ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಯಡೂರಿನಲ್ಲಿ ಕಾರ್ಮಿಕರೊಬ್ಬರನ್ನು ಕೊಂದಿದ್ದ ಕಾಡಾನೆ ಸೆರೆ ಹಿಡಿಯುವ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆಯ ಮೊದಲನೇ ದಿನ ಆನೆ ಚಲನವಲನ ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ.

ಮಡಿಕೇರಿ: ವಿರಾಜಪೇಟೆ ತಾಲೂಕು ಕಣ್ಣಂಗಾಲ ಗ್ರಾಮದ ಯಡೂರಿನಲ್ಲಿ ಕಾರ್ಮಿಕರೊಬ್ಬರನ್ನು ಕೊಂದಿದ್ದ ಕಾಡಾನೆ ಸೆರೆ ಹಿಡಿಯುವ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆಯ ಮೊದಲನೇ ದಿನ ಆನೆ ಚಲನವಲನ ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ.

ಅಮ್ಮತ್ತಿ ಶಾಲೆ ಬಳಿಯಿಂದ ಕಾರ್ಯಾಚರಣೆ ಆರಂಭಗೊಂಡು ಲಕ್ಷ್ಮೀ ದೇವರಕಾಡಿನ ಮುಖಾಂತರ ಚಾಮುಂಡಿ ಪೈಸಾರಿ ಬಳಿಯ ಅಯ್ಯಪ್ಪ ದೇವರಕಾಡುವರೆಗೂ ಮುಂದುವರೆಯಿತು. ಡ್ರೋನ್ ಬಳಸಿದರೂ ಕೂಡ ಸಂಜೆಯಾಗುತ್ತಿದಂತೆ ದಟ್ಟ ಅರಣ್ಯದಲ್ಲಿ ಕಾಡಾನೆಯನ್ನು ಪತ್ತೆಹಚ್ಚುವುದು ಕಷ್ಟಸಾಧ್ಯವಾಯಿತು. ಹೀಗಾಗಿ ಅಧಿಕಾರಿಗಳು ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಬುಧವಾರ ಮುಂದುವರೆಸುವುದಾಗಿ ತಿಳಿಸಿದ್ದಾರೆ.ದುಬಾರೆ ಶಿಬಿರದ ಸಾಕಾನೆಗಳಾದ ಸುಗ್ರೀವಾ, ಲಕ್ಷ್ಮಣ, ಧನಂಜಯ, ಈಶ್ವರ, ಅಜೇಯ ಹಾಗೂ ಪ್ರಶಾಂತ ಆನೆಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು.ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ ಅವರ ಮಾರ್ಗದರ್ಶನದಲ್ಲಿ ವಿರಾಜಪೇಟೆ ವಲಯದ ಅರಣ್ಯಾಧಿಕಾರಿಗಳು, ಸಿಬ್ಬಂದಿ ಮತ್ತು ಆರ್.ಆರ್.ಟಿ ತಂಡದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ನಿಷೇಧಾಜ್ಞೆ ಉಲ್ಲಂಘನೆ.!: ವಿರಾಜಪೇಟೆ ತಾಲೂಕಿನ ಅಮ್ಮತ್ತಿ ವ್ಯಾಪ್ತಿಯಲ್ಲಿ ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆ ನಡೆಯುವ ಹಿನ್ನೆಲೆ ಅರಣ್ಯಾಧಿಕಾರಿಗಳ ಮನವಿ ಮೇರೆಗೆ ತಹಸೀಲ್ದಾರರು ನಿಷೇಧಾಜ್ಞೆ ಆದೇಶ ಹೊರಡಿಸಿದ್ದರೂ, ಕೆಲ ಖಾಸಗಿ ಕಂಪನಿ ಮತ್ತು ಎಸ್ಟೇಟ್ ಮಾಲೀಕರು ಆದೇಶಕ್ಕೆ ಕಿಮ್ಮತ್ತು ನೀಡದೆ ಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ.

ತಹಸೀಲ್ದಾರ್‌ ಆದೇಶವೇನು?:

ಕಾರ್ಯಾಚರಣೆ ನಡೆಯಲಿರುವ ವ್ಯಾಪ್ತಿಗೆ ಸುತ್ತಮುತ್ತಲ ಹಲವು ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಈ ಭಾಗದಲ್ಲಿ ಕೂಲಿ ಕೆಲಸ ನೀಡದಂತೆ, ವಿದ್ಯಾರ್ಥಿಗಳಿಗೆ ರಜೆ ನೀಡಿ, ಸಾರ್ವಜನಿಕರು ಓಡಾಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾಲೂಕು ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದರು.

ಆದರೆ ಏನಾಯಿತು?: ಸರ್ಕಾರಿ ಆದೇಶವನ್ನು ಗಾಳಿಗೆ ತೂರಿ ಕಾನೂನು ಉಲ್ಲಂಘಿಸಿ ಕೆಲ ಸಂಸ್ಥೆಗಳು ಕಾರ್ಮಿಕರನ್ನು ದುಡಿಸಿಕೊಂಡಿವೆ ಎಂದು ಆರೋಪಿಸಲಾಗಿದೆ. ತಾಲೂಕು ದಂಡಾಧಿಕಾರಿಗಳ ಆದೇಶವನ್ನೇ ಗೌರವಿಸದ ಈ ಸಂಸ್ಥೆಗಳ ವಿರುದ್ಧ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಜೀವಕ್ಕೆ ಏನಾದರೂ ಆದರೆ ಅದರ ಸಂಪೂರ್ಣ ಜವಾಬ್ದಾರಿ ಕೆಲಸ ನೀಡಿರೋ ಸಂಸ್ಥೆ ಅಥವಾ ಮಾಲೀಕರದ್ದೇ ಎಂದು ಕಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾಭಕ್ಕಾಗಿ ಮಾನವ ಜೀವವನ್ನು ಪಣಕ್ಕಿಡುವ ಈ ಪ್ರವೃತ್ತಿಗೆ ತಕ್ಷಣ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.