ಕನ್ನಡಪ್ರಭ ವಾರ್ತೆ ತುಮಕೂರು ಕವಿತೆ, ಕವನ, ಕತೆಗಳನ್ನು ಕದ್ದು ಬರೆಯುವುದಕ್ಕಿಂತ, ಓದಿ ತಿಳಿದು ತಮ್ಮ ಸ್ವಂತ ಅನುಭವಗಳಲ್ಲಿ ಬರೆಯಬೇಕು. ಕೃತಿಚೌರ್ಯ ಮಾಡುವ ಅಭ್ಯಾಸವನ್ನು ಇಂದಿನ ಯುವಕರು ಕೈ ಬಿಡಬೇಕು. ಸಾಹಿತ್ಯರಚನೆಗೆ ಸ್ವಂತಿಕೆ ಅಗತ್ಯ ಎಂದು ತುಮಕೂರು ವಿವಿ ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಯೋಜಕ ಪ್ರೊ. ಹೊನ್ನಗಾನಹಳ್ಳಿ ಕರಿಯಣ್ಣ ಅವರು ಕರೆ ನೀಡಿದರು. ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನಕಾಲೇಜಿನ ಸಾಂಸ್ಕೃತಿಕ ಚಟುವಟಿಕೆ ಸಮಿತಿಯು ಆಯೋಜಿಸಿದ್ದ ಉದಯೋನ್ಮುಖ ಅಂತರ್ಕಾಲೇಜು ಸ್ವರಚಿತ ಕವನ ವಾಚನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅನ್ಯರ ಸಾಹಿತ್ಯ ಶೈಲಿಯನ್ನುಅನುಸರಿಸುವುದಕ್ಕಿಂತ ನಿಮ್ಮದೇ ಆದ ಸಾಹಿತ್ಯ ಶೈಲಿಯನ್ನು ರೂಢಿಸಿಕೊಳ್ಳಬೇಕು.ನಿಮ್ಮ ಬರಹಗಳನ್ನು ಓದಿದ ಕೂಡಲೇ ಓದುಗರು ನಿಮ್ಮನ್ನುಗುರುತಿಸುವಂತಾಗಬೇಕು. ನಮ್ಮದೇ ನೆಲ, ಜಲ, ಸಂಸ್ಕೃತಿ ಮತ್ತು ನಿಮ್ಮದೇ ವಿವೇಚನೆಗೆ ತಕ್ಕಂತೆ ಸಾಹಿತ್ಯರಚನೆ ಮಾಡಬೇಕುಎಂದರು.
ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ವಿಜ್ಞಾನಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಶ್ರೀನಿವಾಸ ಎಸ್. ಅವರು ಮಾತನಾಡಿಕನ್ನಡ ಭಾಷೆಯ ಮೇಲೆ ಇಂದಿನ ಯುವಕರಿಗೆ ಹಿಡಿತವಿರಬೇಕು.ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಹಾಗೂ ಭಾಷೆಯನ್ನೇ ಉಸಿರಾಗಿಸಿಕೊಂಡು ಬಾಳಬೇಕು ಎಂದರು.ಸ್ಪರ್ಧೆಯ ತೀರ್ಪುಗಾರರಾಗಿ ತುಮಕೂರು ವಿವಿ ಪ್ರಾಧ್ಯಾಪಕ ಡಾ.ಶಿವಣ್ಣ ಬೆಳವಾಡಿ ಹಾಗೂ ಮಧುಗಿರಿಯ ಸರ್ಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಧ್ಯಾಪಕ ಪ್ರೊ.ಗೋವಿಂದರಾಯ ಎಂ ಭಾಗವಹಿಸಿದ್ದರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ ಮತ್ತು ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಡಾ.ನರೇಂದ್ರಎನ್. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ವರ್ಷಿಣಿ ಡಿ. ಎಸ್. ಪ್ರಾರ್ಥಿಸಿದರು.ಡಾ.ನಟರಾಜು ಜೆಆರ್ ಕಾರ್ಯಕ್ರಮ ನಿರೂಪಿಸಿ, ಡಾ.ಅಶ್ವಥ ಕೆ ಅವರು ವಂದಿಸಿದರು.