ಕನ್ನಡಪ್ರಭ ವಾರ್ತೆ ಬೇಲೂರು ಪೂರ್ವಗ್ರಹ ಪೀಡಿತ ಹಾಗೂ ಅವೈಜ್ಞಾನಿಕವಾಗಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ, ದಲಿತರ ಅಸ್ಮಿತೆ ಮತ್ತು ಐಕ್ಯತೆಗೆ ಧಕ್ಕೆಯಾಗುವ ಒಳಮೀಸಲಾತಿ ಕ್ರಮವನ್ನು ತಕ್ಷಣ ನಿಷೇಧಿಸಬೇಕೆಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದು ಮಾಜಿ ಪುರಸಭೆ ಸದಸ್ಯ ದಾನಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಒಳಮೀಸಲಾತಿ ಬೇಕೆಂಬುದರಲ್ಲಿ ವಿರೋಧವಿಲ್ಲ. ಆದರೆ ಹಲವು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಸದುದ್ದೇಶದಿಂದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಮೂಲಕ ಜನಗಣತಿ ನಡೆಸಿದೆ. ಆದರೆ ಮೊದಲ ದಿನದಿಂದಲೇ ಈ ಸಮೀಕ್ಷೆಯಲ್ಲಿ ಸಾಫ್ಟ್‌ವೇರ್‌ ಗೊಂದಲ, ಶಿಕ್ಷಕರು ಹಾಗೂ ಸಿಬ್ಬಂದಿ ಜನರನ್ನು ಸಮರ್ಪಕವಾಗಿ ಸಂಪರ್ಕಿಸದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಕಂಡುಬಂದಿವೆ. ಸಮೀಕ್ಷೆಯ ವೇಳೆ ಕೆಲವರು ತಮ್ಮ ವಿವರಗಳನ್ನು ದಾಖಲಿಸದೇ ಹೋಗಿರುವ ಸಾಧ್ಯತೆಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ತರಾತುರಿಯಲ್ಲಿ ವರದಿ ಸಲ್ಲಿಸಿ ಶೇಕಡಾವಾರು ನಿಗದಿ ಮಾಡಿರುವುದು ಗೊಂದಲಕ್ಕೆ ಕಾರಣವಾಗಿದೆ ಎಂದರು.

ಸಮೀಕ್ಷೆಯ ಆರಂಭದಲ್ಲೇ ಒಂದು ಸಮುದಾಯ ಅತ್ಯಂತ ಹಿಂದುಳಿದಿದ್ದು, ಇನ್ನೊಂದು ಸಮುದಾಯ ಹೆಚ್ಚು ಪಾಲು ಪಡೆದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದು ವರದಿಯ ನಿಷ್ಪಕ್ಷಪಾತತೆಯ ಬಗ್ಗೆ ಅನುಮಾನ ಹುಟ್ಟಿಸುತ್ತದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯವನ್ನು ಕಡಿಮೆ ಎಂದು, ಕಡಿಮೆ ಇರುವ ಸಮುದಾಯವನ್ನು ಹೆಚ್ಚು ಎಂದು ವರದಿಯಲ್ಲಿ ತೋರಿಸಿರುವುದೂ ಸರಿಯಲ್ಲ. ನಗರ ಪ್ರದೇಶಗಳಲ್ಲಿ ಸಮೀಕ್ಷೆ ಶೇಕಡಾ 100ರಷ್ಟು ಪೂರ್ಣಗೊಳ್ಳದೇ ಇದ್ದರೂ ಅವಸರವಾಗಿ ಸಮೀಕ್ಷೆ ಪ್ರಕ್ರಿಯೆಯನ್ನು ಅಂತ್ಯಗೊಳಿಸಿರುವುದು ಸರಿಯಲ್ಲ. ಅಲೆಮಾರಿ ಸಮುದಾಯಗಳಿಗೂ ಸಹ ಈ ವರದಿಯಿಂದ ಅನ್ಯಾಯವಾಗಿದೆ. ಜನಸಂಖ್ಯೆ, ಭೂ ಒಡೆತನ, ಉದ್ಯೋಗದ ಪ್ರಮಾಣ, ಉದ್ದಿಮೆಗಳ ಒಡೆತನ ಸೇರಿದಂತೆ ವಿವಿಧ ಸಾಮಾಜಿ, ಆರ್ಥಿಕ ಅಂಶಗಳನ್ನು ಪರಿಗಣಿಸದೇ ಮೀಸಲಾತಿ ನಿಗದಿಪಡಿಸಿರುವುದು ಸರಿಯಲ್ಲ. ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರು ಬಲಗೈ, ಎಡಗೈ ಸಂಬಂಧಿತ ಜಾತಿಗಳನ್ನು ಗುಂಪು ಮಾಡಿ ವರದಿ ನೀಡಿದ್ದಾರೆ. ಆದರೆ ಕೆಲವು ಸಮುದಾಯಗಳ ಕುರಿತು ಸ್ಪಷ್ಟ ಅಂಕಿಅಂಶಗಳ ಕೊರತೆ ಇದೆ. ಛಲವಾದಿ ಸಮುದಾಯವನ್ನು ಬಲಗೈ ಗುಂಪಿಗೆ ಸೇರಿಸಿರುವ ವಿಚಾರದಲ್ಲೂ ಗೊಂದಲವಿದೆ. ಲಂಬಾಣಿ, ಕೊರವ ಸೇರಿದಂತೆ ಕೆಲವು ಹಿಂದುಳಿದ ಸಮುದಾಯಗಳಿಗೆ ಇದರಿಂದ ಅನ್ಯಾಯವಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಬಾಬಾಸಾಹೇಬ್ ಡಾ. ಅಂಬೇಡ್ಕರ್ ಅವರು ಎಲ್ಲರೂ ಒಟ್ಟಾಗಿ ಬದುಕಬೇಕು ಎಂಬ ಆಶಯವನ್ನು ನೀಡಿದ್ದಾರೆ. ಆದರೆ ಕೆಲವರು ರಾಜಕೀಯ ಲಾಭಕ್ಕಾಗಿ ಬಲಗೈ, ಎಡಗೈ ಎಂದು ಸಮಾಜವನ್ನು ವಿಭಜಿಸುವ ಕೆಲಸ ಮಾಡುತ್ತಿದ್ದಾರೆ. ಭಾಸ್ಕರ್‌ ಪ್ರಸಾದ್ ಅವರು ರಾಜಕೀಯ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಮುಂದೆಯೂ ಬಲಗೈ ಸಮುದಾಯದ ಸಚಿವರು ಅಥವಾ ಇತರರು ಅವಹೇಳನಕಾರಿ ಮಾತುಗಳನ್ನು ಆಡಿದರೆ ನಾವು ಸುಮ್ಮನಿರುವುದಿಲ್ಲ. ಎಡಗೈ ಹಾಗೂ ಬಲಗೈ ಸಮುದಾಯದ ನಾಯಕರು ಮತ್ತು ಸದಸ್ಯರು ತಮ್ಮ ಮಾತಿನಲ್ಲಿ ಸಂಯಮ ವಹಿಸಿ, ಅಂಬೇಡ್ಕರ್‌ ಅವರ ಆಶಯದಂತೆ ಗೌರವಯುತವಾಗಿ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸತೀಶ್, ಮಂಜುನಾಥ್,, ವೆಂಕಟೇಶ್ರಾ, ಮೇನಹಳ್ಳಿ ದೇವರಾಜು ಇದ್ದರು.