ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುರಾಜ್ಯದಲ್ಲಿ ಈಗಾಗಲೇ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ, ಅದೇ ರೀತಿ ತುಮಕೂರು, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲೂ ಇದರ ವ್ಯಾಪ್ತಿ ವಿಸ್ತರಿಸುತ್ತಿರುವುದರಿಂದ ಇಲ್ಲಿನ ಸ್ಥಳೀಯ ಜನತೆ ಎಚ್ಚೆತ್ತುಕೊಂಡು ಮುಂದೆ ಆಗುವ ಅನಾಹುತಗಳನ್ನುತಡೆಯಬೇಕಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ಎಚ್ಚರಿಸಿದರು.ತುಮಕೂರಿನ ಪತ್ರಿಕಭವನದಲ್ಲಿ ಬುಧವಾರ ಜಿಲ್ಲೆಯಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ಅನ್ನೋದು ಈ ನೆಲವನ್ನು ಸರ್ವನಾಶ ಮಾಡುವಂತಹ ಮತ್ತು ಉಳ್ಳವರಿಗೆ ಲಾಭ ಮಾಡಿಕೊಳ್ಳುವವರಿಗೆ ಅತ್ಯಂತ ಸುಲಭದ ದಾರಿಯಾಗಿದೆ. ಲಾಭ ಮಾಡಿಕೊಳ್ಳುವವರೆಗೆ ಭ್ರಷ್ಟಾಚಾರಿಗಳಿಗೆ ಭ್ರಷ್ಟಾಚಾರವನ್ನು ಪೋಷಣೆ ಮಾಡುವ ಅಧಿಕಾರಿಗಳಿಗೆ ಇದು ಮಾಮೂಲು ಆದರೆ ಇಲ್ಲಿನ ಜನಜೀವನ ಮತ್ತು ಜನರಿಗೆ ಬಹುದೊಡ್ಡ ಆಘಾತ ಮತ್ತು ಜೀವನದಲ್ಲಿ ಹೊಡೆತ ಬೀಳುತ್ತದೆ ಎಂದರು.ಈಗ ತುಮಕೂರಿನ ಚಿಕ್ಕನಾಯಕನಹಳ್ಳಿ ಮತ್ತು ಬೇರೆ ಬೇರೆ ಕಡೆಗೆ ಗಣಿಗಾರಿಕೆಯನ್ನು ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವುದು ಮತ್ತು ಅದಕ್ಕೆ ಸರ್ವೆ ಕಾರ್ಯುಗಳು ನಡೆಯುತ್ತಿರುವುದು ಬಹಳ ಗಂಭೀರ ವಿಷಯವಾಗಿದೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗಳ ಕುರಿತು ಕೆಆರ್ಎಸ್ ಪಕ್ಷ ಮತ್ತು ಬೇರೆ ಬೇರೆ ಪಕ್ಷದವರೂ ಸೇರಿ ಜಿಲ್ಲೆಯ ಎಂಪಿ ಸಹ ಅಕ್ರಮ ಗಣಿಗಾರಿಕೆಯ ಕುರಿತು ಮಾತನಾಡಿದ್ದರು. ಇದರಲ್ಲಿ ತಪ್ಪಿತಸ್ಥರು ಯಾರು ಎಂದು ಗುರುತಿಸಿ, ಕೂಡಲೇ ಉನ್ನತ ತನಿಖಾ ಸಂಸ್ಥೆ ಮೂಲಕ ತನಿಖೆ ನಡೆಸಿ ಈ ನೆಲವನ್ನು ಉಳಿಸಬೇಕಿದೆ ಎಂದರು. ತುಮಕೂರು ಜಿಲ್ಲೆಯಲ್ಲಿ ಅದೆಷ್ಟು ಅಕ್ರಮ ಗಣಿಗಾರಿಕೆಗಳು ನಡೆಯುತ್ತಿವೆ. ಇದನ್ನು ಪ್ರಶ್ನಿಸುವವರ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಲಾಗುತ್ತಿದೆ. ಇದರಲ್ಲಿ ಸ್ಥಳೀಯ ರಾಜಕೀಯದವರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ. ಒಂದು ಸುಸಜ್ಜಿತ ಆಸ್ಪತ್ರೆಯನ್ನು ಜಿಲ್ಲೆಗೆ ತರುವುದಕ್ಕೆ ಸಾವಿರಾರು ಮನವಿ ಕೊಡಬೇಕು. ಆಸ್ಪತ್ರೆ ತಂದರೆ ಆಸ್ಪತ್ರೆಯಲ್ಲಿ ವೈದ್ಯರಿರುವುದಿಲ್ಲ, ವೈದ್ಯರಿದ್ದರೆ ಉಪಕರಣ ಇರುವುದಿಲ್ಲ, ಉಪಕರಣವಿದ್ದರೆ ಆ ಉಪಕರಣವನ್ನು ಬಳಕೆ ಮಾಡುವಂತಹ ಟೆಕ್ನಿಷಿಯನ್ ಗಳಿರುವುದಿಲ್ಲ. ಇದು ಹಲವು ಸಮಸ್ಯೆಗಳು ಇಂದಿನಿಂದಲೂ ಹಾಗೆಯೇ ಇದೆ ಎಂದರು.
ಪಕ್ಷದ ಜಿಲ್ಲಾ ಉಸ್ತುವಾರಿ ಮಲ್ಲಿಕಾರ್ಜನ ಭಟ್ಟರಹಳ್ಳಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿನ ಅರೆ ಮಲೆನಾಡುಗಳನ್ನು ನಾಶ ಮಾಡಲಾಗುತ್ತಿದೆ ಸಂಪಧ್ಭರಿತ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಬಹುದೊಡ್ಡ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು. ಅಕ್ರಮ ಗಣಿಗಾರಿಕೆ ಪುನಶ್ಚೇತನ ಹೆಸರಿನಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಆಡಳಿತಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಉಪಾಧ್ಯಕ್ಷ ಜ್ಞಾನ ಸಿಂಧು ಸ್ವಾಮಿ ಆರೋಪಿಸಿದರು.ಕೆ ಆರ್ ಎಸ್ ಪಕ್ಷದ ತುಮಕೂರು ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮೂರ್ತಿ, ಪ್ರಧಾನ ಕಾರ್ಯ ದರ್ಶಿ ದೀಪಕ್, ಪರಿಸರ ಹೋರಾಟಗಾರ ಸಿ ಯತಿರಾಜು, ಪರಿಸರವಾದಿ ಬಿ.ವಿ.ಗುಂಡಪ್ಪ, ಕೆಆರ್ ಎಸ್ ಪಕ್ಷದ ಎಸ್ ಎಲ್, ಎಸ್ ಟಿ ಕಾರ್ಯದದರ್ಶಿ ನರಸಿಂಹರಾಜು ಇತರರು ಇದ್ದರು.