ನಮ್ಮದು ಜನಪರ ನಿಲುವು: ಶಾಸಕ ಅಲ್ಲಂಪ್ರಭು ಪಾಟೀಲ್‌

| Published : Feb 08 2024, 01:30 AM IST / Updated: Feb 08 2024, 01:31 AM IST

ಸಾರಾಂಶ

ಕರ್ನಾಟಕದಿಂದ ಸಂಪೂರ್ಣ ತೆರಿಗೆ ಪಾವತಿಯಾದರೂ ಕೇಂದ್ರದಿಂದ ಬರೋದು ಕೇವಲ 13 ರುಪಾಯಿ 90 ಪೈಸೆ ಮಾತ್ರ. ಇದನ್ನು ಪ್ರತಿಭಟಿಸಿದ್ದೇವೆ, ಸದಾ ಪ್ರತಿಭಟಿಸುತ್ತೇವೆ, ನಮ್ಮದೇನಿದ್ದರೂ ಜನಪರ ನಿಲುವು ಎಂದ ಶಾಸಕ ಅಲ್ಲಂಪ್ರಭು ಪಾಟೀಲ.

ಕನ್ನಡಪ್ರಭ ವಾರ್ತೆ ಕಲಬರಗಿ

ತೆರಿಗೆಯಲ್ಲಿ ನ್ಯಾಯಸಮ್ಮತ ಪಾಲು ಕೇಳಲು ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ದಿಲ್ಲಿಯಲ್ಲಿ ಪ್ರತಿಭಟನೆ ನಡೆಸಿದೆ.

ಬುಧವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಪರವಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಚಿವರು ಹಾಗೂ ಶಾಸಕ ಮಿತ್ರರೊಂದಿಗೆ ಭಾಗವಹಿಸಿ ಕೇಂದ್ರದ ತೆರಿಗೆ ವಂಚನೆ ಖಂಡಿಸಿದೆ ಎಂದು ಕಲಬುರಗಿ ದಕ್ಷಿಣ ಶಾಸಕರಾದ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.

ಜಂತರ್‌ ಮಂತರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ ಪತ್ರಿಕಾ ಹೇಳಿಕೆ ನೀಡಿರುವ ಅವರು ಸಿಎಂ, ಡಿಸಿಎಂ, ಸಚಿವರು, ಸಾಸಕರು ಸೇರಿದಂತೆ ಅನೇಕರಂದಿಗೆ ಪ್ರತಿಭಟನೆ ನಡೆಯಿತು. ಕೇಂದ್ರ ರಾಜ್ಯದಿಂದ ತೆರಿಗೆ ಸಂಗ್ರಹಿಸಿ ಮರಳಿಸುವಾಗ ಮನ್ಯಾಯ ಸಮ್ಮತ ಪಾಲು ನೀಡದೆ ವಂಚಿಸುತ್ತಿರೋದನ್ನ ಕಟುವಾಗಿ ಖಂಡಿಸಲಾಯ್ತು ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಪಾವತಿಸುವ ಪ್ರತಿ 100 ರು. ತೆರಿಗೆಗೆ ಮರಳಿ ಸಿಗುವುದು 333 ರು. 20 ಪೈಸೆ, ಮಧ್ಯಪ್ರದೇಶಕ್ಕೆ 279 ರು. 10 ಪೈಸೆ, ರಾಜಸ್ಥಾನಕ್ಕೆ 154 ರು. 10 ಪೈಸೆ. ಜಾರ್ಖಂಡ್ ಗೆ 303 ರು. 30 ಪೈಸೆ, ಛತ್ತೀಸ್ಗಢ ರಾಜ್ಯಕ್ಕೆ 282 ರು. 80 ಪೈಸೆ, ಆದರೆ ನಮ್ಮ ಕರ್ನಾಟಕದಿಂದ 100 ತೆರಿಗೆ ಪಾವತಿ ಆದ್ರೇ ಕೇಂದ್ರದಿಂದ ಬರುವದು ಕೇವಲ 13 ರು. 90 ಪೈಸೆ! ಇದನ್ನು ಹೇಗೆ ಸಹಿಸಬೇಕು ಹೇಳಿ? ಕೇಂದ್ರ ಈ ರೀತಿ ಹಾಡು ಹಗಲೇ ಕರುನಾಡಿಗೆ ತೆರಿಗೆ ವಂಚನೆ ಮಾಡುತ್ತಿದೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ದೂರಿದರು.

ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತೆರಿಗೆ ಪಾಲಿನಲ್ಲಿ ತಾರತಮ್ಯ, ಅನುದಾನ ಹಂಚಿಕೆಯಲ್ಲಿ ಅನುಸರಿಸುತ್ತಿರುವ ಈ ತಾರತಮ್ಯ ನೀತಿಯ ವಿರುದ್ಧ, ಕನ್ನಡಿಗರಿಗೆ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ರೋಹಗಳನ್ನು ಖಂಡಿಸಿ, ಕನ್ನಡಿಗರ ನ್ಯಾಯಯುತ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಲಾಗಿದೆ. ಜನರ ಪರವಾಗಿ ಇಂತಹ ಹೋರಾಟಗಳು ಸದಾಕಾಲ ಕಾಂಗ್ರೆಸ್‌ ಪಕ್ಷ, ಜನನಾಯಕರು ನಾವೆಲ್ಲರು. ಮಾಡುತ್ತಲೇ ಇರುತ್ತೇವೆ ಎಂದು ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.