ಧಾನ್ಯಗಳ ರಾಶಿಗೆ ಪೂಜೆ ಮಾಡುವ ಮೂಲಕ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಉದ್ಘಾಟನೆ

| Published : Mar 09 2025, 01:50 AM IST

ಧಾನ್ಯಗಳ ರಾಶಿಗೆ ಪೂಜೆ ಮಾಡುವ ಮೂಲಕ ಭತ್ತ ಮತ್ತು ರಾಗಿ ಖರೀದಿ ಕೇಂದ್ರ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರೈತರು ಬೆಳೆ ಕಟಾವು ಮುಗಿದು ಎರಡ್ಮೂರು ತಿಂಗಳ ಬಳಿಕ ಖರೀದಿ ಕೇಂದ್ರ ತೆರೆದರೆ ರೈತರಿಗೆ ಯಾವುದೇ ಪ್ರಯೋಜವಾಗುವುದಿಲ್ಲ. ಕಟಾವು ಆಗುತ್ತಿದ್ದಂತೆ ದಲ್ಲಾಳಿಗಳು ರೈತರಿಂದ ಬೆಳೆ ಖರೀದಿಸಿ ಬೆಂಬಲ ಬೆಲೆ ಘೋಷಣೆಯಾಗುತ್ತಿದ್ದಂತೆ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಪಟ್ಟಣದ ಎಪಿಎಂಸಿ ಆವರಣದಲ್ಲಿ ರಾಜ್ಯ ಸಹಕಾರ ಮಹಾ ಮಂಡಳಯಿಂದ ನೂತನವಾಗಿ ಆರಂಭಿಸಲಾದ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ಶಾಸಕ ಎಚ್.ಟಿ.ಮಂಜು ಧಾನ್ಯ ರಾಶಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶಾಸಕರು, ಸರ್ಕಾರ ಭತ್ತ ಮತ್ತು ರಾಗಿ ಖರೀದಿ ಕೇಂದ್ರವನ್ನು ಬೆಂಬಲ ಬೆಲೆಯಲ್ಲಿ ತೆರೆಯುತ್ತಿರುವುದು. ಶ್ಲಾಘನೀಯ. ಆದರೆ, ಸಕಾಲದಲ್ಲಿ ಖರೀದಿ ಕೇಂದ್ರ ತೆರೆದರೆ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.

ಪ್ರತಿ ಕ್ವಿಂಟಲ್ ರಾಗಿಗೆ 4290 ರು, ಪ್ರತಿ ಕ್ವಿಂಟಲ್ ಭತ್ತಕ್ಕೆ 2300 ರು.ಗಳನ್ನು ನಿಗದಿ ಮಾಡಿದೆ. ಖರೀದಿ ಕೇಂದ್ರ ತಡವಾಗಿ ಆರಂಭಿಸಲಾಗಿರುವುದು ಕಡಿಮೆ ರೈತರಿಗೆ ಮಾತ್ರ ಅನುಕೂಲವಾಗಲಿದೆ. ಎಲ್ಲಾ ರೈತರಿಗೆ ಅನುಕೂಲವಾಗಬೇಕಾದರೆ ವರ್ಷವಿಡೀ ಖರೀದಿ ಕೇಂದ್ರಗಳನ್ನು ತೆರೆದಿರುವಂತೆ ಕ್ರಮ ವಹಿಸಬೇಕಾಗಿದೆ ಎಂದರು.

ರೈತರು ಬೆಳೆ ಕಟಾವು ಮುಗಿದು ಎರಡ್ಮೂರು ತಿಂಗಳ ಬಳಿಕ ಖರೀದಿ ಕೇಂದ್ರ ತೆರೆದರೆ ರೈತರಿಗೆ ಯಾವುದೇ ಪ್ರಯೋಜವಾಗುವುದಿಲ್ಲ. ಕಟಾವು ಆಗುತ್ತಿದ್ದಂತೆ ದಲ್ಲಾಳಿಗಳು ರೈತರಿಂದ ಬೆಳೆ ಖರೀದಿಸಿ ಬೆಂಬಲ ಬೆಲೆ ಘೋಷಣೆಯಾಗುತ್ತಿದ್ದಂತೆ ಖರೀದಿ ಕೇಂದ್ರಗಳಿಗೆ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಳ್ಳುತ್ತಾರೆ ಎಂದರು.

ರೈತರು ಹವಾಮಾನಕ್ಕೆ ಅನುಗುಣವಾಗಿ, ಮಣ್ಣಿನ ಫಲವತ್ತತೆ, ಮಾರುಕಟ್ಟೆ ನಿರ್ವಹಣೆ, ನೀರಿನ ಲಭ್ಯತೆಗಳ ಆಧಾರದ ಮೇಲೆ ಬೇರೆ ಬೇರೆ ಬೆಳೆ ಬೆಳೆಯಬೇಕು. ಸಮಗ್ರ ಕೃಷಿಗೆ ಒತ್ತು ನೀಡಬೇಕು. ಸಮಗ್ರ ಕೃಷಿಯಿಂದ ವರ್ಷವಿಡಿ ಆದಾಯ ಗಳಿಸಬಹುದು. ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ತಪ್ಪಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಳೆದ ವರ್ಷದಿಂದ ಜಾರಿಗೆ ತರಲಾಗಿದೆ. ಇದನ್ನು ಮೀರಿ ದಲ್ಲಾಳಿಗಳು ಖರೀದಿ ಕೇಂದ್ರದಲ್ಲಿ ಭಾಗಿದಾರರಾದರೆ ಅದಕ್ಕೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನೇ ಹೊಣೆಗಾರಿಕೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಈ ವೇಳೆ ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಎಸ್.ಎಲ್.ಮೋಹನ್, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕಿರಾಂ, ಎಪಿಎಂಸಿ ಕಾರ್ಯದರ್ಶಿ ಸತೀಶ್, ಮುಖಂಡರಾದ ನಾಗರಾಜೇಗೌಡ, ಡಿ.ಎಸ್.ನಾಗೇಂದ್ರ, ಚಟ್ಟೇನಹಳ್ಳಿ ನಾಗರಾಜು, ಆಹಾರ ಇಲಾಖೆ ನಟರಾಜ್, ಫೆಡರೇಷನ್ ವಿಭಾಗೀಯ ಮಾರಾಟ ವ್ಯವಸ್ಥಾಪಕ ವೆಂಕಟೇಶ್ ನಾಯಕ್, ಪಾಂಡವಪುರ ವ್ಯವಸ್ಥಾಪಕಿ ಶೀಲಾ, ಫೆಡರೇಷನ್ ಅಧಿಕಾರಿಗಳಾದ ರಘುಗೌಡ, ಮಧು, ಕಾರ್ತಿಕ್, ಉಗ್ರಣ ನಿಗಮ ಶಾಖಾ ವ್ಯವಸ್ಥಾಪಕ ಪ್ರದೀಪ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಇತರರಿದ್ದರು.