ನರಸಿಂಹರಾಜಪುರಕೇರಳ ಹಿಂದೂ ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಸಮಾಜ ಮುಂದುವರಿಯಲಿದೆ ಎಂದು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕಿ ಡಾ.ಟಿ.ಜಿ.ಸೌಮ್ಯ ಅಭಿಪ್ರಾಯಪಟ್ಟರು.

-ಡಾ.ಟಿ.ಜಿ.ಸೌಮ್ಯ ಅಭಿಮತ । ಕೇರಳ ಹಿಂದೂ ಸಮಾಜದ ಚತುರ್ಥ ವರ್ಷದ ವಾರ್ಷಿಕೋತ್ಸವ ।

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಕೇರಳ ಹಿಂದೂ ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಸಮಾಜ ಮುಂದುವರಿಯಲಿದೆ ಎಂದು ಕುಷ್ಟಗಿ ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕಿ ಡಾ.ಟಿ.ಜಿ.ಸೌಮ್ಯ ಅಭಿಪ್ರಾಯಪಟ್ಟರು.

ಭಾನುವಾರ ಬಿ.ಎಚ್.ಕೈಮರದ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ಕೇರಳ ಹಿಂದೂ ಸಮಾಜದ ಚತುರ್ಥ ವರ್ಷದ ವಾರ್ಷಿಕೋತ್ಸವ ಮತ್ತು 5 ನೇ ವರ್ಷದ ಓಣಂ ಹಬ್ಬ ಆಚರಣೆಯಲ್ಲಿ ದೈನಂದಿನ ಜೀವನದಲ್ಲಿ ಒತ್ತಡ ನಿರ್ವಹಣೆ ಎಂಬ ವಿಷಯವಾಗಿ ಉಪನ್ಯಾಸ ನೀಡಿದರು.

ನಾರಾಯಣ ಗುರುಗಳು ತತ್ವದಂತೆ ಶಿಕ್ಷಣ- ಸಹಕಾರ-ಸಹೋದರತ್ವವನ್ನು ಪ್ರತಿಯೊಬ್ಬರೂ ಮೈಗೂಡಿಸಿ ಕೊಳ್ಳಬೇಕು. ಸಮಾಜದಲ್ಲಿ ಸಂಘಟನೆ ಅತಿ ಮುಖ್ಯ. ಮಹಿಳೆಯರು ಮನೆಯಿಂದ ಹೊರ ಪ್ರಪಂಚಕ್ಕೆ ಕಾಲಿಟ್ಟರೆ ಹೊಸ, ಹೊಸ ವಿಚಾರಗಳು ತಿಳಿಯಲಿದೆ. ಸಂತೋಷವೂ ಸಿಗಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಸಮಾಜದ ಮುಖಂಡ ಹಾಗೂ ವಕೀಲ ಮಾತನಾಡಿ ನಾನು ಹಿಂದೂ ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಬೇಡ. ವಸುದೈವ ಕುಟುಂಬ ಎಂಬಂತೆ ಪ್ರಪಂಚದ ಎಲ್ಲರೂ ಒಂದೇ ಕುಟುಂಭದವರಂತೆ ಬಾಳಬೇಕು. ಹಿಂದೂಗಳು ದೇಶವನ್ನು ದೇವರಂತೆ ಪೂಜೆ ಮಾಡುತ್ತೇವೆ ಹಾಗೂ ಆರಾಧಿಸುತ್ತೇವೆ ಎಂದರು.

ಅಧ್ಯಕ್ಷತೆವಹಿಸಿದ್ದ ಕೇರಳ ಹಿಂದೂ ಸಮಾಜದ ತಾಲೂಕು ಅಧ್ಯಕ್ಷ ಪಿ.ಆರ್.ಸುಕುಮಾರ್ ಮಾತನಾಡಿ ಕಳೆದ 5 ವರ್ಷದ ಹಿಂದೆ ಕೇರಳ ಹಿಂದೂ ಸಮಾಜ ಕಟ್ಟಿ ಯಶಸ್ಸಿಯಾಗಿ ಮುನ್ನಡೆಸಿದ್ದೇವೆ. ಕಸಬಾ ಹೋಬಳಿಯಲ್ಲಿ 424 ಕೇರಳ ಹಿಂದೂ ಕುಟುಂಬದವರಿದ್ದಾರೆ. ಕೇರಳ ಹಿಂದೂ ಸಮಾಜದ ಪ್ರತಿ ಮನೆಗಳಿಗೂ ಭೇಟಿ ನೀಡಿದ್ದೇವೆ ಎಂದರು. ಕೇರಳ ಹಿಂದೂ ಸಮಾಜದ ಮುಖಂಡ ಸುಧಾಕರ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕೇರಳ ಹಿಂದೂ ಸಮಾಜ ನಡೆದು ಬಂದ ದಾರಿ ವಿವರಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ 8 ರಿಂದ 12 ನೇ ತರಗತಿ ಒಟ್ಟು 72 ಮಕ್ಕಳಿಗೆ ನೋಟು ಬುಕ್ ಸೇರಿದಂತೆ ಕಲಿಕಾ ಪುರಸ್ಕಾರ ನೀಡಲಾಯಿತು. ವಿವಿಧ ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಅತಿಥಿಗಳಾಗಿ ಕೇರಳ ಹಿಂದೂ ಸಮಾಜದ ಮೂಡಿಗೆರೆ ತಾಲೂಕು ಅಧ್ಯಕ್ಷ ಸುಧಾಕರ, ಭದ್ರಾವತಿ ಪ್ರಸನ್ನ, ಎನ್.ಆರ್.ಪುರ ಕೇರಳ ಹಿಂದೂ ಸಮಾಜದ ಮುಖಂಡರಾದ ಕೆ.ಎನ್.ಶಿವದಾಸ್, ಕೆ.ಎನ್.ನಾಗರಾಜ್, ಒ.ಆರ್.ಬಿನು, ಚಿಟ್ಟಿಕೊಡಿಗೆ ಮನೋಹರ್, ವಗ್ಗಡೆಕಲ್ಲು ಎಂ.ಕೆ.ತಂಗಪ್ಪನ್, ಭಾರತಿ ಅರವಿಂದ ಆಚಾರ್ ಇದ್ದರು.

ಗಿರೀಶ್ ಪ್ರಾರ್ಥಿಸಿದರು. ಸಂದೀಪ್ ಸ್ವಾಗತಿಸಿದರು. ನಿಷ್ಮಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು. ಕೇರಳ ಹಿಂದೂ ಸಮಾಜದ ಪ್ರಧಾನ ಕಾರ್ಯದರ್ಶಿ ಅಶೋಕ್ ವಂದಿಸಿದರು. ವೇದಿಕೆ ಮುಂಭಾಗದಲ್ಲಿ ಬೃಹತ್ ಗಾತ್ರದ ಹೂವಿನಿಂದ ಬಿಡಿಸಿದ ಪೂಳಕಂ ಚಿತ್ರ ಆಕರ್ಷಕವಾಗಿತ್ತು.