ಸಾರಾಂಶ
ಸಂಗಮೇಶ್ವರ ದೇವಸ್ಥಾನದಲ್ಲಿ ಅಯೋಧ್ಯೆಯ ಅಕ್ಷತೆ, ಕರಪತ್ರಕ್ಕೆ ಪೂಜೆ ಸಲ್ಲಿಸಿದ ವೈದ್ಯ ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ ಶ್ರೀರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ ಎಂದು ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಮಂದಿರದ ನೆಲಅಂತಸ್ತಿನಲ್ಲಿರುವ ಗರ್ಭಗುಡಿಯಲ್ಲಿ ಹೊಸ ವರ್ಷ 2024ರ ಜ.22ರಂದು ಶ್ರೀ ರಾಮಲಲ್ಲಾ (ಬಾಲರಾಮ)ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತಾಲೂಕಿನಿಂದ ರಾಮಭಕ್ತರು ತೆರಳಬೇಕೆಂದು ವಿ.ಮ.ಸಂಘದ ಗೌರವ ಕಾರ್ಯದರ್ಶಿ, ವೈದ್ಯ ಡಾ. ಮಹಾಂತೇಶ ಕಡಪಟ್ಟಿ ಕರೆ ನೀಡಿದರು.ಅಯೋಧ್ಯೆಯಿಂದ ರಾಜ್ಯಕ್ಕೆ, ಜಿಲ್ಲೆಯಿಂದ ತಾಲೂಕಿಗೆ ತಲುಪಿದ ಕಳಸ ಮತ್ತು ರಾಮಂದಿರದ ಫೋಟೋ, ಅಕ್ಷತೆ ಕಾಳಿನ ಜೊತೆಗೆ ಕರಪತ್ರವನ್ನು ಪಟ್ಟಣ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಳಿಕ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿ, ಈ ಅಕ್ಷತೆ ಮತ್ತು ಕರಪತ್ರಗಳನ್ನು ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆಗಳಿಗೆ ತಲುಪಿಸುವುದು ಕಾರ್ಯಕರ್ತರ ಉದ್ದೇಶವಾಗಿದೆ. ತಾಲೂಕಿನಲ್ಲಿ ಹಿಂದು ಕಾರ್ಯಕರ್ತರ ಪರಿಶ್ರಮದಿಂದ ಸಂಘಟನೆ ಮತ್ತಷ್ಟು ಬಲಗೊಳ್ಳುತ್ತಿದೆ ಎಂದು ಹೇಳಿದರು.
ಹಿಂದು ಸಂಘಟನೆ ಮುಖಂಡ ಲಕ್ಷ್ಮಣ ಗಾಯಕವಾಡ ಮಾತನಾಡಿದರು. ಜಯಘೋಷಗಳೊಂದಿಗೆ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಆನಂದ ನಡುವಿನಮನಿ, ಸಂತೋಷ ಬಡಿಗೇರ, ಪ್ರಶಾಂತ ಐಹೊಳೆ, ಜಗದೀಶ ದಾದ್ಮಿ, ಮಂಜು ಶೇಬಣ್ಣವರ, ಪ್ರವೀಣಕುಮಾರ ಕುರ್ತಕೋಟಿ ಮಲ್ಲು ನೇತೃತ್ವ ವಹಿಸಿದ್ದರು.ಮಹೇಶ ಬೆಳ್ಳಿಹಾಳ, ರಮೇಶ ಕಡ್ಲಿಮಟ್ಟಿ, ರಾಜಕುಮಾರ ಬಾದವಾಡಗಿ, ವಿನೋದ ಗಾಯಕವಾಡ, ಈಶ್ವರಪ್ಪ ಹವಾಲ್ದಾರ ರಾಜು ಬಡಿಗೇರ, ಗಿರಿಮಲ್ಲಪ್ಪ ಹಳಪೇಟಿ, ಅಪ್ಪು ಆಲೂರ, ರಾಜು ಬಡಿಗೇರ ಇತರರು ಇದ್ದರು. ಹೊಬಳಿ ಮಟ್ಟಕ್ಕೆ ಈ ಅಕ್ಷತೆ ಮತ್ತು ಕರಪತ್ರಗಳನ್ನು ಗಚ್ಚಿನಮಠದ ಮಹಾಂತಯ್ಯ ಗಚ್ಚಿನಮಠ ವಿತರಿಸಿದರು. ಸ್ವಯಂ ಸೇವಕರು ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.