Operation to clear encroached buildings in Harihar

ಹರಿಹರ: ಸೋಮವಾರ ಬೆಳ್ಳಂಬೆಳಿಗ್ಗೆಯೇ ನಗರದಾದ್ಯಂತ ಒತ್ತುವರಿ ತೆರವುಗೊಳಿಸುವ ಕಾರ್ಯ ಭರದಿಂದ ನಡೆಯಿತು. ತಾಲೂಕು ದಂಡಾಧಿಕಾರಿಗಳಾದ ತಹಶೀಲ್ದಾರ ಜಿ. ಸಂತೋಷಕುಮಾರ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಮರಿಸ್ವಾಮಿ, ನಗರ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ ಓಲೇಕಾರ ಬಂದೋಬಸ್ತ್ ನಲ್ಲಿ ನಗರದ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯ ಅಕ್ಕ-ಪಕ್ಕದಲ್ಲಿನ ವಾಣಿಜ್ಯ ಮಳಿಗೆಗಳ ಮಾಲೀಕರು ನಗರಸಭೆಯ ಹದ್ದಿನಲ್ಲಿ ಅತಿಕ್ರಮಿಸಿಕೊಂಡು ನಿರ್ಮಿಸಿಕೊಂಡಿದ್ದ ಛಾವಣಿಗಳನ್ನು ಜೆಸಿಬಿ ಯಂತ್ರದ ಸಹಾಯದಿಂದ ತೆರವುಗೊಳಿಸಿದರು.ನಗರದ ಹೃದಯ ಭಾಗದಲ್ಲಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಭೂತ ಬಂಗ್ಲೆ ಎಂದೇ ಪ್ರಖ್ಯಾತಿ ಪಡೆದಿರುವ, ಭಯದ ನೆರಳಿನಲ್ಲಿಯೇ ಭರ್ಜರಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಸ್ಥಳವು ಈಶಾನ್ಯ ದಿಕ್ಕಿನಲ್ಲಿನ ಅಪಾಯದಂಚಿನಲ್ಲಿದ್ದ ಕಟ್ಟಡದ ಮೂಲೆಯಲ್ಲಿ ನಗರಸಭೆಗೆ ಕಂದಾಯ ಕಟ್ಟದೆ, ವ್ಯಾಪಾರ ವಹಿವಾಟು ನಡೆಸುತ್ತಿದ್ದ ವಾಣಿಜ್ಯ ಮಳಿಗೆಯನ್ನು ಜೆಸಿಬಿ ಯಂತ್ರ ದಿಂದ ನೆಲಸಮಗೊಳಿಸಿದರು. ಇದನ್ನೆಲ್ಲ ಗಮನಿಸಿದ ನಗರದ ಸಾರ್ವಜನಿಕರು, ಅಂತೂ-ಇಂತೂ ನಗರದ ಭೂತ ಬಂಗ್ಲೆ ನೆಲಸಮಗೊಳಿಸುವದಕ್ಕಾಗಿ ಜಿಲ್ಲಾಡಳಿತ, ತಾಲೂಕು ಆಡಳಿತ, ಹಾಗೂ ಸರ್ಕಾರ ಮುಹೂರ್ತ ಫಿಕ್ಸ್ ಮಾಡಿದಂತಾಗಿದೆ. ಆದಷ್ಟು ಬೇಗ ಸಂಪೂರ್ಣ ಶಿಥಿಲಾವಸ್ಥೆಗೊಂಡಿರುವ ನಗರದ ಹೃದಯ ಭಾಗದ ನಗರಸಭೆಯ ವಾಣಿಜ್ಯ ಮಹಡಿಯನ್ನು ತಕ್ಷಣವೆ ನೆಲಸಮಗೊಳಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದ ಧ್ವನಿ ಜೋರಾಗಿ ಕೇಳಿಸುತ್ತಿತ್ತು.ಆದೇಶ ಪಾಲನೆ: ಅತಿಕ್ರಮ ತೆರವು ಕಾರ್ಯಾಚರಣೆ ಸ್ಥಳಕ್ಕೆ ಆಗಮಿಸಿದ್ದ ಉಪವಿಭಾಗಾಧಿಕಾರಿಗಳೊಂದಿಗೆ, ಕೆಲವು ಅಂಗಡಿಗಳ ಮಾಲೀಕರು ಏರು ಧ್ವನಿಯಲ್ಲೇ ಮಾತನಾಡಲಾರಂಭಿಸಿದ್ದರು. ಅದಕ್ಕೆ ಅವರು ಮಾತನಾಡಿ, ನಗರದ ಮುಖ್ಯ ರಸ್ತೆಗಳಾದ ಬೀರೂರು-ಸಮ್ಮಸಗಿ ಹಾಗೂ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ 60 