ಕನ್ನಡಪ್ರಭ ವಾರ್ತೆ ಹುಣಸೂರು ಜಮೀನು ಖಾತೆಗಾಗಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ ವ್ಯಕ್ತಿಯಿಂದ ಹುಣಸೂರು ಉಪವಿಭಾಗಾಧಿಕಾರಿ ಕೆ.ವಿ. ಕಾವ್ಯರಾಣಿ 5.50 ಲಕ್ಷ ರು. ಗಳ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಉಪವಿಭಾಗಾಧಿಕಾರಿಯೊಂದಿಗೆ ಅವರ ಪಿಎ ಶಿವಕುಮಾರ್ ಕೂಡ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಂದು ಅವರ ವಿರುದ್ಧವೂ ಪ್ರಕರಣದ ದಾಖಲಾಗಿದ್ದು, ಇಬ್ಬರನ್ನೂ ಮೈಸೂರಿನ ನ್ಯಾಯಾಲಯದಲ್ಲಿ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಂಗಳೂರು ಮೂಲಧ ವೈದ್ಯೆಯೊಬ್ಬರು ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ವ್ಯಾಪ್ತಿಯಲ್ಲಿ ಸ.ನಂ.17/26ರಲ್ಲಿ ಖರೀದಿಸಿದ್ದ 4.20 ಎಕರೆ ಭೂಮಿಯ ಖಾತೆಗಾಗಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಯುತ್ತಿತ್ತು. ಈ ನಡುವೆ ಖಾತೆಗಾಗಿ ಶಿಫಾರಸು ಮಾಡಲು ಉಪವಿಭಾಗಾಧಿಕಾರಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದಕ್ಕೆ ಒಪ್ಪಿಕೊಂಡ ವೈದ್ಯ ಮೊದಲ ಕಂತಾಗಿ 5 ಲಕ್ಷ ನೀಡಿದ್ದರು. ಬಾಕಿಯಿದ್ದ 5.50 ಲಕ್ಷ ರು.ಗಳನ್ನು ಸೋಮವಾರ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನೀಡುತ್ತಿದ್ದ ವೇಳೆ ಲೋಕಾಯುಕ್ತರು ಸುತ್ತುವರೆದಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವಾರದಿಂದ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ, ಫೋನ್ ಕಾಲ್‌ಗಳನ್ನು ಕಲೆ ಹಾಕುತ್ತಿದ್ದರೆಂದು ಲೋಕಾಯುಕ್ತ ಕಚೇರಿ ಮೂಲಗಳು ತಿಳಿಸಿವೆ. ಪ್ರಕರಣದ ಕುರಿತು ಮಾಹಿತಿ ನೀಡಿದ ಲೋಕಾಯುಕ್ತ ಎಸ್‌ಪಿ ಉದೇಶ್, ಉಪವಿಭಾಗಾಧಿಕಾರಿ ಕಚೇರಿ ಮತ್ತು ಅವರ ನಿವಾಸದಲ್ಲಿ ಮಹಜರು ನಡೆಸಲಾಗಿದೆ. ಲಂಚ ಸ್ವೀಕರಿಸುವ ವೇಳೆ ರೆಡ್‌ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಇಬ್ಬರ ವಿರುದ್ಧವೂ ಎಫ್‌ಐಆರ್ ದಾಖಲಿಸಿ ಮೈಸೂರಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು. ದಾಳಿ ವೇಳೆ ಡಿವೈಎಸ್‌ಪಿ ಶೈಲೇಂದ್ರ, ಮಡಿಕೇರಿ ಡಿವೈಎಸ್‌ಪಿ ದಿನಕರ ಶೆಟ್ಟಿ, ಇನ್ಸ್‌ ಪೆಕ್ಟರ್‌ ಗಳಾದ ರವಿಕುಮಾರ್, ವೀಣಾ ಇದ್ದರು.