ಸಾರಾಂಶ
ರಾಣಿಬೆನ್ನೂರು: ವರ್ತಕರ ಅನೇಕ ಹೋರಾಟಗಳಿಗೆ ಸಂಘಟನೆ ಬಹಳ ಮುಖ್ಯ, ಈ ನಿಟ್ಟಿನಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಕೂಡಿಕೊಂಡು ಕೆಲಸ ಮಾಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪಗೌಡ ಹೊಟ್ಟಿಗೌಡರ ಹೇಳಿದರು.ನಗರದ ರೈಲ್ವೆ ಸ್ಟೇಷನ್ ರಸ್ತೆಯ ವರ್ತಕರ ಸಭಾಭವನದಲ್ಲಿ ವರ್ತಕರ ಸಂಘದ ೭೮ನೇ ವಾರ್ಷಿಕ ಮಹಾಸಭೆಯ ಉದ್ಘಾಟಿಸಿ ಅವರು ಮಾತನಾಡಿದರು, ವರ್ತಕರ ಏಳಿಗೆಗೆ ಸಲುವಾಗಿ ಸರ್ಕಾರ ವಿರುದ್ಧ ಅನೇಕ ಹೋರಾಟಗಳನ್ನು ಮಾಡಿ ಜಯಗಳಿಸಿದ್ದೇವೆ. ಸಂಘ ವರ್ತಕರ ಹಿತ ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತದೆ ಎಂದರು.ಇನ್ನೂ ಎಪಿಎಂಸಿ ಪ್ರಾಂಗಣದಲ್ಲಿರುವ ಗಣೇಶ ದೇವಸ್ಥಾನದ ಸ್ಥಾಪನೆಯಾಗಿ ೫೦ವರ್ಷ ಪ್ರಯುಕ್ತ ನವಗ್ರಹ ಮತ್ತು ಹನುಮಂತ ದೇವರ ಮೂರ್ತಿ ಪ್ರತಿಷ್ಠಾಪಿಸಲು ಚಿಂತಿಸಲಾಗಿದೆ. ಇದರ ಜೊತೆಗೆ ದೇವಸ್ಥಾನ ಅಭಿವೃದ್ಧಿಗೊಳಿಸುವ ಕ್ರಮಕೈಗೊಳ್ಳಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಹಿರಿಯ ವರ್ತಕರಾದ ಎಚ್.ಎಚ್.ಕುರುವತ್ತಿ, ಜಿ.ಎಂ.ಕಳಕನವರ್, ಎಚ್.ಎಚ್.ಪಾಟಿ, ಕುಮಾರ್ ಮುಷ್ಟಿ ಹಾಗೂ ಎಂ ಜಿ ಕಾಕೋಳ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಸಂಘದ ಲಾಭ ಹಾನಿ ಪತ್ರಿಕೆ ಮಂಡಿಸಲಾಯಿತು.ಉಪಾಧ್ಯಕ್ಷ ಮಾಲತೇಶ ಕಜ್ಜರಿ, ಗೌರವ ಕಾರ್ಯದರ್ಶಿ ಗುರುಪ್ರಕಾಶ್ ಜಂಬಿಗಿ, ನಿರ್ದೇಶಕರಾದ ಸಚಿನ್ ಲಿಂಗನಗೌಡರ, ಮಾಲತೇಶ ಕರಿಚಿಕ್ಕಪ್ಪನವರ, ಕಿರಣ್ ಅಂತರವಳ್ಳಿ, ರಘು ಮಜ್ಜಿಗಿ, ಹನುಮಂತಪ್ಪ ಬಣಕಾರ, ಹೇಮನಗೌಡ ಸೊರಟೂರ,ಯುವರಾಜ್ ಬಾರಟಕ್ಕೆ, ಯಮನಪ್ಪ, ದೊಡ್ಡಪ್ಪನವರ, ಶಿವಣ್ಣ ಸುಣಗಾರ, ಸುಧೀರ ಕುರುವತ್ತಿ, ಶಂಬಣ್ಣ ಕಟಗಿಹಳ್ಳಿ, ಮುಖಂಡರಾದ ಬಿ.ಎಸ್ ಸಣ್ಣಗೌಡ್ರು, ಎಂ.ಎಸ್.ಅರಳಿ, ಎಸ್.ಕೆ.ಉಪ್ಪಿನ್, ಆರ್.ಎನ್.ಪಾಟೀಲ್ ಮತ್ತಿತರು ಭಾಗವಹಿಸಿದ್ದರು