ಪರೀಕ್ಷೆಯಲ್ಲಿ ವಿಫಲರಾದರೆ ದೃತಿಗೆಡಬಾರದು: ಡಾ. ಸೋಮನಾಥ್ ಜಿ. ಪಾಟ್ನೆ

| Published : May 16 2024, 12:51 AM IST

ಪರೀಕ್ಷೆಯಲ್ಲಿ ವಿಫಲರಾದರೆ ದೃತಿಗೆಡಬಾರದು: ಡಾ. ಸೋಮನಾಥ್ ಜಿ. ಪಾಟ್ನೆ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆಯ ಸೋಲನ್ನು ಅನುಭವವಾಗಿ ಪರಿಗಣಿಸಿ ಸಫಲರಾಗುವತ್ತ ನಿರಂತರ ಶ್ರಮಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಮಾಡುವುದರಿಂದ ಸ್ಪರ್ಧೆ ಹೆಚ್ಚಾಗಿದೆ. ಹಾಗಾಗಿ ಕೆಲವರಿಗೆ ಕಷ್ಟ ಎನಿಸಬಹುದು. ಆದರೆ ನೀವುಗಳು ಸ್ವತಃ ಸ್ಫೂರ್ತಿ ಮತ್ತು ಭರವಸೆಯೊಂದಿಗೆ ಪರೀಕ್ಷೆಗೆ ತಯಾರಾದಲ್ಲಿ ಸಫಲರಾಗುವುದು ಸುಲಭ

ಕನ್ನಡಪ್ರಭ ವಾರ್ತೆ ಮೈಸೂರು

ಸ್ಪರ್ಧಾತ್ಮಕ ಯುಗದಲ್ಲಿ ಶಿಬಿರಾರ್ಥಿಗಳು ಒಂದು ಪರೀಕ್ಷೆಯಲ್ಲಿ ವಿಫಲರಾದರೆ ದೃತಿಗೆಡಬಾರದು ಎಂದು ಲೋಕೋಪಯೋಗಿ ಇಲಾಖೆ ಉಪ ಕಾರ್ಯದರ್ಶಿ ಹಾಗೂ ಆರ್ಥಿಕ ಸಲಹೆಗಾರ ಡಾ. ಸೋಮನಾಥ್ ಜಿ. ಪಾಟ್ನೆ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಕಾವೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕೆಎಎಸ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

ಪರೀಕ್ಷೆಯ ಸೋಲನ್ನು ಅನುಭವವಾಗಿ ಪರಿಗಣಿಸಿ ಸಫಲರಾಗುವತ್ತ ನಿರಂತರ ಶ್ರಮಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಮಾಡುವುದರಿಂದ ಸ್ಪರ್ಧೆ ಹೆಚ್ಚಾಗಿದೆ. ಹಾಗಾಗಿ ಕೆಲವರಿಗೆ ಕಷ್ಟ ಎನಿಸಬಹುದು. ಆದರೆ ನೀವುಗಳು ಸ್ವತಃ ಸ್ಫೂರ್ತಿ ಮತ್ತು ಭರವಸೆಯೊಂದಿಗೆ ಪರೀಕ್ಷೆಗೆ ತಯಾರಾದಲ್ಲಿ ಸಫಲರಾಗುವುದು ಸುಲಭ ಎಂದರು.

ಶಿಸ್ತು, ಸಂಯಮ, ಕ್ರಮಬದ್ಧ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಾಗ ಹಲವಾರು ಸಿದ್ಧತೆಗಳನ್ನು ಬಹಳ ಶ್ರದ್ಧೆಯಿಂದ ತಯಾರಿ ಮಾಡಿಕೊಳ್ಳಬೇಕು. ತರಬೇತಿಯ ಉಪಯೋಗ ಪಡೆದು ತಲ್ಲೀನತೆಯಿಂದ ಯಶಸ್ವಿಯಾಗುವೆಡೆಗೆ ಗಮನಹರಿಸಬೇಕು. ಗ್ರಾಮಾಂತರ ಭಾಗದವರಿಗೆ ತರಬೇತಿ ತುಂಬಾ ಉಪಯುಕ್ತವಾಗಿದೆ ಎಂದು ಅವರು ಹೇಳಿದರು.

ದಿನಪತ್ರಿಕೆ ಓದುವ ಕಲೆ ಕರಗತ ಮಾಡಿಕೊಳ್ಳಬೇಕು. ಸಮಾಜದ ಕೆಳಸ್ತರದವರಿಗೆ ಸಹಾಯ ಮಾಡಬೇಕೆಂಬ ಭಾವನೆ ಬೆಳೆಸಿಕೊಂಡರೆ ಸಾಧಿಸಲು ಮನೋಸ್ಥೈರ್ಯ ದೃಢವಾಗಲಿದೆ ಎಂದು ಅವರು ತಿಳಿಸಿದರು.

