ಗ್ರಾಮಗಳಿಗೆ ಪಿಡಿಒ ಭೇಟಿ ಕಡ್ಡಾಯ: ಶಾಸಕ

| Published : Aug 07 2024, 01:00 AM IST / Updated: Aug 07 2024, 01:01 AM IST

ಸಾರಾಂಶ

ಮಾಲೂರು ತಾಲೂಕಿನಲ್ಲಿ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿಯಲ್ಲಿ ಪಿಡಿಒಗಳು ಇಚ್ಚಾಶಕ್ತಿ ಇಲ್ಲದೆ ತಾಲೂಕಿನ ೨೮ ಪಂಚಾಯಿತಿಗಳಲ್ಲಿ ತೃಣಸಿ ಪಂಚಾಯಿತಿ ಶೇಕಡಾ ೪ ರಷ್ಟು ವಸೂಲಿ ಪ್ರಾರಂಭವಾಗಿ ೨೭ ಗ್ರಾ.ಪಂ.ಗಳಲ್ಲಿ ತೆರಿಗೆ ಎರಡಂಕಿ ಶೇಕಡಾ ೧೦ ರಷ್ಟು ದಾಟಿಲ್ಲ.

ಕನ್ನಡಪ್ರಭ ವಾರ್ತೆ ಮಾಲೂರು

ಗ್ರಾಮ ಪಂಚಾಯಿತಿ ಪಿಡಿಒಗಳು ವಾರದಲ್ಲಿ ಮೂರು ದಿನ ಗ್ರಾಮಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಗ್ರಾಮದ ಸಮಸ್ಯೆಗಳ ಬಗ್ಗೆ ನೇರವಾಗಿ ಜನರಿಂದ ಮಾಹಿತಿ ಪಡೆಯಬೇಕು. ಇಲ್ಲವಾದರೆ ನನ್ನ ಹಳ್ಳಿ ಭಾಷೆಯಲ್ಲಿ ಹೇಳಬೇಕಾಗುತ್ತದೆ ಎಂದು ಶಾಸಕ ಕೆ.ವೈ.ನಂಜೇಗೌಡ ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ತಾಲೂಕು ಪಂಚಾಯತ್ ವತಿಯಿಂದ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು ಗ್ರಾಮೀಣ ಭಾಗದ ಬಡವರು ಕೆಲಸಕ್ಕಾಗಿ ಕಚೇರಿಗೆ ಬರುವುದರ ಬದಲು ಅಧಿಕಾರಿಗಳೇ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಜನರು ಬಳಿ ಪಡೆಯಬೇಕು, ಸ್ಥಳದಲ್ಲೇ ಪರಿಹಾರವಾಗುವ ಕೆಲಸವಾದರೆ ಬಗೆಹರಿಸಬೇಕು ಎಂದರು.

ತೆರಿಗೆ ವಸೂಲಿಯಲ್ಲಿ ವೈಫಲ್ಯ

ತಾಲೂಕಿನಲ್ಲಿ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಿಯಲ್ಲಿ ಪಿಡಿಒಗಳು ಇಚ್ಚಾಶಕ್ತಿ ಇಲ್ಲದೆ ತಾಲೂಕಿನ ೨೮ ಪಂಚಾಯಿತಿಗಳಲ್ಲಿ ತೃಣಸಿ ಪಂಚಾಯಿತಿ ಶೇಕಡಾ ೪ ರಷ್ಟು ವಸೂಲಿ ಪ್ರಾರಂಭವಾಗಿ ೨೭ ಗ್ರಾ.ಪಂ.ಗಳಲ್ಲಿ ತೆರಿಗೆ ಎರಡಂಕಿ ಶೇಕಡಾ ೧೦ ರಷ್ಟು ದಾಟಿಲ್ಲ. ಕುಡಿಯನೂರು ಗ್ರಾ.ಪಂ. ಒಂದು ಮಾತ್ರ ಶೇಕಡಾ ೩೦ ರಷ್ಟು ತೆರಿಗೆ ವಸೂಲಿಯಾಗಿದೆ ಎಂದು ಪಿಡಿಒ ಅಂಬರೀಶ್ ಅನ್ನು ಪ್ರಶಂಶಿಸಿದರು..

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಪ್ರಮುಖ ಯೋಜನೆಯಾದ ನೀರಾವರಿ ಯೋಜನೆ ಗ್ರಾಮಗಳಲ್ಲಿ ಜೆಜೆಎಂ ನೀರು ಸರಬರಾಜು ಯೋಜನೆಯಿಂದ ಸಿಸಿ ರಸ್ತೆಗಳೂ ಸಂಪೂರ್ಣ ಹಾಳಾಗಿವೆ ಇದರ ಬಗ್ಗೆ ಗಮನ ಹರಿಸಬೇಕಿದೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರು ತಿರುಗಿ ಬಿಳಲಿದ್ದಾರೆ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಸಿದರು.

ವಸತಿ ನಿರ್ಮಾಣ ಪ್ರಗತಿ ಕುಂಠಿತ

ತಾಲೂಕಿನ ೨೮ ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದಿಂದ ಬಡವರಿಗೆ ಬಂದ ಮನೆ ನಿರ್ಮಾಣದ ಸ್ಥಿತಿ ಗತಿಗಳು ಪರಿಶೀಲಿಸಿ, ಮನೆ ನಿರ್ಮಾಣದ ಪ್ರಗತಿ ತುಂಬಾ ಹಿಂದೆ ಇದೆ. ಮುಂದಿನ ಸಭೆಯಲ್ಲಿ ಸರ್ಕಾರದಿಂದ ಬಂದಿರುವ ಮನೆ ನಿರ್ಮಾಣದ ಯೋಜನೆ ಬಡವರಿಗೆ ತಲುಪಿಸುವ ಕೆಲಸ ಪೂರ್ತಿಯಾಗಿರುವ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಪಟ್ಟಣಕ್ಕೆ ಸಮೀಪದಲ್ಲಿ ೮ ಸಾವಿರ ಜನ ಸಂಖ್ಯೆ ಇರುವ ನೋಸಗೆರೆ ಪಂಚಾಯಿತಿಯಲ್ಲಿ ೫ ಕೋಟಿ ತೆರಿಗೆ ಸಂಗ್ರಹವಾದಲಿದೆ, ೫೦ ಸಾವಿರ ಜನ ಸಂಖ್ಯೆ ಇರುವ ಮಾಲೂರು ನಗರದಲ್ಲಿ ಏಕೆ ತೆರಿಗೆ ಬರುತ್ತಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಯಾರೆ ಪ್ರಭಾವಿಗಳು ಬಂದರು ನಾನು ಇದೀನಿ ಎಂದು ಅಧಿಕಾರಿಗಳಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಕೆ ರಮೇಶ್, ತಾಲೂಕು ಕಾರ್ಯನಿರ್ವಹಣಾಧಿಕಾರಿ ವಿ.ಕೃಷ್ಣಪ್ಪ, ಆಡಳಿತಾಧಿಕಾರಿ ಜಿಲ್ಲಾ ಕೃಷಿ ನಿದೇರ್ಶಕಿ ಉಮಾ, ಪೋಲೀಸ್ ಇನ್ಸ್ಪೆಕ್ಟರ್ ವಸಂತ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.