ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಳೆದ ಐದು ವರ್ಷಗಳಿಂದ ಮೋಕ್ಷ ಸಿಗದೆ ಕತ್ತಲಲ್ಲಿದ್ದ ಬ್ಯಾಟರಾಯಸ್ವಾಮಿ, ಶ್ರೀದೇವಿ, ಭೂದೇವಿ ವಿಗ್ರಹಗಳಿಗೆ ಮರು ಪ್ರತಿಷ್ಠಾಪನೆ ಮಾಡುವ ಮೂಲಕ ಕೊನೆಗೂ ಮೋಕ್ಷ ಭಾಗ್ಯ ಸಿಕ್ಕಿದೆ.ತಾಲೂಕಿನ ಡಿಕೆಹಳ್ಳಿ ಗ್ರಾಪಂಃ ವ್ಯಾಪ್ತಿಯ ಬೆಟ್ಟದ ಮೇಲೆ ನೆಲೆಗೊಂಡಿರುವ ಮುಜರಾಯಿ ಇಲಾಖೆಯ ಇತಿಹಾಸ ಪ್ರಸಿದ್ದ ಬ್ಯಾಟರಾಯಸ್ವಾಮಿ ದೇವರ ವಿಗ್ರಗಳು ಸಣ್ಣದಾಗಿರುವ ಕಾರಣ ತೆರವುಗೊಳಿಸಿ ಎತ್ತರದ ವಿಗ್ರಹಗಳನ್ನು ದೇವಸ್ಥಾನ ಅಭಿವೃದ್ದಿ ಸಮಿತಿ ಪ್ರತಿಷ್ಠಾಪಿಸಿತ್ತು. ಬೆಟ್ಟದ ಮೇಲೆ ಉದ್ಬವಗೊಂಡಿದ್ದ ಮೂಲ ದೇವರ ವಿಗ್ರಹಗಳನ್ನು ತೆರವುಗೊಳಿಸಿ ಬೇರೆ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿರುವ ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.ಆಂಧ್ರದಲ್ಲಿದ್ದ ಮೂಲ ವಿಗ್ರಗಳುಈ ಸಂಬಂಧ ಗ್ರಾಮದ ಹಲವರು ಮುಜರಾಯಿ ಇಲಾಖೆಯ ಆಯುಕ್ತರಿಗೆ ದೂರು ಸಲ್ಲಿಸಿ ಮೂಲ ವಿಗ್ರಹಗಳನ್ನು ಪತ್ತೆ ಮಾಡಿ ಮತ್ತೆ ಮೂಲ ಸ್ಥಳದಲ್ಲೆ ಪ್ರತಿಷ್ಠಾಪಿಸಬೇಕೆಂದು ಒತ್ತಾಯಿಸಿದ್ದರು. ಈ ವಿವಾದ ನ್ಯಾಯಾಲಯ ಮೆಟ್ಟಿಲೇರಿತ್ತು. ಮೂಲ ದೇವರ ವಿಗ್ರಹಗಳು ತೀವ್ರ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಹಿಂದಿನ ತಹಸೀಲ್ದಾರ್ ಆಂಧ್ರದ ಕುಪ್ಪಂ ಬಳಿ ಇದ್ದ ಮೂಲ ವಿಗ್ರಹಗಳನ್ನು ಪತ್ತೆ ಮಾಡಿ ತಂದು ದೇವಾಲಯದ ಕೊಠಡಿಯೊಂದರಲ್ಲಿಟ್ಟು ಬೀಗ ಹಾಕಿಸಿದ್ದರು. ಐದು ವರ್ಷವಾದರೂ ಮೂಲ ವಿಗ್ರಹಗಳನ್ನು ಮರು ಸ್ಥಾಪನೆ ಮಾಡಲು ಸಾಧ್ಯವಾಗಿರಲಿಲ್ಲ.ಹಾಗೂ ಕೊಠಡಿಯ ಬೀಗ ಸಹ ಹಿಂದಿನ ತಹಸೀಲ್ದಾರ್ ಬಳಿಯೇ ಇಟ್ಟುಕೊಂಡಿದ್ದರಿಂದ ವಿಗ್ರಹಗಳಿಗೆ ಮೋಕ್ಷ ಸಿಕ್ಕಿರಲಿಲ್ಲ.
ಪ್ರತಿಷ್ಠಾಪನೆಗೆ ಡೀಸಿ ಆದೇಶಫೆಬ್ರವರಿ ೨೮ರಂದು ಹಳೇ ವಿಗ್ರಹಗಳನ್ನು ಪುನರ್ ಪ್ರತಿಷ್ಠಾಪಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದರು, ಈ ಹಿನ್ನೆಲೆಯಲ್ಲಿ ಕೊಠಡಿಯ ಬೀಗ ಮುರಿದು ವಿಗ್ರಹಗಳನ್ನು ನೂತನ ವಿಗ್ರಹಗಳ ಮುಂದೆ ಇಟ್ಟು ಮರು ಪ್ರತಿಷ್ಠಾಪನೆ ಮಾಡಲಾಯಿತು. ಮೂರು ದಿನಗಳ ಕಾಲ ಮುಜರಾಯಿ ಇಲಾಖೆ ಇಒ ಡಾ.ಸೆಲ್ವಮಣಿ ನೇತೃತ್ವದಲ್ಲಿ ಪೂಜಾ ಕಾರ್ಯಗಳು ನಡೆದವು.