ಅಂತರ್ಜಾಲ, ನವಮಾಧ್ಯಮಗಳನ್ನು ಸದ್ಭಳಕೆ ಮಾಡಿಕೊಳ್ಳುತ್ತ ಉದ್ಯೋಗದ ಜೊತೆ ಶಿಕ್ಷಣ ಪಡೆಯಲು ಪ್ರಯತ್ನಿಸಿ ಇದಕ್ಕಾಗಿ ಮುಕ್ತ ವಿವಿ ನಮಗೆಲ್ಲರಿಗೂ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದೆ. ಅದನ್ನು ಸದುಪಯೋಗಪಡಿಸಿಕೊಂಡು ಯಶಸ್ಸಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಶಿಬಿರದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ. ಪ್ರಿಯದರ್ಶಿನಿ ಮಾತನಾಡಿ, ಓದುವ ಸಂದರ್ಭದಲ್ಲಿ ಮನರಂಜನೆ ಪಡುವುದಕ್ಕಿಂತ, ಪರಿಶ್ರಮದಿಂದ ಓದಿ ಸಫಲರಾಗಿ ಮುಂದೆ ಜೀವನಪರ್ಯಂತ ಮನರಂಜನೆ ಪಡೆಯಬಹುದು ಎಂದು ಸಲಹೆ ನೀಡಿದರು.

ಇಂದಿನ ಏಕಾಗ್ರತೆಯ ದೊಡ್ಡಸವಾಲು ಮೊಬೈಲ್, ಸಾಮಾಜಿಕ ಜಾಲತಾಣ ಇವುಗಳನ್ನು ಜಾಗರೂಕತೆಯಿಂದ ಬಳಸಬೇಕು, ಏಕಾಗ್ರತೆ ಕಳೆದುಕೊಳ್ಳಬಾರದೆಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಐಎಎಸ್ ಅಥವಾ ಕೆಎಎಸ್ ಪರೀಕ್ಷೆಗಳಿಗೆ ಸಾಮಾನ್ಯವಾಗಿ ಪ್ರಬಂಧಗಳಿರುತ್ತವೆ. ನಾವು ಗಳಿಸಿಕೊಂಡ ಜ್ಞಾನವನ್ನು ಸರಳ ಭಾಷೆಯಲ್ಲಿ ಉತ್ತರ ಪತ್ರಿಕೆಯಲ್ಲಿ ಬರೆದರೆ ಮೌಲ್ಯಮಾಪನ ಮಾಡುವವರಿಗೂ ಅರ್ಥವಾಗಲಿದೆ. ಇದರಿಂದ ನಾವು ಹೇಳುವ ಸಂಗತಿ ಅವರಿಗೆ ಮನದಟ್ಟಾಗುತ್ತದೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುವವರು ದಿನಪತ್ರಿಕೆಗಳನ್ನು ಹೆಚ್ಚು ಓದಬೇಕು. ಸಂಪಾದಕೀಯ ಮತ್ತು ಪ್ರಮುಖ ಘಟನೆಗಳ ಬಗ್ಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಓದಿನಲ್ಲಿ ಪ್ರಾಮಾಣಿಕತೆ, ಬದ್ಧತೆ, ಅಚಲ ವಿಶ್ವಾಸ ಹಾಗೂ ಸ್ಮಾರ್ಟ್‌ ಹಾರ್ಡ್ ವರ್ಕ್ ಇದ್ದರೆ ಯಶಸ್ಸು ಸಾ ಧ್ಯ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಪ್ರತಿ ವಿದ್ಯಾರ್ಥಿಯು ತನ್ನ ಅಧ್ಯಯನವನ್ನು ಶ್ರದ್ಧೆಯಿಂದ, ಯೋಜನೆ ಹಾಕಿಕೊಂಡು ಪುಟ ಪುಟ ಓದುವುದರೊಂದಿಗೆ ಪುಸ್ತಕವನ್ನು ಅಧ್ಯಯನ ಮಾಡುವಂತೆ ಇದೆಲ್ಲದರ ಸದುಪಯೋಗಪಡೆದುಕೊಳ್ಳಬೇಕು. ಆಗ ನಿಮ್ಮ ಜೀವನ ಸಾರ್ಥಕವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿದಿನವನ್ನು ನೀವು ಯಾವ ರೀತಿ ಬಳಸಿಕೊಳ್ಳುತ್ತಿರಾ ಎಂಬುದರ ಮೇಲೆ ಸಫಲತೆ ನಿರ್ಧಾರವಾಗಲಿದೆ. ಉನ್ನತ ಅಧಿಕಾರಬೇಕೆಂದರೆ ಶ್ರಮವೂ ಉನ್ನತ ಮಟ್ಟದಲ್ಲಿ ಇರಬೇಕು ಎಂದು ಅವರು ಹೇಳಿದರು.

ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಮಾತನಾಡಿ, ಪ್ರಸ್ತುತತೆ ಹಾಗೂ ನಾವೀನ್ಯತೆ ರೂಢಿಸಿಕೊಂಡು. ಸತತ ಅಭ್ಯಾಸದೊಂದಿಗೆ ನೈಪುಣ್ಯತೆ ಸಾಧಿಸಿದರೆ ಯಶಸ್ಸು ಹತ್ತಿರವಾಗುತ್ತದೆ ಎಂದರು.

ಪರೀಕ್ಷಾಂಗ ಕುಲಸಚಿವ ಡಾಎಚ್. ವಿಶ್ವನಾಥ್, ಡೀನ್ ಲಕ್ಷ್ಮೀ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಡಾ.ಎಚ್. ಬೀರಪ್ಪ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್ ಇದ್ದರು.