ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ಸಮಿತಿ ಹಾಗೂ ಪ್ರಾಧಿಕಾರ ನೀರು ಹರಿಸುವಂತೆ ಆದೇಶ ನೀಡಿವೆ. ತಮಿಳುನಾಡಿಗೆ ಹರಿಸಿ ಕಾವೇರಿ ಕೊಳ್ಳದ ರೈತರಿಗೆ ವಂಚಿಸಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ ಖಂಡಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಕೆ.ಎಂ.ದೊಡ್ಡಿಯಲ್ಲಿ ಭಾಗಶಃ ಯಶಸ್ವಿಯಾಯಿತು.

ವರ್ತಕರು ಸ್ವಯಂ ಪ್ರೇರಿತರಾಗಿ ಬಂದ್ ನಡೆಸಿ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ವರ್ತಕರ ಸಂಘ ಬಂದ್‌ಗೆ ಸಂರ್ಪೂಣ ಸಹಕಾರ ನೀಡಿತ್ತು ಬೆಳಗ್ಗೆಯಿಂದ ಸಂಜೆ 6 ವರೆಗೆ ಬಂದ್ ನಡೆಸಿದರು. ಮೆಡಿಕಲ್, ನಂದಿನಿ ಪಾರ್ಲರ್ , ಆಸ್ಪತ್ರೆ ಮತ್ತು ಶಾಲಾ ಕಾಲೇಜು ಹೊರತು ಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟಗಳು ಬಾಗಿಲು ಮುಚ್ಚಿ ನಮ್ಮ ನೀರು ನಮ್ಮ ಹಕ್ಕು ಎಂದು ಬಂದ್ ಯಶಸ್ವಿಯಾಗಲು ಸಹಕರಿಸಿದರು.

ಖಾಲಿ ಬಂದಿಗೆ ಹಿಡಿದು ಪ್ರತಿಭಟನೆ:

ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯುಸಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ಕಾವೇರಿ ನದಿ ನಿರ್ವಹಣ ಪ್ರಾಧಿಕಾರ ನೀಡಿರುವ ಆದೇಶ ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಖಾಲಿ ಬಿಂದಿಗೆ ಹಿಡಿದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ವಿಶ್ವೇಶ್ವರಯ್ಯ ವೃತ್ತದ ಬಳಿ ಸೇರಿದ ವಿವಿಧ ಸಂಘಟನೆ ಹಾಗೂರೈತ ಸಂಘದ ಹೆದ್ದಾರಿ ತಡೆ ಮಾಡಿ ವಾಹನಗಳ ಸಂಚಾರಕ್ಕೆ ಕೆಲಕಾಲ ಅಡ್ಡಿ ಪಡಿಸಿ ಧಿಕ್ಕಾರ ಕೂಗಿದರು.

ಪ್ರಗತಿಪರ ಸಂಘಟನೆ ಅಧ್ಯಕ್ಷ ಪ್ರೊ.ಬಿ.ಎಸ್.ಬೋರೇಗೌಡ, ರೈತ ಸಂಘದ ಮುಖಂಡ ಕುರಿಕೆಂಪನದೊಡ್ಡಿ ರಾಮಲಿಂಗೇಗೌಡ ಮಾತನಾಡಿ, ತಮಿಳುನಾಡು ಸರ್ಕಾರದ ಒತ್ತಡಕ್ಕೆ ಮಣಿದು ಸಮಿತಿ ಹಾಗೂ ಪ್ರಾಧಿಕಾರ ನೀರು ಹರಿಸುವಂತೆ ಆದೇಶ ನೀಡಿವೆ ಎಂದು ದೂರಿದರು.

ಮುಖಂಡ ಕೆ.ಪಿ.ದೊಡ್ಡಿ ಶಿವರಾಮು ಮಾತನಾಡಿ, ಸರ್ಕಾರ ರೈತರ ಹಿತ ಕಾಪಾಡಬೇಕು. ತಮಿಳುನಾಡಿಗೆ ಹರಿಸಿ ಕಾವೇರಿ ಕೊಳ್ಳದ ರೈತರಿಗೆ ವಂಚಿಸಿದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರೈತ ಕವಿ ದೊ.ಚಿ.ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಮುಖಂಡರಾದ ಕೆ.ಟಿ.ಸುರೇಶ್, ಅಣ್ಣೂರು ವಿನು, ರಘು ವೆಂಕಟೇಗೌಡ, ಚಿಕ್ಕಮರಿಗೌಡ, ಕೆ.ಪಿ.ದೊಡ್ಡಿ, ಪುಟ್ಟಸ್ವಾಮಿ, ಕರಡಕೆರೆ ಕೃಷ್ಣ, ಕಾರ್ಕಹಳ್ಳಿ ಮಹೇಶ, ಕ್ಯಾತಘಟ್ಟ ಅಂದಾನಿ, ಚಿಕ್ಕರಸಿನಕೆರೆ ಮೂರ್ತಿ, ವಿಕಾಶ್ ಬೋರೇಗೌಡ, ಬೊಪ್ಪಸಮುದ್ರ ಮಲ್ಲೇಶ್ ಸೇರಿದಂತೆ ಮತ್ತಿತರರು ಇದ್ದರು.