ಸಾರಾಂಶ
ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ರಮೇಶ ಗುಬ್ಬೇವಾಡ ಕಾರ್ಯಕರ್ತರಿಗೆ ಕರೆ ನೀಡಿ ಲೋಕಸಭಾ ಚುನಾವಣೆಗೆ ಪಕ್ಷ ಸಂಘಟಿಸುವಂತೆ ಹೇಳಿದರು.
ಕನ್ನಡಪ್ರಭ ವಾರ್ತೆ ನಿಡಗುಂದಿ
ಸ್ವಾತಂತ್ರ್ಯ ಪೂರ್ವದಿಂದಲೂ ಕಾಂಗ್ರೆಸ್ ದೇಶಕ್ಕೆ ನೀಡಿದ ಕೊಡುಗೆಯನ್ನು ಜನರಲ್ಲಿ ಮನವರಿಕೆ ಮಾಡಿ, ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ರಮೇಶ ಗುಬ್ಬೇವಾಡ ಹೇಳಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ನೂತನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ವಡವಡಗಿ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ದೇಶದ ಅಭಿವೃದ್ಧಿಗೆಗಾಗಿ ನೂರಾರು ಯೋಜನೆಗಳನ್ನು ರೂಪಿಸಿ ದೇಶ ಕಟ್ಟುವ ಕೆಲಸವನ್ನು ಮಾಡಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಚುನಾವಣಾ ಪೂರ್ವ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ನೆರವೇರಿಸುವ ಮೂಲಕ ನುಡಿದಂತೆ ನಡೆದಿದ್ದಾರೆ. ಕಾಂಗ್ರೆಸ್ ಸರ್ವಜನರ ಏಳಿಗೆಗೆ ನಿರಂತರ ಶ್ರಮಿಸುತ್ತಿದೆ. ಕಾಂಗ್ರೆಸ್ ಗೆಲುವಿಗೆ ಬೂತ್ ಮಟ್ಟದ ಎಲ್ಲ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಸಚಿವ ಶಿವಾನಂದ ಪಾಟೀಲ ಪುತ್ರ ಸತ್ಯಜೀತ ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷದ ಇತಿಹಾಸವೇ ಈ ದೇಶದ ಇತಿಹಾಸ. ಎಲ್ಲ ಜಾತಿ ಜನಾಂಗದವರಿಗೆ ಸಮಾನ ಅವಕಾಶ ನೀಡಿ ಎಲ್ಲ ಜನರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡಿದ್ದು, ಕಾಂಗ್ರೆಸ್ ಪಕ್ಷ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದಂತೆ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಬ್ಲಾಕ್ ಮಟ್ಟದ ಅಧ್ಯಕ್ಷರು ಹಾಗೂ ವಿವಿಧ ವಿಭಾಗದ ಪದಾಧಿಕಾರಿಗಳು ಪಕ್ಷದ ಸಾಧನೆಯನ್ನು ಜನರಲ್ಲಿ ತಿಳಿಸಿ, ಅವುಗಳನ್ನು ಮತಗಳಾಗಿ ಬದಲಾವಣೆ ಮಾಡಬೇಕು ಎಂದರು.ಪಪಂ ಮಾಜಿ ಉಪಾಧ್ಯಕ್ಷ ಶಂಕರಲಿಂಗಪ್ಪ ಗೌಡರ, ಮಕ್ತುಮ್ ಮುಲ್ಲಾ, ಪರಶುರಾಮ್ ಗರಸಂಗಿ ಇತರರು ಮಾತನಾಡಿದರು.
ಪರಿಶಿಷ್ಟ ಜಾತಿ ವಿಭಾಗದ ನೂತನ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ವಡವಡಗಿ, ಮಾಜಿ ಪಪಂ ಅಧ್ಯಕ್ಷ ಸಂಗಮೇಶ ಬಳಿಗಾರ, ಮೌಲಾಸಾಬ ಅತ್ತಾರ, ಯುವರಾಜ ಬಜಂತ್ರಿ, ರವಿ ಇಟಗಿ, ರಾಜು ಬಜಂತ್ರಿ, ಯಲ್ಲಪ್ಪ ಆಲಮಟ್ಟಿ, ಪರಶುರಾಮ ಕಾರಿ, ಶೇಖರ ರೂಡಗಿ, ತಮ್ಮಣ್ಣ ಬಂಡಿವಡ್ಡರ, ಬಸವರಾಜ ಗಣಾಚಾರಿ, ಬಾಷೇಸಾಬ ಬಾಣಕಾರ, ರಮೇಶ ಮಾಗಿ, ಸುರೇಶ ಸಣ್ಣಮಣಿ, ಆಂಜನೇಯ ಮೋಪಗಾರ, ಬಾಬು ವಾಲಿಕಾರ, ಷನ್ಮುಕ ವಂದಾಲ, ಸಿದ್ದು ಆದವಾಣಿ, ಸಿದ್ದು ಚಲವಾದಿ, ಮರಿಯಪ್ಪ ಹರಿಜನ ಸೇರಿದಂತೆ ಪ.ಪಂ ಸದಸ್ಯರು ಇತರರಿದ್ದರು.ಇದೇ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ವಿಭಾಗದ ನೂತನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ವಡವಡಗಿ ಅವರನ್ನು ಗಣ್ಯರು ಸನ್ಮಾನಿಸಿ ಪಕ್ಷ ಸಂಘಟನೆ ಜವಾಬ್ದಾರಿ ನೀಡಿದರು.