ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಪೋಷಕರು ಪ್ರೀತಿ ವಿಶ್ವಾಸದಿಂದ ವಿದ್ಯೆ ಕಲಿಸಬೇಕು. ಆ ನಿಟ್ಟಿನಲ್ಲಿ ಯುವಕರಿಗೆ ಸೂಕ್ತ ದಿಕ್ಸೂಚಿ ದೊರೆತಾಗ ಅವರ ಪ್ರತಿಭೆ ಹೊರ ಹೊಮ್ಮುತ್ತದೆ ಎಂದು ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸುಧೀರ್ ಪೈ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ವಿದ್ಯಾರ್ಥಿಗಳಿಗೆ ಶಿಕ್ಷಕರು ಮತ್ತು ಪೋಷಕರು ಪ್ರೀತಿ ವಿಶ್ವಾಸದಿಂದ ವಿದ್ಯೆ ಕಲಿಸಬೇಕು. ಆ ನಿಟ್ಟಿನಲ್ಲಿ ಯುವಕರಿಗೆ ಸೂಕ್ತ ದಿಕ್ಸೂಚಿ ದೊರೆತಾಗ ಅವರ ಪ್ರತಿಭೆ ಹೊರ ಹೊಮ್ಮುತ್ತದೆ ಎಂದು ಕಾರ್ಡಿಯಲ್ ಇಂಟರ್ ನ್ಯಾಷನಲ್ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಸುಧೀರ್ ಪೈ ತಿಳಿಸಿದರು.

ಭಾನುವಾರ ಪಟ್ಟಣದ ವಿಪ್ರ ಸೇವಾ ಟ್ರಸ್ಟ್ ಆಶ್ರಯದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿಪ್ರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿಪ್ರ ಬಂಧುಗಳಿಗೆ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕನಸು ಕಾಣದೆ ಗುರಿ ಮುಟ್ಟಲಾಗದು. ಭವಿಷ್ಯದಲ್ಲಿ ರಾಷ್ಟ್ರದ ಕಟ್ಟುವತ್ತ ಮಹತ್ವದ ಪಾತ್ರ ವಹಿಸುತ್ತಾರೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಪ್ರ ಸೇವಾ ಟ್ರಸ್ಟ್ ಅಧ್ಯಕ್ಷ ವಿದ್ವಾನ್ ನಾಗರಾಜಶಾಸ್ತ್ರಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಗುರಿ ಸಾಧಿಸಲು ಸಂಕಲ್ಪ ಶಿಸ್ತು ಅಳವಡಿಸಿಕೊಳ್ಳಬೇಕು ಎಂದರು.

ವಿಪ್ರಸೇವಾ ಟ್ರಸ್ಟ್ ಗೌರವಾಧ್ಯಕ್ಷ ತಾಡಿ ಶಿವರಾಮ್ ಮಾತನಾಡಿ, ವಿದ್ಯಾರ್ಥಿಗಳು ಜೊತೆಗೆ ಉತ್ತಮ ವಿದ್ಯೆ ಕಲಿಯುವ ಜೊತೆಗೆ ನಮ್ಮ ಭಾರತೀಯ ಸನಾತನ ಸಂಸ್ಕೃತಿ, ಸಂಸ್ಕಾರ, ಮೈಗೂಡಿಸಿಕೊಂಡು ತಾವು ಹುಟ್ಟಿದ ಊರಿಗೆ ಹೆತ್ತವರಿಗೆ ಗುರು ಪರಂಪರೆಗೆ ಗೌರವ ನೀಡಿ ಕೀರ್ತಿ ತರಬೇಕು. ದೇಶದ ಅಭಿವೃದ್ಧಿಯತ್ತ ಸಾಗಬೇಕು ಎಂದರು.

ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ರವಿಶಂಕರ್ ಮಾತನಾಡಿ, ಇಂದಿನ ದಿನಗಳಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸರ್ಕಾರದಲ್ಲಿ ಪ್ರೋತ್ಸಾಹವಿಲ್ಲದಂತಾಗಿದೆ. ನಮ್ಮ ರಾಜ್ಯದ ಇತಿಹಾಸದಲ್ಲಿ ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಿರಲಿಲ್ಲ ಆದರೆ ಪ್ರಸ್ತುತ ರಾಜ್ಯದಲ್ಲಿ ಗಣನೀಯ ಸಂಖ್ಯೆಯಲ್ಲಿ ಇರುವ ಬ್ರಾಹ್ಮಣ ಸಮುದಾಯಕ್ಕೆ ಪ್ರಾತಿನಿಧ್ಯ ಇಲ್ಲದಂತಾಗಿದೆ ಇದು ಖಂಡನಾರ್ಹ ಎಂದರು.

ಸಮಾರಂಭದಲ್ಲಿ ವಿಪ್ರ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ಶಿವಕುಮಾರ್ , ಶಂಕರ ಸೇವಾ ಸಮಿತಿ ಗೌರವಾಧ್ಯಕ್ಷ ಸೂರ್ಯನಾರಾಯಣರಾವ್, ಶಾರದ ಮಹಿಳಾ ಮಂಡಳಿ ಅಧ್ಯಕ್ಷೆ ಶಕುಂತಲಾ ಗುಂಡುರಾವ್ ಮಾತನಾಡಿದರು.

ವಿಪ್ರ ಸೇವಾ ಟ್ರಸ್ಟ್ ಪದಾಧಿಕಾರಿಗಳಾದ ಅಡಿಟರ್ ಲಕ್ಷ್ಮೀಪ್ರಸಾದ್, ಶ್ರೀನಿವಾಸಮೂರ್ತಿ, ರವೀಶ್, ಅಶೋಕ್ ಹೆಬ್ಬಾರ್, ವಿಪ್ರ ಸೇವಾ ಟ್ರಸ್ಟ್ ಕಾರ್ಯದರ್ಶಿ ಚಿ.ಸೂ.ಕೃಷ್ಣಮೂರ್ತಿ ಸ್ವಾಗತಿಸಿ, ರವೀಶ್ ನಿರೂಪಿಸಿ ಶ್ರೀನಿವಾಸಮೂರ್ತಿ ವಂದಿಸಿದರು.