ಸಾರಾಂಶ
ಭಾರತ ತಂಡಕ್ಕೆ ರಾಜ್ಯದಿಂದ ನಾಲ್ಕು ಜನರು ಆಯ್ಕೆಯಾಗಿದ್ದು, ಇದರಲ್ಲಿ ಕಾರವಾರ ತಾಲೂಕಿನ ಕೈಗಾದ ಆದಿತ್ಯ ಕೂಡಾ ಒಬ್ಬರಾಗಿದ್ದಾರೆ.
ಕಾರವಾರ: ಕೊರಿಯಾದ ನವ್ಮೋನ್ನಲ್ಲಿ ಏ. ೨೦ರಿಂದ ನಡೆಯುವ ಓಪನ್ ಇನ್ಲೈನ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ತಾಲೂಕಿನ ಕೈಗಾದ ಆದಿತ್ಯ ಬಾಂದೇಕರ ಪ್ರತಿನಿಧಿಸಿಲಿದ್ದಾರೆ ಎಂದು ಕರ್ನಾಟಕ ರೋಲರ್ ಸ್ಕೇಟಿಂಗ್ ತರಬೇತುದಾರ ದಿಲೀಪ ಹಣಬರ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ತಂಡಕ್ಕೆ ರಾಜ್ಯದಿಂದ ನಾಲ್ಕು ಜನರು ಆಯ್ಕೆಯಾಗಿದ್ದು, ಇದರಲ್ಲಿ ನಮ್ಮ ತಾಲೂಕಿನ ಕೈಗಾದ ಆದಿತ್ಯ ಕೂಡಾ ಒಬ್ಬರಾಗಿದ್ದಾರೆ. ಏಳನೇ ವಯಸ್ಸಿನಿಂದಲೇ ಸ್ಕೇಂಟಿಗ್ ತರಬೇತಿ ಪಡೆಯುತ್ತಿದ್ದು, ೨೦೧೪ರಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಆಯೋಜಿಸಿದ್ದ ರಾಜ್ಯ ಮಟ್ಟದ ರೋಲರ್ ಹಾಕಿಯಲ್ಲಿ ಸಬ್ ಜ್ಯೂನಿಯರ್ ವಿಭಾಗದಲ್ಲಿ ಉತ್ತರ ಕನ್ನಡದ ವಿಭಾಗದಿಂದ ಸ್ಪರ್ಧಿಸಿ ಕಂಚಿನ ಪದಕಕ್ಕೆ ಭಾಜನನರಾಗಿದ್ದರು. ೨೦೧೬ರಲ್ಲಿ ಇದೇ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದುಕೊಂಡಿದ್ದರು. ಇದಲ್ಲದೇ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ ಎಂದು ವಿವರಿಸಿದರು.ಸ್ಪರ್ಧಾಳು ಆದಿತ್ಯ ಮಾತನಾಡಿ, ಚಿಕ್ಕಂದಿನಿಂದಲೇ ಸ್ಕೇಟಿಂಗ್ನತ್ತ ಆಕರ್ಷಣೆಗೊಳಗಾಗಿದ್ದು, ದಿಲೀಪ ಹಣಬರ ತರಬೇತಿ ನೀಡಿದ್ದರು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎನ್ನುವ ಹಂಬಲ ಸದಾ ಇತ್ತು. ತಂದೆ, ತಾಯಿ ಪ್ರೋತ್ಸಾಹದಿಂದ ತಮ್ಮ ಕನಸು ನನಸಾಗಿದೆ ಎಂದರು. ಆದಿತ್ಯ ಅವರ ತಂದೆ ಕೃಷ್ಣಾ ಬಾಂದೇಕರ, ತಾಯಿ ಭಾರತಿ ಇದ್ದರು.