ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಶಾಸಕರ ಬೆಂಬಲಿಗನೊಬ್ಬ ತನ್ನ ಮನೆ ಎದುರು ದನದ ಶೆಡ್ ನಿರ್ಮಿಸಿ ಪಕ್ಕದ ಮನೆಯವರು ಓಡಾಡಲು ರಸ್ತೆ ಬಿಡದೆ ದಬ್ಬಾಳಿಕೆ ನಡೆಸುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.ತಾಲೂಕಿನ ಹಂಪಾಪುರ ಗ್ರಾಮದಲ್ಲಿ ಪ್ರಭಾವಿ ವ್ಯಕ್ತಿಯ ಪ್ರಭಾವಕ್ಕೆ ಮಣಿದು ಅವರ ಮನೆ ಮುಂದೆ ಸರ್ಕಾರಿ ಕಾಮಗಾರಿಯ ಜೊತೆಗೆ ಡಾಂಬರ್ ಹಾಕಲು ಗುತ್ತಿಗೆದಾರ ಸಹ ಮುಂದಾಗಿರುವುದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ರಮೇಶ್ ಬಂಡಿಸಿದ್ದೇಗೌಡರ ಬೆಂಬಲಿಗ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣ ಗ್ರಾಮ ಠಾಣೆಗೆ ಸೇರಿದ ರಸ್ತೆಯಲ್ಲಿ ಅಡ್ಡಲಾಗಿ ದನದ ಶೆಡ್ ನಿರ್ಮಿಸಿ ರಸ್ತೆಯನ್ನು ಬಂದ್ ಮಾಡುವ ಮೂಲಕ ನಮ್ಮ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯವೆಸಗುತ್ತಿರುವುದಾಗಿ ಆರೋಪಿಸಿದ್ದಾರೆ.ಗ್ರಾಮ ಠಾಣಾ ಜಾಗ ತನಗೆ ಸೇರಿದೆ. ಅದಕ್ಕೆ ರಸ್ತೆ ಮಧ್ಯೆ ಕೊಟ್ಟಿಗೆ ನಿರ್ಮಾಣ ಮಾಡಿದ್ದೇನೆ ಎಂದು ಗ್ರಾಮಸ್ಥರಿಗೆ ಧಮ್ಕಿ ಹಾಕುವ ಜೊತೆಗೆ ತನ್ನ ಮನೆವರೆಗೆ ಮಾತ್ರ ರಸ್ತೆ ಮಾಡಿ ಎಂದು ಗುತ್ತಿಗೆದಾರನಿಗೆ ಬೆದರಿಕೆ ಹಾಕಿರುವುದಾಗಿ ಕೇಳಿ ಬಂದಿದೆ.
ಗ್ರಾಮದಲ್ಲಿ ಪ್ರಭಾವಿ ಆಗಿರುವ ಕೃಷ್ಣ ನಮ್ಮ ಮನೆ ಮುಂದೆ ಕೊಟ್ಟಿಗೆ ನಿರ್ಮಿಸಿ ರಾಸುಗಳನ್ನು ಕಟ್ಟಿ ಹಾಕುತ್ತಿದ್ದಾರೆ. ಇದರಿಂದ ಮನೆಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ. ಅಲ್ಲದೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ವಿಪರೀತ ವಾಸನೆಯಿಂದ ಮೂಗು ಮುಚ್ಚಿಕೊಂಡು ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನು ಪ್ರಶ್ನಿಸಲು ಹೋದರೆ ನಮ್ಮ ಮೇಲೆ ಹಲ್ಲೆ ಮಾಡಲು ಬರುತ್ತಾರೆ. ನನಗೆ ಒಬ್ಬನೇ ಮಗನಿದ್ದು, ಈಗಾಗಲೇ ಹಲವು ಬಾರಿ ಜಗಳವಾಗಿದೆ. ಬಲಾಢ್ಯರ ದಬ್ಬಾಳಿಕೆಗೆ ನೊಂದಿದ್ದೀನಿ. ನನಗೆ ನ್ಯಾಯ ಕೊಡಿಸಿಕೊಡಿ ಎಂದ ಬಡ ಮಹಿಳೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಶಾಸಕನ ಬೆಂಬಲಿಗನಾಗಿ ದರ್ಪ ದೌರ್ಜನ್ಯ ಸರಿಯೇ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಬೀದಿಯ ಎಲ್ಲಾ ಮನೆಯವರೆಗೆ ರಸ್ತೆ ನಿರ್ಮಿಸಿ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಎದುರು ಉಪವಾಸ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಇದೇ ವೇಳೆ ಪರಸ್ಪರ ಮಾತಿನ ಚಕಮುಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಯಾವುದೇ ಕಾರಣಕ್ಕೂ ಪಕ್ಕದ ಮನೆ ವರೆವಿಗೂ ರಸ್ತೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.