ಸಾರಾಂಶ
ಕಾರ್ಯಕ್ರಮವನ್ನು ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ನಡೆಸಿಕೊಟ್ಟು, ಪಾದ ಪೂಜೆಯ ಮಹತ್ವವನ್ನು ತಿಳಿಸಿಕೊಟ್ಟರು.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಜನ್ಮದಾತರನ್ನು ದೇವಸ್ವರೂಪಿಗಳಾಗಿ ಪರಿಗಣಿಸಿ ಪೂಜಿಸುವ ಹಾಗೂ ಜನ್ಮದಾತರೂ ಕರ್ತವ್ಯಬದ್ಧರಾಗುವ ವಿನೂತನ ಕಾರ್ಯಕ್ರಮ ಜನ್ಮದಾತರ ಪಾದಪೂಜನಾ ಕಾರ್ಯಕ್ರಮ ಉಪ್ಪಿನಂಗಡಿಯ ವೇದಶಂಕರದಲ್ಲಿರುವ ಶ್ರೀರಾಮ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.ಹತ್ತನೇ ತರಗತಿ ಪರೀಕ್ಷೆಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶಾಲೆಯಿಂದ ನಿರ್ಗಮಿಸುವ ಹಿನ್ನೆಲೆಯಲ್ಲಿ ಅವರ ಬಾಳು ಬೆಳಗಲಿ, ಅವರೆಲ್ಲರೂ ರಾಷ್ಟ್ರಕ್ಕೆ ಸಂಪತ್ತಾಗಿ ರೂಪುಗೊಳ್ಳಲಿ ಎಂಬ ಆಶಯದೊಂದಿಗೆ ದೀಪ ಪ್ರಧಾನ ಕಾರ್ಯಕ್ರಮವನ್ನು ನಡೆಸಲಾಯಿತು. ಅದರೊಂದಿಗೆ ವಿದ್ಯಾರ್ಥಿಗಳು ತಮ್ಮ ತಮ್ಮ ಜನ್ಮದಾತರ ಪಾದಪೂಜೆ ಮಾಡಿದರು.
ಕಾರ್ಯಕ್ರಮವನ್ನು ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ನಡೆಸಿಕೊಟ್ಟು, ಪಾದ ಪೂಜೆಯ ಮಹತ್ವವನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ಯು.ಜಿ. ರಾಧ ಮತ್ತು ಆಡಳಿತ ಮಂಡಳಿಯ ಸದಸ್ಯ ಜಯಂತ ಪೊರೋಳಿ, ಶಾಲಾಡಳಿತ ಮಂಡಳಿ ಅಧ್ಯಕ್ಷ ಸುನೀಲ್ ಅನಾವು, ಉಪಾಧ್ಯಕ್ಷೆ ಅನುರಾಧಾ ಆರ್. ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ಗುಣಕರ ಅಗ್ನಾಡಿ, ಗಣೇಶ್ ಕುಲಾಲ್, ಶಾಲಾ ಪೋಷಕ ಸಂಘದ ಅಧ್ಯಕ್ಷ ಮೋಹನ್ ಭಟ್, ಪ್ರೌಢಶಾಲೆ ಮುಖ್ಯ ಶಿಕ್ಷಕ ರಘುರಾಮ್ ಭಟ್ ಸಿ., ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ವಿಮಲಾ ಉಪಸ್ಥಿತರಿದ್ದರು. ಶಿಕ್ಷಕಿ ಶ್ವೇತಾ ಜಿ. ಸ್ವಾಗತಿಸಿದರು. ಸ್ವಾತಿ ವಂದಿಸಿದರು. 9ನೇ ತರಗತಿ ವಿದ್ಯಾರ್ಥಿನಿಯರಾದ ಅನ್ವಿ, ಸುರಭಿ ಮತ್ತು ಕಾವ್ಯ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.