ಪಂಪ ಪ್ರಶಸ್ತಿ ಗೌರವ: ಮಂಗಳೂರು ವಿವಿಯಲ್ಲಿ ಪ್ರೊ. ವಿವೇಕ ರೈ ಅಭಿವಂದನೆ

| Published : Jun 04 2025, 01:28 AM IST

ಪಂಪ ಪ್ರಶಸ್ತಿ ಗೌರವ: ಮಂಗಳೂರು ವಿವಿಯಲ್ಲಿ ಪ್ರೊ. ವಿವೇಕ ರೈ ಅಭಿವಂದನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ವಾಂಸ ಪ್ರೊ. ಬಿ.ಎ ವಿವೇಕ ರೈ ಅವರಿಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ದೊರಕಿದ ಪ್ರಯುಕ್ತ ಬುಧವಾರ ಮಂಗಳೂರು ವಿವಿಯಲ್ಲಿ ಅಭಿವಂದನ ಸಮಾರಂಭ ನೆರವೇರಿತು.

ಕರಾವಳಿಯಲ್ಲಿ ಪ್ರೀತಿಯ ದೀಪ ಹಚ್ಚೋಣ : ಪ್ರೊ.ವಿವೇಕ ರೈಕನ್ನಡಪ್ರಭ ವಾರ್ತೆ ಉಳ್ಳಾಲನಾವು ಕರಾವಳಿಯಲ್ಲಿ ದ್ವೇಷ ಬಿತ್ತುವುದು ಬೇಡ. ಬೆಂಕಿ ಹಚ್ಚುವುದೂ ಬೇಡ. ಮನುಷ್ಯ ಪ್ರೀತಿಯ ದೀಪ ಹಚ್ಚೋಣ. ಬಹುತ್ವದ ಈ ಮಣ್ಣಿನಲ್ಲಿ ನಾಡಿಗೆ ಹೊಸ ಸಂವೇದನೆಯನ್ನು ದಾಟಿಸಬಲ್ಲ ಶಕ್ತಿಯಿದೆ. ಎಲ್ಲ ಅಭಿಪ್ರಾಯಗಳಿಗೂ ಕಿಟಕಿ ಬಾಗಿಲುಗಳನ್ನು ತೆರೆದಿಟ್ಟು ಪರಸ್ಪರ ಗೌರವ ಪ್ರೀತಿಗೆ ಬದ್ಧವಾದ ಸಮಾಜವನ್ನು ಕಟ್ಟೋಣ ಎಂದು ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಿಭಾಗದ ಅಧ್ಯಕ್ಷರಾಗಿ ಬಳಿಕ ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯಗಳ ಕುಲಪತಿಯಾಗಿ ಕರ್ತವ್ಯ ನಿರ್ವಹಿಸಿದ ವಿದ್ವಾಂಸ ಪ್ರೊ. ಬಿ.ಎ ವಿವೇಕ ರೈ ಅವರಿಗೆ ಕರ್ನಾಟಕ ಸರ್ಕಾರ ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿ ದೊರಕಿದ ಪ್ರಯುಕ್ತ ಬುಧವಾರ ಮಂಗಳೂರು ವಿವಿಯಲ್ಲಿ ನಡೆದ ಅಭಿವಂದನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.ವಿಶ್ವವಿದ್ಯಾನಿಲಯಗಳನ್ನು ಕಟ್ಟಡ, ಹಣದಿಂದ ಕಟ್ಟಲು ಸಾಧ್ಯವಿಲ್ಲ. ಶೈಕ್ಷಣಿಕ ಕಾಳಜಿ, ಜ್ಞಾನದ ಬಗೆಗಿನ ಹಸಿವು ಮತ್ತು ಮಾನವೀಯ ಸಂಬಂಧಗಳ ಸಂಘಟಿತ ಪ್ರಯತ್ನದ ಮೂಲಕ ಕಟ್ಟಬೇಕು ಎಂದು ಹೇಳಿದರು.ಕುವೆಂಪು ಮತ್ತು ಕಾರಂತರ ಬರವಣಿಗೆ ಮತ್ತು ಬದುಕು ನನಗೆ ಆದರ್ಶ. ಪಂಪ ನನ್ನ ಇಷ್ಟದ ಕವಿ. ಪಂಪನ ಕುರಿತಾಗಿಯೇ ಮುಂದಿನ ನನ್ನ ಕೃತಿ ಬರಲಿದೆ. ಸಾಹಿತ್ಯದ ಓದು ನನಗೆ ಬದುಕಿನ ಪ್ರಾಮಾಣಿಕತೆಯನ್ನು ಕಲಿಸಿದೆ. ಕುಲಪತಿಯಾದ ಬಳಿಕ ಮೂಡಾದಿಂದ ಸೈಟಿನ ಕೊಡುಗೆ ಬಂದಿತ್ತು. ಅಧಿಕಾರಿಗಳು ‘ತಕೊಳ್ಳಿ ಸರ್ ಮುಂದೆ ಮಾರಬಹುದು’ ಎಂದರೂ ನನಗೆ ಸರಿ ಕಾಣಲಿಲ್ಲ. ನಾನು ಅದನ್ನು ನಿರಾಕರಿಸಿದೆ ಎಂದರು.ಅಭಿನಂದನ ಭಾಷಣ ಮಾಡಿದ ಜಾನಪದ ವಿದ್ವಾಂಸ, ಕರ್ನಾಟಕ ಜಾನಪದ ವಿವಿ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪಗೌಡ ಅವರು, ‘ನಿಮ್ನ ಮುಡಿಗೆ ಹೂವನ್ನಲದೆ ಹುಲ್ಲ ತರೆನು’ ಇದು ಪ್ರೊ.ವಿವೇಕ್ ರೈಗಳ ಬದುಕಿನ ಯಶಸ್ಸಿನ ಗುಟ್ಟು. ಜೀವನದುದ್ದಕ್ಕೂ ಶಿಸ್ತು, ಕಾಯಕನಿಷ್ಟೆಯೊಂದಿಗೆ ಬೆಳೆದವರು. ಅವರ ವಿಮರ್ಶೆಗಳಲ್ಲೂ ಖಂಡನೆ ಇಲ್ಲ ಮಂಡನೆ ಇದೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್. ಧರ್ಮ ಅವರು,