ಅಡಿ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಅತಿಕ್ರಮಿಸಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಲು ನ್ಯಾಯಾಲಯವು ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಅತಿಕ್ರಮಗೊಂಡಿರುವ ಕಟ್ಟಡಗಳನ್ನು, ಅಂಗಡಿಗಳ ಮುಂದಿನ ಛಾವಣಿಯನ್ನು ತೆರವುಗೊಳಿಸುತ್ತೇವೆ. ಕೆಲವರು ತಮ್ಮ ಅಂಗಡಿಗಳ ಮುಂದೆ ಅತಿಕ್ರಮಿಸಿಕೊಂಡಿರುವ ಕಟ್ಟಡವನ್ನು ತೆರವುಗೊಳಿಸದಂತೆ ತಡೆಯಾಜ್ಞೆ ತಂದಿದ್ದಾರೆ. ಮುಂದಿನ ದಿಗಳಲ್ಲಿ ಅವುಗಳನ್ನು ಸಹ ತೆರವುಗೊಳಿಸುವ ಕಾರ್ಯವನ್ನು ಕೈಗೊಳ್ಳುತ್ತೇವೆ ಎಂದು ಉಪ ವಿಭಾಗಧಿಕಾರಿ ಸಂತೋಷ್ ಕುಮಾರ್ ಮಾಧ್ಯಮದವರಿಗೆ ಮಾಹಿತಿ ನೀಡಿದರು.ತಾವಾಗಿಯೇ ತೆರವುಗೊಳಿಸಿ: ರಾಜ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ನಗರದ, ಪುಟ್‌ಪಾತ್ ಮತ್ತು ಚರಂಡಿಗಳ ಮೇಲಿನ ಸ್ಥಳವನ್ನು ಅತಿಕ್ರಮಿಸಿಕೊಂಡು, ವಾಣಿಜ್ಯ ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿದ್ದು. ವಾರದೊಳಗಾಗಿ ಅತಿಕ್ರಮಿಸಿಕೊಂಡಿರುವ ಪುಟ್‌ಪಾತ್ ಸ್ಥಳವನ್ನು ಜೆಸಿಬಿ ಬರುವುದರೊಳಗಾಗಿ ತಾವಾಗಿಯೇ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಜೆಸಿಬಿಯಿಂದ ತೆರವುಗೊಳಿಸುವ ಕಾರ್ಯವನ್ನು ಶೀಘ್ರದಲ್ಲಿಯೇ ಪ್ರಾರಂಭಿಸುತ್ತೆವೆಂದು ಉಪ ವಿಭಾಗಾಧಿಕಾರಿ ಸಂತೋಷಕುಮಾರ ಆದೇಶಿಸಿದ್ದಾರೆ. ಗಾಂಧಿ ಮೈದಾನದ ಎದುರು ರಸ್ತೆಯ ಅಂಚಿನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಸ್ಥಳವನ್ನು ಜೆಸಿಬಿ ಯಂತ್ರದಿಂದ ತಗ್ಗು ಮಾಡಿದ್ದರಿಂದ ಅಲ್ಲಿ ನಿತ್ಯ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಬೀದಿ ಬದಿ ವ್ಯಾಪಾರಸ್ಥರು, ಅನಿವಾರ್ಯವಾಗಿ ಬೇರೆಡೆ ತಮ್ಮ ವ್ಯಾಪಾರ ವಹಿವಾಟು ನಡೆಸಲಾರಂಭಿಸಿದ್ದು ಕಂಡು ಬಂದಿತು. ಪೌರಾಯುಕ್ತರಾದ ಈರಮ್ಮ, ನಗರಸಭೆ ಕಂದಾಯ ಅಧಿಕಾರಿ ಎಂ. ಗುರುಮೂರ್ತಿ, ಸಹಾಯಕ ಅಭಿಯಂತರರಾದ ತಿಪ್ಪೆಶ, ಪ್ರಕಾಶ, ಆರೋಗ್ಯ ನಿರೀಕ್ಷಕ ಮಂಜುನಾಥ ಬಿ, ದಫೇದಾರರಾದ ಟಿ ಹನುಮಂತಪ್ಪ, ಪೂಜಾರ ಹನುಮಂತ, ದಯಾನಂದ ಇತರರು ಇದ್ದರು. ಫೋಟೋ ಡಿ 1 ಹೆಚ್.ಆರ್.ಆರ್ 1:

ನಗರದಾದ್ಯಂತ ಅತಿಕ್ರಮ ತೆರವುಗೊಳಿಸುವ ಕಾರ್ಯಕ್ಕೆ ನಡೆಯಿತು.