ನಿತ್ಯವೂ ತಿಳಿಸುವ, ಜಾಗೃತಿ ಮೂಡಿಸುವ ಕೆಲಸಗಳು ಆಗಬೇಕಾಗಿದೆ ಎಂದರು.

ಸಂವಿಧಾನದ ಪೂರ್ವ ಪೀಠಿಕೆಯನ್ನು ಮುದ್ರಿಸುವ (ಸ್ಕ್ರೀನ್‌ ಪ್ರಿಂಟ್‌) ಮೂಲಕ ಕಾರ್ಯಕ್ರಮದ ಉದ್ಘಾಟಿಸಿ ಅದರ ಪ್ರತಿಗಳನ್ನು ಸ್ಮರಣಿಕೆಯಾಗಿ ಅತಿಥಿಗಳಿಗೆ ನೀಡಲಾಯಿತು.

ನಂತರ ನಮ್ಮಭೂಮಿಯ ಮಕ್ಕಳು ರಂಗಕರ್ಮಿ ವಾಸುದೇವ ಗಂಗೇರ ಅವರ ನಿರ್ದೇಶನದ ಸಂವಿಧಾನದ ಪೂರ್ವ ಪೀಠಿಕೆಯನ್ನು ಹಾಡುತ್ತ ನೃತ್ಯ ಮಾಡಿ ಪೂರ್ವಪೀಠಿಕೆಯ ಪ್ರತಿಯನ್ನು ಹಿಡಿದು ‘ವಿ ದ ಪೀಪಲ್ ಆಫ್ ಇಂಡಿಯಾ ಮತ್ತು ವಿ ದ ಚಿಲ್ಡ್ರನ್ಸ್ ಆಫ್ ಇಂಡಿಯಾ’ ಘೋಷಣೆ ಕೂಗಿದರು.


ಸದ್ಭಾವನಾ ವೇದಿಕೆಯ ವಂಡ್ಸೆ ಉದಯ ಕುಮಾರ್‌ ಶೆಟ್ಟಿ, ಉದಯ ಗಾಂವ್ಕರ್‌ ಸಂವಾದವನ್ನು ನಡೆಸಿಕೊಟ್ಟರು. ಸುಬ್ರಹ್ಮಣ್ಯ ಪಡುಕೋಣೆಯವರು ಕಾರ್ಯಕ್ರಮವನ್ನು ನಿರೂಪಿಸಿ, ಸಿಡಬ್ಲ್ಯೂಸಿ ಸಂಸ್ಥೆಯ ಶಿವಾನಂದ ಶೆಟ್ಟಿ ಸ್ವಾಗತಿಸಿ, ಕವಿತಾ ರತ್ನ ವಂದಿಸಿದರು.