ದ.ಕ.ಜಿಲ್ಲೆಯ ಸಾಹಿತ್ಯ , ಸಂಸ್ಕೃತಿಯ ಅಪಾರ ಜ್ಞಾನದೊಂದಿಗೆ ಮನಸ್ಸುಗಳನ್ನು ಜೋಡಿಸುವ ಕಾರ್ಯ ಮಾಡಿರುವ ಪ್ರೊ.ವಿವೇಕ್ ರೈ ಅವರು, ಮಂಗಳೂರು ಕ್ಯಾಂಪಸ್ ಹೊಸ ರೀತಿಯ ಶೈಕ್ಷಣಿಕ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟಿದ್ದರು. ವಿವೇಕ್ ರೈ ಕಟ್ಟಿಕೊಟ್ಟಿರುವ ಪರಂಪರೆಯನ್ನು ಮುನ್ನಡೆಸಲಿದ್ದೇವೆ ಎಂದರು.ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ವೈ ಸಂಗಪ್ಪ, ಪರೀಕ್ಷಾಂಗ ಕುಲಸಚಿವ ಪ್ರೊ.ದೇವೇಂದ್ರಪ್ಪ , ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಅಭಯಕುಮಾರ್, ಪ್ರೊ. ಶಿವರಾಮ ಶೆಟ್ಟಿ , ಪ್ರಾಧ್ಯಾಪಕರಾದ ಡಾ.ನಾಗಪ್ಪ ಗೌಡ ಮೊದಲಾದವರು ಇದ್ದರು.ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ‌ ಪ್ರೊ ಸೋಮಣ್ಣ ಹೊಂಗಳ್ಳಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ವಂದಿಸಿದರು. ಉಪನ್ಯಾಸಕ ಡಾ.ಯಶುಕುಮಾರ್ ನಿರೂಪಿಸಿದರು.