ಸಾರಾಂಶ
ಭಟ್ಕಳ: ಪಟ್ಟಣದ ವೆಲ್ಫೇರ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ಚಿಕಿತ್ಸಾ (ಮೂಳೆ ರೋಗ) ವಿಭಾಗಕ್ಕೆ ಇಸ್ಲಾಮಿಕ್ ವೆಲ್ಫೇರ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಕಾದೀರ್ ಮೀರಾ ಪಟೇಲ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ವೆಲ್ಫೇರ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವಿಭಾಗವನ್ನು ತೆರೆಯುವಲ್ಲಿ ಪ್ರಯತ್ನಗಳು ನಡೆದಿದ್ದು ಇಂದು ನಮ್ಮ ಪ್ರಯತ್ನಕ್ಕೆ ಫಲ ದೊರೆತಿದೆ. ಡಾ. ಹನ್ನಾನ್ ಶೇಖ್ ಕಬೀರ್ ತಮ್ಮ ವೃತ್ತಿಯಲ್ಲಿ ನುರಿತ ಮೂಳೆ ತಜ್ಞರಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಾವು ಸಿದ್ಧರಿದ್ದು, ಆಸ್ಪತ್ರೆಯಲ್ಲಿ ಬರುವವರ ಮೂಳೆ ಸಂಬಂಧಿತ ಎಲ್ಲ ರೀತಿಯ ಕಾಯಿಲೆಗಳಿಗೂ ಅವರು ಚಿಕಿತ್ಸೆ ನೀಡಲಿದ್ದಾರೆ.ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯ ಮೂಳೆರೋಗ ತಜ್ಞರ ತಂಡದ ಸದಸ್ಯರಾಗಿರುವ ಡಾ. ಹನ್ನಾನ್ ಶೇಖ್ ಕಬೀರ್, ಕೀಲು ಬದಲಿ ಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಸರ್ಜನ್ ಎಂದೂ ಅವರು ಹೇಳಿದರು.
ಭಟ್ಕಳ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಮಾತನಾಡಿ, ಭಟ್ಕಳದಲ್ಲಿ ಆರ್ಥೋಪೆಡಿಕ್ ತಜ್ಞರ ಕೊರತೆಯಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದರು. ನಮ್ಮ ತಾಲೂಕಾ ಆಸ್ಪತ್ರೆಯಲ್ಲಿ ಈ ವಿಭಾಗದಲ್ಲಿ ವೈದ್ಯರಿಲ್ಲವಾಗಿದ್ದು ಈಗ ವೆಲ್ಫೇರ್ ಆಸ್ಪತ್ರೆಯಲ್ಲಿ ಮೂಳೆ ರೋತ ತಜ್ಞರು ಬಂದಿದ್ದರಿಂದ ತಾಲೂಕಿನ ಜನತೆಗೆ ಸಹಕಾರಿಯಾಗಿದೆ ಎಂದರು.ವೆಲ್ಫೇರ್ ಆಸ್ಪತ್ರೆಯ ದಂತ ವೈದ್ಯ ಡಾ. ಝಹೀರ್ ಕೋಲಾ ಮಾತನಾಡಿ, ನಮ್ಮ ಆಸ್ಪತ್ರೆಯು ಸಮುದಾಯದ ಸೇವೆಗೆ ಸಮರ್ಪಿತವಾಗಿದೆ. ಕಡಿಮೆ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುತ್ತಿದ್ದೇವೆ. ಡಾ. ಹನ್ನಾನ್ ಜೊತೆಗೆ, ಡಾ. ಸುಹಾಸ್ ಅವರು ಪೂರ್ಣಾವಧಿಯ ಫಿಜಿಷಿಯನ್ ಆಗಿ ಸೇವೆ ಸಲ್ಲಿಸಲಿದ್ದಾರೆ. ವೆಲ್ಫೇರ್ ಆಸ್ಪತ್ರೆಯ ನೂತನ ಆರ್ಥೋಪೆಡಿಕ್ ವಿಭಾಗವು ಆಧುನಿಕ ಸೌಲಭ್ಯಗಳೊಂದಿಗೆ ರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ಒದಗಿಸಲಿದ್ದು, ಜನತೆ ಇದರ ಸದುಪಯೋಗ ಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರಾದ ಸಲಾಹುದ್ದೀನ್ ಎಸ್.ಕೆ., ಮೌಲಾನ ಸೈಯ್ಯದ್ ಝುಬೇರ್, ಯೂನೂಸ್ ರುಕ್ನುದ್ದೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಭಟ್ಕಳದ ವೆಲ್ಪೇರ್ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವಿಭಾಗವನ್ನು ಉದ್ಘಾಟಿಸಿದ ಕಾದೀರ್ ಮೀರಾ ಪಟೇಲ್.