ಕನ್ನಡಪ್ರಭ ವಾರ್ತೆ ಉಡುಪಿ ನವದೆಹಲಿ ವಸಂತಕುಂಜ್ ನಲ್ಲಿರುವ ಪೇಜಾವರ ಶಾಖಾಮಠದ ಶ್ರೀ ಕೃಷ್ಣಧಾಮದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ 60 ನೇ ಜನ್ಮವರ್ಧಂತಿ ಪ್ರಸನ್ನಾಭಿವಂದನಮ್ ಗುರುವಾರ ಅದ್ಧೂರಿಯಿಂದ ನಡೆಯಿತು. ಚೆಂಡೆ, ವಾದ್ಯ, ಮಂತ್ರಘೋಷಗಳೊಂದಿಗೆ ಶ್ರೀಗಳಿಗೆ ಮುತ್ತುರತ್ನಗಳಿಂದ ಅಭಿಷೇಕ ನೆರವೇರಿಸಿ ನಿಧಿ ಸಮರ್ಪಿಸಿ ಅಭಿವಂದನೆ ಸಲ್ಲಿಸಲಾಯಿತು . ಬಳಿಕ ನಡೆದ ಸಭೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಪೇಜಾವರ ಶ್ರೀಗಳು ತಮ್ಮಗುರು ಶ್ರೀ ವಿಶ್ವೇಶ ತೀರ್ಥರ ದಾರಿಯಲ್ಲೆ ನಡೆಯುತ್ತಾ ದೇಶಾದ್ಯಂತ ನಿರಂತರ ಸಂಚರಿಸುತ್ತಾ ಧರ್ಮಪ್ರಸಾರ ಮತ್ತು ಜನ ಸೇವಾ ಚಟುವಟಿಕೆಗಳ ಮೂಲಕ ರಾಷ್ಟ್ರದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಅವರು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ದಕ್ಷಿಣ ಭಾರತದ ಪ್ರತಿನಿಧಿಯಾಗಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು. ಕೇಂದ್ರ ಸರ್ಕಾರದ ಮಾಜಿ ಸಚಿವ ಪ್ರತಾಪಚಂದ್ರ ಸಾರಂಗಿ, ಸಾಧುಸಂತರ ತಪಸ್ಸಿನ ಧಾರೆ ಈ ನೆಲದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದೆ. ಆದ್ದರಿಂದಲೇ ಭಾರತ ಇಂದು ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಯಾಗಿ, ವಿಶ್ವಕ್ಕೆ ಮಾರ್ಗದರ್ಶನ ಮಾಡುವ ಶಕ್ತಿಯನ್ನು ಪಡೆದಿದೆ ಎಂದು ಪೇಜಾವರ ಶ್ರೀಗಳನ್ನು ಅಭಿನಂದಿಸಿದರು. ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನ ಕೇಂದ್ರದ ನಿರ್ದೇಶಕ ಡಾ.ಎ.ವಿ. ನಾಗಸಂಪಿಗೆ ಅಭಿನಂದನಾ ಭಾಷಣ ಮಾಡಿದರು . ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ ಅಲೋಕ್ ಕುಮಾರ್ , ರಾಜಸ್ಥಾನದ ಮೀರಾಬಾಯಿ ಆಶ್ರಮದ ಲಲಿತಮೋಹನ್ ಓಝಾ, ದೆಹಲಿ ಕೈಗಾರಿಕಾ ಇಲಾಖೆಯ ರಂಜಿತ್ ಸಿಂಗ್, ದೆಹಲಿ ಪೇಜಾವರ ಮಠದ ವಿಶ್ವಸ್ಥ ಅರವಿಂದ ಕಟ್ಟೀಮನಿ ಮತ್ತಿತರರಿದ್ದರು. ಲಾಲ್ ಬಹದ್ದೂರ್ ಶಾಸ್ತ್ರಿ ಸಂಸ್ಕೃತ ವಿ.ವಿ. ಕುಲಪತಿ ಪ್ರೊ.ಮಣಿಕಂಠ ತ್ರಿಪಾಠಿ, ಕೇಂದ್ರೀಯ ಸಂಸ್ಕೃತ ವಿ.ವಿ. ಕುಲಪತಿ ಡಾ.ಶ್ರೀನಿವಾಸ ವರಖೇಡಿ, ವಿದ್ವಾಂಸರಾದ ವೀರನಾರಾಯಣ ಪಾಂಡುರಂಗಿ, ರಾಮವಿಠಲಾಚಾರ್ಯ, ಕೃಷ್ಣಕುಮಾರ ಆಚಾರ್ಯ, ಕೇಂದ್ರೀಯ ಗುಪ್ತಚರ ಇಲಾಖೆ ಅಧಿಕಾರಿ ಪುಷ್ಪಾ ರಾವ್, ರಾಷ್ಟ್ರಪತಿಗಳ ಅಧೀನ ಕಾರ್ಯದರ್ಶಿ ಪದ್ಮ ಅಗ್ನಿಹೋತ್ರಿ, ಸುಪ್ರೀಂ ಕೋರ್ಟ್ ನ್ಯಾಯವಾದಿ ನಾಗೇಶ್ ಭಟ್ ಪುತ್ತಿಗೆ, ದೆಹಲಿಯ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು. ಪೆರಂಪಳ್ಳಿ ವಾಸುದೇವ ಭಟ್ ಕಾರ್ಯಕ್ರಮ ಸಂಯೋಜಿಸಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.