ಸಾರ್ವಜನಿಕರ ಆರೋಗ್ಯ ಸೇವೆಗೆ ನಮ್ಮ ಕ್ಲೀನಿಕ್: ಸಿಪಿವೈ

| Published : Jul 01 2025, 12:47 AM IST

ಸಾರಾಂಶ

ನಗರವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂದು ನಗರ ವ್ಯಾಪ್ತಿಯ ಹಲವು ಕಡೆಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನು ತೆರೆಯಲಾಗಿದೆ. ಇಲ್ಲಿ ಹಲವು ಆರೋಗ್ಯ ಸೇವೆಗಳು ದೊರೆಯಲಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು.

ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಳು ಮನೆ ಬಾಗಿಲಲ್ಲೆ ದೊರೆಯಬೇಕೆಂಬ ಉದ್ದೇಶದಲ್ಲಿ ಸರ್ಕಾರ ಸ್ಥಳೀಯವಾಗಿ ನಮ್ಮ ಕ್ಲಿನಿಕ್ ಗಳನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ ಚನ್ನಪಟ್ಟಣ ಆಶ್ರಯದಲ್ಲಿ ನಿಮ್ಮ ಆರೋಗ್ಯ ನಮ್ಮ ಆದ್ಯತೆ ಧ್ಯೇಯ ವಾಕ್ಯದಡಿ ನಗರದ ವಿವೇಕಾನಂದ ನಗರ ಬಡಾವಣೆಯಲ್ಲಿ ನೂತನವಾಗಿ ಆರಂಭಿಸಿರುವ ನಮ್ಮ ಕ್ಲಿನಿಕ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಎಲ್ಲರಿಗೂ ಉತ್ತಮ ಆರೋಗ್ಯ ಸೇವೆ ದೊರೆಯಬೇಕೆಂದು ನಗರ ವ್ಯಾಪ್ತಿಯ ಹಲವು ಕಡೆಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನು ತೆರೆಯಲಾಗಿದೆ. ಇಲ್ಲಿ ಹಲವು ಆರೋಗ್ಯ ಸೇವೆಗಳು ದೊರೆಯಲಿದ್ದು, ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರು.

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎಂಬುದು ಬಹುತೇಕ ಎಲ್ಲರನ್ನು ಕಾಡುತ್ತಿದೆ, ಸಣ್ಣಪುಟ್ಟ ಸಮಸ್ಯೆ ಬಂತೆಂದರೂ ಆಸ್ಪತ್ರೆಗಳಿಗೆ ಧಾವಿಸುವ ರೋಗಿಗಳ ಭಯವನ್ನೆ ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಅವರಿಂದ ಬೇಕಾಬಿಟ್ಟಿ ಹಣವನ್ನು ದೋಚುತ್ತಿದ್ದು, ಅದನ್ನು ಮಟ್ಟ ಹಾಕುವ ನಮ್ಮ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ನೀಡುವ ದಿಸೆಯಲ್ಲಿ ಈ ನಮ್ಮ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸಲಿವೆ ಎಂದರು.

ನುರಿತ ವೈದ್ಯರು, ಗುಣಮಟ್ಟದ ಔಷಧಿಗಳು ಹಾಗೂ ಉಚಿತ ಚಿಕಿತ್ಸೆ ನೀಡುವ ಈ ನಮ್ಮ ಕ್ಲಿನಿಕ್ ಗಳನ್ನು ನೀವು ಬಳಸಿಕೊಂಡಾಗ ಮಾತ್ರ ಇವುಗಳು ಕಾರ್ಯ ನಿರ್ವಹಿಸಲಿವೆ. ಒಂದು ವೇಳೆ ನೀವು ಆರೋಗ್ಯ ಸೇವೆಗಾಗಿ ಇದನ್ನು ಬಳಸದಿದ್ದರೆ ಬೇರೆಡೆ ಇದನ್ನು ವರ್ಗಾವಣೆ ಮಾಡುತ್ತಾರೆ, ಇದಕ್ಕೆ ನೀವು ಆಸ್ಪದ ನೀಡದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್ ಮಾತನಾಡಿ, ನಗರ ವ್ಯಾಪ್ತಿಯ ಹಲವು ಕಡೆಗಳಲ್ಲಿ ನಮ್ಮ ಕ್ಲಿನಿಕ್ ಗಳನ್ನು ತೆರೆಯಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ ಜಾಗದ ಸಮಸ್ಯೆ ಕಾರಣ ಕ್ಲಿನಿಕ್ ತೆರೆಯುವುದು ವಿಳಂಭವಾಗುತ್ತಿದ್ದು, ಈ ಬಗ್ಗೆ ಶಾಸಕರ ಗಮನಕ್ಕೂ ತಂದಿದ್ದು, ಆದಷ್ಟು ಬೇಗ ಉಳಿದ ಕಡೆಗಳಲ್ಲೂ ನಮ್ಮ ಕ್ಲಿನಿಕ್ ಗಳನ್ನು ತೆರೆಯಲಾಗುವುದೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್‌ನ ನಗರಸಭಾ ಸದಸ್ಯೆ ಲಕ್ಷ್ಮಮ್ಮ ವಹಿಸಿಕೊಂಡಿದ್ದರು, ತಾಲೂಕು ಆರೋಗ್ಯಾಧಿಕಾರಿ ಕೆ.ಪಿ.ರಾಜು, ಪೌರಾಯುಕ್ತ ಮಹೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆ ಚಂದ್ರು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ನಗರಸಭೆ ಮಾಜಿ ಅಧ್ಯಕ್ಷ ಪ್ರಶಾಂತ್, ಕಸ್ತೂರಿ ಮಂಜುನಾಥ್, ಮತಿನ್ , ಕಾಂಗ್ರೆಸ್ ಮುಖಂಡ ಮಂಗಳವಾರಪೇಟೆ ಸತೀಶ್ ಸೇರಿ ಹಲವರು ಹಾಜರಿದ್ದರು.

ಪೋಟೊ೩೦ಸಿಪಿಟಿ೧: ನಗರದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣೆಗೊಳಿಸಿದ ಶಾಸಕ ಸಿ.ಪಿ.ಯೋಗೇಶ್ವರ್.