ಶ್ರೀರಂಗಪಟ್ಟಣದಲ್ಲಿ ಎಲ್ಲಾ ಎಕ್ಸ್ ಪ್ರೆಸ್ ರೈಲು ನಿಲುಗಡೆಗೆ ಪಾಪು ಒತ್ತಾಯ

| Published : Oct 17 2024, 12:12 AM IST

ಸಾರಾಂಶ

ಐತಿಹಾಸಿಕ ಸ್ಥಳವಾಗಿರುವ ಶ್ರೀರಂಗಪಟ್ಟಣದಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶ-ವಿದೇಶಗಳಿಂದ ಹಾಗೂ ಕೆಲವು ಹೊರರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಬಂದು-ಹೋಗುವ ಸ್ಥಳ. ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ ಸುಂದರ ಪ್ರವಾಸಿ ತಾಣವಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಐತಿಹಾಸಿಕ ಸ್ಥಳಗಳನ್ನು ಹೊಂದಿರುವ ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಎಕ್ಸ್ ಪ್ರೆಸ್ ರೈಲುಗಳನ್ನು ನಿಲ್ಲಿಸಬೇಕು ಎಂದು ರೈಸಂಘದ ಮುಖಂಡ ಕಿರಂಗೂರು ಪಾಪು (ಮೋಹನ್‌ಕುಮಾರ್) ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈ ಹಿಂದೆಯೂ ಬೆಂಗಳೂರು-ಮೈಸೂರು ಕಡೆಗೆ ಹೋಗುವ ಎಲ್ಲ ಎಕ್ಸ್ ಪೆರ್ಸ್ ರೈಲುಗಾಡಿಗಳನ್ನು ನಿಲ್ಲಿಸಬೇಕೆಂದು ಕೇಂದ್ರದ ರೈಲ್ವೆ ಸಚಿವರು ಹಾಗೂ ಕೇಂದ್ರದ ವಲಯದ ಅಧಿಕಾರಿಗಳು ಜಿಲ್ಲೆಯ ಸಂಸತ್ ಸದಸ್ಯರನ್ನು ಈ ಹಿಂದೆಯೇ ಒತ್ತಾಯಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಒತ್ತಾಯದ ಮೇರೆಗೆ ಕೆಲವು ರೈಲುಗಳು ನಿಲ್ಲಲು ವಲಯದ ಅಧಿಕಾರಿಗಳಿಂದ ದೆಹಲಿ ಅಧಿಕಾರಿಗಳ ಆದೇಶಕ್ಕಾಗಿ ನೀಡಿದ್ದು ಸರಿಯಷ್ಟೆ. ಆದರೆ, ಇದುವರೆಗೂ ಆದೇಶಗಳು ಜಾರಿಯಾಗಿಲ್ಲ. ರೈಲು ಗಾಡಿಗಳು ನಿಲ್ಲುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಐತಿಹಾಸಿಕ ಸ್ಥಳವಾಗಿರುವ ಶ್ರೀರಂಗಪಟ್ಟಣದಲ್ಲಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ದೇಶ-ವಿದೇಶಗಳಿಂದ ಹಾಗೂ ಕೆಲವು ಹೊರರಾಜ್ಯಗಳಿಂದ ಹೆಚ್ಚಿನ ಪ್ರವಾಸಿಗರು ಬಂದು-ಹೋಗುವ ಸ್ಥಳ. ದೇಶ-ವಿದೇಶಗಳಲ್ಲಿ ಖ್ಯಾತಿ ಪಡೆದ ಸುಂದರ ಪ್ರವಾಸಿ ತಾಣವಾಗಿದೆ ಎಂದು ತಿಳಿಸಿದ್ದಾರೆ.

ಇಂತಹ ಸ್ಥಳದಲ್ಲಿ ಇತಿಹಾಸ ಸಾರುವ ಶ್ರೀರಂಗನಾಥಸ್ವಾಮಿ, ನಿಮಿಷಾಂಬ, ಲಕ್ಷ್ಮಿನರಸಿಂಹ, ಗಂಗಾಧರ ಸ್ವಾಮಿ, ಹೆಬ್ಬಾಗಿಲು ಆಂಜನೇಯ ಸ್ವಾಮಿ, ಅಹಲ್ಯಾದೇವಿ ಮಾರಮ್ಮ, ಕ್ಷಣಿಕಾಂಬ ದೇವಾಲಯಗಳು ಇಲ್ಲಿವೆ. ಕೆಲವು ಹೊರರಾಜ್ಯದಿಂದ ಜನರು ಬಂದು ಕಾವೇರಿ ತೀರದಲ್ಲಿರುವ ಪಶ್ಚಿಮವಾಹಿನಿಯಲ್ಲಿ ಅಸ್ಥಿತರ್ಪಣ ಬಿಡಲು ಜನರು ಬಂದು ಹೋಗುತ್ತಾರೆ ಎಂದು ಹೇಳಿದ್ದಾರೆ.

ಈ ಹಿಂದೆ ಟಿಪ್ಪುಸುಲ್ತಾನ್ ಆಳ್ವಿಕೆಯಲ್ಲಿ ಶ್ರೀರಂಗಪಟ್ಟಣ ರಾಜಧಾನಿಯಾಗಿತ್ತು. ಟಿಪ್ಪು ಆಳ್ವಿಕೆಯ ಅರಮನೆಗಳು, ಗುಂಡು ತೋಪುಗಳು, ಮದ್ದಿನ ಮನೆಗಳು, ಜೈಲು ಖಾನೆಗಳು, ದರಿಯಾದೌಲತ್ತು, ಗುಂಬಜ್, ಸಂಗಮ ಇನ್ನು ಮೈಸೂರು ಮಹಾರಾಜರು ಸ್ಥಾಪಿಸಿರುವ ದೇವಾಲಯ, ಕೃಷ್ಣರಾಜ ಸಾಗರ ಅಣೆಕಟ್ಟು, ಬೃಂದಾವನ, ಬಲಮುರಿ, ರಂಗನತಿಟ್ಟು ಇವುಗಳನ್ನು ವೀಕ್ಷಿಸಲು ದೇಶ-ವಿದೇಶಗಳಿಂದ ದಿನನಿತ್ಯ ಸಾವಿರಾರು ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಾರೆ ಎಂದು ಹೇಳಿದ್ದಾರೆ.

ಮೈಸೂರಿಗೆ ಬರುವ ಸಾವಿರಾರು ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಬಂದು ಹೋಗುತ್ತಾರೆ. ಸ್ಥಳೀಯರು ನಿತ್ಯ ಕೆಲಸಗಳಿಗಾಗಿ ರೈಲುಗಾಡಿಗಳನ್ನೇ ಅವಲಂಬಿಸಿರುತ್ತಾರೆ. ಆದ್ದರಿಂದ ಎಲ್ಲಾ ಎಕ್ಸ್ ಪ್ರೆಸ್ ರೈಲುಗಾಡಿಗಳು ನಿಲ್ಲಿಸಿ ಜನರು, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕು. ಈ ಬಗ್ಗೆ ಸಂಸದರಾದ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶಾಸಕ ರಮೇಶ ಬಂಡಿಸಿದ್ದೇಗೌಡ ಕೇಂದ್ರ ರೈಲ್ವೆ ಸಚಿವರಿಗೆ ಮನವರಿಕೆ ಮಾಡಿಕೊಂಡಬೇಕು ಎಂದು ಪಾಪು ಕೋರಿದ್ದಾರೆ.