ಚಿಕ್ಕಮರಳಿ ಗ್ರಾಮದಲ್ಲಿ ಪಟ್ಟಲದಮ್ಮನ ಮೊದಲ ವರ್ಷದ ವಿಜೃಂಭಣೆ ಉತ್ಸವ

| Published : Mar 16 2024, 01:52 AM IST

ಚಿಕ್ಕಮರಳಿ ಗ್ರಾಮದಲ್ಲಿ ಪಟ್ಟಲದಮ್ಮನ ಮೊದಲ ವರ್ಷದ ವಿಜೃಂಭಣೆ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ಸವದ ಅಂಗವಾಗಿ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ಬೆಂಕಿ ಕೊಂಡೋತ್ಸವ ನಡೆಸಲಾಯಿತು. ದೇವಿರ ಉತ್ಸವದ ಮೂರ್ತಿಯನ್ನು ತಲೆ ಮೇಲೆ ಹೊತ್ತಿಕೊಂಡು ಮೆರವಣಿಗೆ ನಡೆಸಿದ ದೇವಸ್ಥಾನದ ಗುಡ್ಡಪ್ಪ ಆವರಣದಲ್ಲಿ ಹಾಕಿಲಾಗಿದ್ದ ಬೆಂಕಿಯ ಕೊಂಡೋತ್ಸವವನ್ನು ಹಾದುಹೋಗುವ ಭಕ್ತಿ ಪ್ರದರ್ಶಿಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಗುರುವಾರ ಮತ್ತು ಶುಕ್ರವಾರ ಗ್ರಾಮ ದೇವತೆ ಶ್ರೀಪಟ್ಟಲದಮ್ಮನ ಮೊದಲನೇ ವರ್ಷದ ಉತ್ಸವವು ವಿಜೃಂಭಣೆಯಿಂದ ನಡೆಯಿತು.

ಪಟ್ಟಲದಮ್ಮನ ಹಬ್ಬದ ಅಂಗವಾಗಿ ಗುರುವಾರ ಬೆಳಗ್ಗೆ ಪಟ್ಟಲದಮ್ಮ ದೇವಸ್ಥಾನದ ಬಳಿ ಹೋಮ ನಡೆಯಿತು. ದೇವಸ್ಥಾನ ಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ ಹಬ್ಬ ನಡೆಸುತ್ತಿರುವುದರಿಂದ ಗ್ರಾಮಸ್ಥರು ವಿಜೃಂಭಣೆಯಿಂದ ಆಚರಣೆ ಮಾಡಿದರು.

ಸಂಜೆ ಗ್ರಾಮದ ಹೊರವಲಯದಲ್ಲಿ 16 ಕೂಟದ ದೊರೆ ಶ್ರೀಚನ್ನಿಗರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಗ್ರಾಮಸ್ಥರು ಶ್ರೀಪಟ್ಟಲದಮ್ಮನ ದೇವರ ಉತ್ಸವಕ್ಕೆ ಹೂ ಮತ್ತು ಹೊಂಬಾಳೆ ಮುಡಿಸುವ ಮೂಲಕ ದೇವಿ ಮೂರ್ತಿಯನ್ನು ಅಲಂಕರಿಸಲಾಯಿತು.

ಬಳಿಕ ದೇವರ ಮೂತಿಗೆ ಪೂಜೆಸಲ್ಲಿಸಿ ಉತ್ಸವ ಆರಂಭಿಸಿದರು. ದೇಗುಲದ ಆವರಣದಲ್ಲಿಯೇ ಶ್ರೀಪಟ್ಟಲದಮ್ಮ ದೇವಿಗೆ ಪಂಜಿನ ಸಲಾಮ್ ಸಲ್ಲಿಸಲಾಯಿತು. ಬಳಿಕ 16 ಕೂಟದ ದೊರೆ ಶ್ರೀಚನ್ನಿಗರಾಯಸ್ವಾಮಿಗೆ ಸಲಾಮ್‌ಸಲ್ಲಿಸಿ ಕೆಲಕಾಲ ಮೆರವಣಿಗೆ ನಡೆಸಿದರು. ಅಲ್ಲಿಂದ ತಮಟೆ ವಾಧ್ಯದ ಮೂಲಕ ಗ್ರಾಮದ ಮಾರಿಗುಡಿ, ಶ್ರೀಬೋರೇದೇವರು ಹಾಗೂ ಶ್ರೀರಾಮಮಂದಿರ ದೇವಸ್ಥಾನದ ಸೇರಿದಂತೆ ಗ್ರಾಮದ ವಿವಿಧೆಡೆ ಉತ್ಸವವನ್ನು ಮೆರವಣಿಗೆ ನಡೆಸಿದರು.

