ಸಾರಾಂಶ
ಮುಂಡರಗಿ: ಗುರು ಪರಂಪರೆಯಿಂದ ಗುಡಿ ಪರಂಪರೆಗೆ ಇವತ್ತಿನ ಜನರು ವಾಲುತ್ತಿದ್ದಾರೆ. ಗುಡಿಯ ದೇವರ ಮೂರ್ತಿಗೆ ಸಂಸ್ಕಾರ ಕೊಡುವುದು ಗುರುವಿನಿಂದ ಮಾತ್ರ ಸಾಧ್ಯ. ಗುಡಿಯಲ್ಲಿರುವ ದೇವರು ನಮ್ಮನ್ನು ಮಾತನಾಡಿಸುವುದಿಲ್ಲ. ಆದರೆ ಗುರುಗಳು ನಮ್ಮ ಯೋಗಕ್ಷೇಮವನ್ನು ಕೇಳುವುದರ ಜೊತೆಗೆ ನ್ಮಮನ್ನು ಸನ್ಮಾರ್ಗದತ್ತ ಕರೆದೊಯ್ಯುತ್ತಾನೆ. ಗುರುವಿನಿಂದ ಮಾತ್ರ ನಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವುದಕ್ಕೆ ಸಾಧ್ಯ ಎಂದು ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮಿಗಳು ಹೇಳಿದರು.
ಪಟ್ಟಣದ ಜ. ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ 1832ನೇ ಮಾಸಿಕ ಶಿವಾನುಭವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.ಗುರುವಾದವನು ಶಿಕ್ಷಣವನ್ನು ನೀಡುವುದರೊಂದಿಗೆ ಮೋಕ್ಷ ಮಾರ್ಗವನ್ನು ತೋರಿಸಿ ಮಾನವೀಯ ಮೌಲ್ಯವನ್ನು ಉಣಬಡಿಸುತ್ತಾನೆ. ನಮ್ಮ ಜೀವನದಲ್ಲಿ ಆವರಿಸಿದ ಕತ್ತಲೆಯನ್ನು ಕರಗಿಸಿ ಬೆಳಕಿನತ್ತ ಸಾಗಿಸುವ ಕೆಲಸ ಮಾಡುತ್ತಾನೆ. ಆದ್ದರಿಂದ ಗುರು ನಮ್ಮ ದೇವರೆಂದರು.ಸಾನ್ನಿಧ್ಯ ವಹಿಸಿದ್ದ ಜ.ನಾಡೋಜ ಡಾ.ಅನ್ನದಾನೀಶ್ವರ ಶಿವಯೋಗಿಗಳು ಮಾತನಾಡಿ, ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಅವಶ್ಯಕ. ಗುರು ಅಜ್ಞಾನವನ್ನು ಕಳೆದು ಸುಜ್ಞಾನವನ್ನು ನೀಡಿ ಒಳ್ಳೆಯ ಮಾರ್ಗದಲ್ಲಿ ನಡೆಸುತ್ತಾನೆ ಎಂದರು.ಗದಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ಡಾ. ಅನ್ನದಾನೀಶ್ವರ ಶಿವಯೋಗಿಗಳವರು ಆಶೀರ್ವಾದ ಮೂಲಕ ನನಗೆ ಶಕ್ತಿ ನೀಡಿದ್ದಾರೆ. ಶ್ರೀಗಳ ಆಶೀರ್ವಾದದಿಂದ ಮತ್ತು ನಿಮ್ಮೆಲ್ಲರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ ಎಂದರು.ಯಲಬುರ್ಗಾದ ಬಸವಶ್ರೀ ಪ್ರಶಸ್ತಿ ಪುರಷ್ಕೃತ ಸಂಗಣ್ಣ ಕೊಪ್ಪಳ ಅವರು ಗುರುವಿನ ಮಹತ್ವ ಕುರಿತು ಮಾತನಾಡಿದರು. ಚನ್ನಬಸವ ದೇವರು ಮಾತನಾಡಿದರು. ಆನಂದಗೌಡ ಪಾಟೀಲ ಹಾಗೂ ಡಾ. ಬಸವರಾಜ ಬಳ್ಳಾರಿ ಅವರಿಗೆ ಶ್ರೀಗಳು ಗುರುರಕ್ಷೆ ನೀಡಿದರು. ಭಕ್ತಿಸೇವೆ ವಹಿಸಿಕೊಂಡಿದ್ದ ಅಕ್ಕಮಹಾದೇವಿ ಅಂದಪ್ಪ ಕಡ್ಡಿ ಅವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಚೆನ್ನವೀರಯ್ಯಶಾಸತ್ರೀಗಳು ಹಿರೇಮಠ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕರಬಸಪ್ಪ ಹಂಚಿನಾಳ, ಆರ್.ಎಲ್.ಪೊಲೀಸ್ಪಾಟೀಲ, ಎಂ.ಜಿ.ಗಚ್ಚಣ್ಣವರ, ವೀರನಗೌಡ ಗುಡದಪ್ಪನವರ, ಎಂ.ಎಸ್.ಶಿವಶೆಟ್ಟಿ, ಎಸ್.ಬಿ.ಹಿರೇಮಠ, ನಾಗೇಶ ಹುಬ್ಬಳ್ಳಿ, ಮಂಜುನಾಥ ಮುಧೋಳ ಮುಂತಾದವರಿದ್ದರು. ಮಠದ ಶಿಕ್ಷಕ ಹಾಲಯ್ಯ ಹಿರೇಮಠ ಅವರನ್ನು ಶ್ರೀಮಠದ ವಿದ್ಯಾರ್ಥಿಗಳು ಗುರುಪೂರ್ಣಿಮೆ ನಿಮತ್ಯ ಗುರುವಂದನೆ ಸಲ್ಲಿಸಿದರು. ನಿವೃತ್ತ ಮುಖ್ಯಶಿಕ್ಷಕ ಎಸ್.ಎಸ್.ಇನಾಮತಿ, ಶಿಕ್ಷಕ ಎಸ್.ಎಸ್.ಮಠ ಕಾರ್ಯಕ್ರಮ ನಿರ್ವಹಿಸಿದರು. ನಾಗಭೂಷಣ ಹಿರೇಮಠ ವಂದಿಸಿದರು.