ಹೊಸಪೇಟೆ: ನಗರ ಸೇರಿದಂತೆ ಜಿಲ್ಲಾದ್ಯಂತ ಪವನಪುತ್ರ ಹನುಮ ಜಯಂತಿಯನ್ನು ಗುರುವಾರ ಶ್ರದ್ಧೆ, ಭಕ್ತಿಯಿಂದ‌ ಆಚರಿಸಲಾಯಿತು.ಆಂಜನೇಯ ದೇವಸ್ಥಾನಗಳಲ್ಲಿ ಶ್ರೀರಾಮ ಭಕ್ತ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಂಪಿಯ ಚಕ್ರತೀರ್ಥ ಯಂತ್ರೋದ್ಧಾರಕ ಆಂಜನೇಯ ಸನ್ನಿಧಾನದಲ್ಲಿ ಗುರುವಾರ ಬೆಳಗ್ಗೆಯಿಂದಲೇ ವಿಶೇಷ ಪೂಜಾ, ಕೈಂಕರ್ಯಗಳು ನಡೆದವು. ವ್ಯಾಸರಾಜರು ಪ್ರತಿಷ್ಠಾಪಿಸಿರುವ ಯಂತ್ರೋದ್ಧಾರಕ ಆಂಜನೇಯನ ಮೂರ್ತಿಯನ್ನು ಬೆಳ್ಳಿ ಕವಚದಿಂದ ಅಲಂಕರಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ ಹೋಮ, ಹವನ ಹಾಗೂ ವಾಯುಪುತ್ರನನ್ನು ಸ್ಥುತಿಸಲಾಯಿತು. ಹನುಮಾನ ಜಯಂತಿ ಅಂಗವಾಗಿ ದೇವರ ದರ್ಶನಕ್ಕೆ ಬಂದಿದ್ದ ಅನೇಕ ಭಕ್ತರು ಚಕ್ರತೀರ್ಥ ಯಂತ್ರೋದ್ಧಾರಕನ ಮಂತ್ರವನ್ನು ಪಠಿಸಿದರೆ, ಇನ್ನಿತರರು ಭಕ್ತಿಗೀತೆಗಳೊಂದಿಗೆ ದೇವರ ನಾಮ ಜಪಿಸಿದರು.

ಅದರಂತೆ ಹೊಸಪೇಟೆ ನಗರದ ವಡಕರಾಯ ದೇವಸ್ಥಾನ, ಪಂಚಮುಖಿ ಪ್ರಾಣದೇವರ ಸನ್ನಿಧಾನ, ಭಟ್ರಹಳ್ಳಿ ಆಂಜನೇಯ, ಅಭಯ ಆಂಜನೇಯ ದೇವಸ್ಥಾನ, ಸೇರಿದಂತೆ ಮರಿಯಮ್ಮನಹಳ್ಳಿಯ ಶ್ರೀಆಂಜನೇಯಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧೆಡೆಯಿರುವ ವೀರಾಂಜನೇಯ, ಮಾರುತಿ ಮಂದಿರಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರ ದರ್ಶನಾರ್ಶೀವಾದಕ್ಕೆ ಆಗಮಿಸಿದ್ದ ಭಕ್ತರಿಗೆ ದೇವಸ್ಥಾನ ಮಂಡಳಿಗಳಿಂದ ಪ್ರಸಾದ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.