ನಂತರ ಪಟ್ಟಲದಮ್ಮನ ದೇವಸ್ಥಾನದ ಬಳಿ ಉತ್ಸವವನ್ನು ತಂದು ಇಡಲಾಯಿತು. ದೇವಸ್ಥಾನದ ಬಳಿ ಭಕ್ತರು ಉತ್ಸವಕ್ಕೆ ಪೂಜೆ ಸಲ್ಲಿಸಿ ಭಕ್ತಿಭಾವ ಸಲ್ಲಿಸಿದರು.

ಉತ್ಸವದ ಅಂಗವಾಗಿ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ಬೆಂಕಿ ಕೊಂಡೋತ್ಸವ ನಡೆಸಲಾಯಿತು. ದೇವಿರ ಉತ್ಸವದ ಮೂರ್ತಿಯನ್ನು ತಲೆ ಮೇಲೆ ಹೊತ್ತಿಕೊಂಡು ಮೆರವಣಿಗೆ ನಡೆಸಿದ ದೇವಸ್ಥಾನದ ಗುಡ್ಡಪ್ಪ ಆವರಣದಲ್ಲಿ ಹಾಕಿಲಾಗಿದ್ದ ಬೆಂಕಿಯ ಕೊಂಡೋತ್ಸವವನ್ನು ಹಾದುಹೋಗುವ ಭಕ್ತಿ ಪ್ರದರ್ಶಿಸಿದರು.

ಗುಡ್ಡಪ್ಪ ದೇವರ ಮೂರ್ತಿಯೊಂದಿಗೆ ಕೊಂಡ ಹಾದ ಬಳಿಕ ಹರಕೆ ಹೊತ್ತ ಭಕ್ತರು ಬೆಂಕಿಯ ಕೊಂಡಹಾದು ಹೋಗುವ ಮೂಲಕ ದೇವರಿಗೆ ಭಕ್ತಿ ಸಮರ್ಪಸಿದರು. ನಂತರ ಗ್ರಾಮದ 16 ಕೂಟದ ದೊರೆ ಶ್ರೀಚನ್ನಿಗರಾಯಸ್ವಾಮಿ ದೇವರ ಗುಡ್ಡಪ್ಪನವರ ಮನೆಯವರು ದೇವಿಗೆ ತಂಬಿಟ್ಟು ಆರತಿ ಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಎಲ್ಲಾ ಭಕ್ತರು ದೇವಿಗೆ ತಂಬಿಟ್ಟು ಆರತಿಯ ಪೂಜೆ ಸಲ್ಲಿಸಿದರು. ನಂತರ ಭಕ್ತರು ದೇವರಿಗೆ ಧೂಳು ಮರಿಯ ಬಲಿ ಅರ್ಪಿಸಿದರು. ಗ್ರಾಮಸ್ಥರು ದೇವಿಗೆ ಕೋಳಿ ಹಾಗೂ ಮರಿಗಳ ಬಲಿಅರ್ಪಿಸುವ ಮೂಲಕ ವಿಜೃಂಭಣೆಯಿಂದ ದೇವರ ಹಬ್ಬನ್ನು ಆವರಣೆ ಮಾಡುವ ಮೂಲಕ ದೇವರಿಗೆ ಭಕ್ತಿಭಾವ ಸಮರ್ಪಿಸಿದರು.