ಪೊಲೀಸರ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

| Published : Oct 09 2023, 12:45 AM IST

ಸಾರಾಂಶ

ದಲಿತ ಮಹಿಳೆ ಮೇಲೆ ಇದೇ ಗ್ರಾಮದ ಸರ್ವಣೀಯರ ಗುಂಪೊಂದು ನಡೆಸಿದ ದೌರ್ಜನ್ಯ ಹಾಗೂ ಹಲ್ಲೆ ಘಟನೆಗೆ ಸಂಬಂಧಪಟ್ಟಂತೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ದಲಿತ ಸಂಘಟನೆಗಳು ತಾ.ವೈ.ಎನ್‌.ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪಾವಗಡ: ಸಿಂಗರೆಡ್ಡಿಹಳ್ಳಿಯಲ್ಲಿ ದಲಿತ ಮಹಿಳೆ ಮೇಲೆ ಇದೇ ಗ್ರಾಮದ ಸರ್ವಣೀಯರ ಗುಂಪೊಂದು ನಡೆಸಿದ ದೌರ್ಜನ್ಯ ಹಾಗೂ ಹಲ್ಲೆ ಘಟನೆಗೆ ಸಂಬಂಧಪಟ್ಟಂತೆ ದೂರು ದಾಖಲಾಗಿದೆ. ಘಟನೆ ನಡೆದು ಒಂದು ವಾರ ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ವೈ.ಎನ್‌.ಹೊಸಕೋಟೆ ಪೊಲೀಸರು ಮೀನಾಮೇಷ ಎಣಿಸುತ್ತಿರುವುದು ಸಂಶಯಕ್ಕೆ ಎಡೆ ಮಾಡಿದೆ ಕೂಡಲೇ ಕಾನೂನು ರೀತ್ಯ ಕ್ರಮ ಜರಿಗಿಸಿ ದಲಿತರಿಗೆ ನ್ಯಾಯ ಕಲ್ಪಿಸುವಂತೆ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಘಟನೆ ಸಂಚಾಲಕ ಸಿ.ಕೆ.ತಿಪ್ಪೇಸ್ವಾಮಿ ಒತ್ತಾಯಿಸಿದ್ದಾರೆ. ದಲಿತ ಪರ ಸಂಘಟನೆಯ ಮುಖಂಡರು ಭಾನುವಾರ ತಾ.ವೈ.ಎನ್‌.ಹೊಸಕೋಟೆ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಠಾಣಾ ಪಿಎಸ್‌ಐ ಬಳಿ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು ,ತಾಲೂಕಿನ ಸಿಂಗರೆಡ್ಡಿಹಳ್ಳಿಯಲ್ಲಿ ಕಳೆದ ವಾರದ ಹಿಂದೆ ವೈಯುಕ್ತಿಕ ದ್ವೇಷದ ಹಿನ್ನಲೆಯಲ್ಲಿ ಮೇಲ್ಜಾತಿಯ ಯುವಕರ ಗುಂಪು ದಲಿತರ ಮನೆಗೆ ನುಗ್ಗಿ ಮನೆಯಲ್ಲಿದ್ದ ದಲಿತ ಮಹಿಳೆ ಕಮಲಮ್ಮ ಹಾಗೂ ಈಕೆಯ ಪತಿ ಹನುಮಂತರಾಯಪ್ಪರ ಮೇಲೆ ದೌರ್ಜನ್ಯ ವೆಸಗಿ ಹಿಗ್ಗಾಮುಗ್ಗಾ ಥಳಿಸಿದ್ದು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದರು. ಇದು ಒಂದು ಅಮಾನುಷ ಘಟನೆಯಾಗಿದೆ. ಇಂತಹ ಅಧುನಿಕ ಕಾಲದಲ್ಲಿಯೂ ಜಾತಿ ನಿಂದನೆ ಹಾಗೂ ದಲಿತ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ದುರಂತ ಹಾಗೂ ಆತಂಕ ತಂದಿದೆ. ಘಟನೆಗೆ ಸಂಬಂಧ ಪಟ್ಟಂತೆ, ಆರು ಮಂದಿ ಸರ್ವಣೀಯರ ಮೇಲೆ ದೂರು ದಾಖಲಾಗಿದೆ. ಆರೋಪಿಗಳು ಗ್ರಾಮದಲ್ಲಿ ರಾಜಾರೋಷವಾಗಿ ಒಡಾಡುತ್ತಿರುವುದಾಗಿ ತಿಳಿದಿದೆ. ಆದರೂ ಇದುವರೆವಿಗೂ ಆರೋಪಿಗಳನ್ನು ಪೊಲೀಸರು ಬಂಧಿಸದೇ ವಿಳಂಬ ಮಾಡುವ ಉದ್ಧೇಶ ಅರ್ಥವಾಗುತ್ತಿಲ್ಲ. ಘಟನೆ ಸಂಬಂಧ ಡಿವೈಎಸ್‌ಪಿ,ಸಿಪಿಐ ಎಲ್ಲಾರಿಗೂ ಮನವಿ ಮಾಡಿದ್ದೇವೆ. ಭರವಸೆ ನೀಡಿದ್ದಾರೆ. ತಾವೇ ಹೇಳಿದಂತೆ ಇನ್ನೂ ಎರಡು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸದಿದ್ದರೆ, ತಾ,ಎಲ್ಲಾ ದಲಿತ ಸಂಘಟನೆಗಳಿಂದ ವೈ.ಎನ್‌.ಹೊಸಕೋಟೆ ಠಾಣೆಯ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ತಾಲೂಕು ದಲಿತ ಸಂಘರ್ಷ ಸಮಿತಿ ತಾ,ಸಂಚಾಲಕರಾದ ಬಿ.ಪಿ.ಪೆದ್ದಣ್ಣ, ಕೆ.ಪಿ.ಲಿಂಗಣ್ಣ, ಮಹಾ ಅದಿಗ ಹೋರಾಟ ಸಮಿತಿಯ ಅಧ್ಯಕ್ಷ ಕನ್ನಮೇಡಿ ಕೃಷ್ಣಮೂರ್ತಿ, ಮಾದಿಗ ದಂಡೋರದ ವಳ್ಳೂರು ನಾಗೇಶ್‌, ಕಡಮಲಕುಂಟೆ ಹನುಮಂತರಾಯಪ್ಪ, ಎಚ್‌ ಆರ್‌ ಎಫ್‌ ಡಿಎಲ್‌ ತಾ, ಸಂಘಟನೆಯ ಅಧ್ಯಕ್ಷ ಕಡಪಲಕರೆ ನರಸಿಂಹಪ್ಪ, ಟಿ.ಎನ್‌,ಪೇಟೆ ರಾಮಪ್ಪ, ಡಿಎಸ್‌ ಎಸ್‌ ತಾ,ಸಂಚಾಲಕ ನರಸಿಂಹಪ್ಪ, ಕೆ.ವೆಂಕಟೇಶ್, ಹೋರಾಟಗಾರರಾದ ಪ್ರಸಾದ್ ಬಾಬು, ರಾಮಾಂಜಿ ವೈ.ಎನ್. ಹೊಸಕೋಟೆ, ತಮಟೆ ರಾಮಕೃಷ್ಣ, ಜೀವಿಕ ಗಂಗಾಧರ, ಹನುಮಂತರಾಯುಡು ಕೆ.ವೆಂಕಟರಮಣಪ್ಪ ಡಿಎಸ್ಎಸ್,ನಾಗರಾಜಪ್ಪ, ನರೇಂದ್ರ,ಗೋಪಾಲ್, ಇತರೆ ಆನೇಕ ಮಂದಿ ದಲಿತ ಮುಖಂಡರು ಇದ್ದರು.