ಜನಸ್ನೇಹಿ ಬ್ಯಾಡಗಿ ಸರ್ಕಾರಿ ಆಸ್ಪತ್ರೆ-ವೈದ್ಯರು, ಸಿಬ್ಬಂದಿ ಶ್ರಮ ಅಪಾರ: ಡಾ. ರಾಘವೇಂದ್ರಸ್ವಾಮಿ

People friendly Byadgi Government Hospital Doctors and staff work tirelessly

byadagi, haveri, dr raghavendraswami, byadagi government hospital, ಬ್ಯಾಡಗಿ, ಹಾವೇರಿ, ಬ್ಯಾಡಗಿ ಸರ್ಕಾರಿ ಆಸ್ಪತ್ರೆ, ಡಾ.ರಾಘವೇಂದ್ರಸ್ವಾಮಿ

ಬ್ಯಾಡಗಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ವರ್ಗಾವಣೆಯಾದ ವೈದ್ಯರು ಮತ್ತು ಸಿಬ್ಬಂದಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಬ್ಯಾಡಗಿ: ಸ್ಥಳೀಯ ಸರ್ಕಾರಿ ಆಸ್ಪತ್ರೆ ಜನಸ್ನೇಹಿಯಾಗಿ ಪರಿವರ್ತನೆಯಾಗಿರುವ ಹಿಂದೆ ವೈದ್ಯರು ಹಾಗೂ ಸಿಬ್ಬಂದಿ ಶ್ರಮವಿದೆ ಎಂದು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ. ರಾಘವೇಂದ್ರಸ್ವಾಮಿ ಹೇಳಿದರು.

ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ವರ್ಗಾವಣೆಯಾದ ವೈದ್ಯರು ಮತ್ತು ಸಿಬ್ಬಂದಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಥಳೀಯ ಸರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳ ಜತೆಗೆ ಆತ್ಮೀಯವಾಗಿ ನಡೆದುಕೊಂಡಿದ್ದಲ್ಲದೇ, ಕಳೆದೊಂದು ದಶಕದಿಂದ ಜನಸ್ನೇಹಿ ಕೆಲಸ ಮಾಡುವ ಮೂಲಕ ರಾಜ್ಯದಲ್ಲಿಯೇ ಅತ್ಯುತ್ತಮ ಸರ್ಕಾರಿ ಆಸ್ಪತ್ರೆ ಪ್ರಶಸ್ತಿಗೆ ಭಾಜನವಾಗುವಂತೆ ಶ್ರಮಿಸಿದ್ದಾರೆ ಎಂದರು.

ಬಹುತೇಕ ವೈದ್ಯರು ಚಿಕಿತ್ಸೆ ನೀಡುತ್ತಾರೆ, ಆದರೆ ಇದೀಗ ವರ್ಗಾವಣೆಗೊಂಡಿರುವ ವೈದ್ಯರು ರೋಗಿಗಳ ಜತೆಗೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಹೀಗಾಗಿ ಸೇವಾ ಅವಧಿಯ ದಿನಗಳಲ್ಲಿ ಅವರ ಹೆಸರನ್ನು ಸ್ಮರಿಸದೇ ಇರುವಂತಹ ರೋಗಿಗಳಿಲ್ಲ ಎಂದರು.

ಬಹುತೇಕ ಸರ್ಕಾರಿ ಆಸ್ಪತ್ರೆಗಳನ್ನು ಆರ್ಥಿಕವಾಗಿ ಹಿಂದುಳಿದವರು ಮತ್ತು ಬಡ ಕುಟುಂಬದ ಜನರ ಅನುಕೂಲದ ದೃಷ್ಟಿಕೋನವನ್ನಿಟ್ಟುಕೊಂಡು ಸ್ಥಾಪಿತವಾಗಿವೆ. ಆದರೆ ಇಲ್ಲಿನ ಸರ್ಕಾರಿ ಆಸ್ಪತ್ರೆ ವೈದ್ಯರ ಕಾಳಜಿ ನೋಡಿ ಬಡವರ ಜತೆಗೆ ಆರ್ಥಿಕವಾಗಿ ಸಬಲರಾದವರೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಉದಾಹರಣೆಗಳಿವೆ ಎಂದರು.

ಕೊರೋನಾ ನಮಗೆಲ್ಲ ಪರೀಕ್ಷೆ: ಹಾವೇರಿ ಜಿಲ್ಲಾಸ್ಪತ್ರೆಗೆ ವರ್ಗಾವಣೆಗೊಂಡಿರುವ ಆಡಳಿತಾಧಿಕಾರಿಯಾಗಿದ್ದ ಹಿರಿಯ ವೈದ್ಯ ಡಾ. ಪುಟ್ಟರಾಜ ಮಾತನಾಡಿ, ಕಳೆದ 10 ವರ್ಷಗಳ ಅವಧಿ ಬ್ಯಾಡಗಿಯಲ್ಲಿ ನಾವು ಸಲ್ಲಿಸಿದ ಸೇವೆ ಅತ್ಯಂತ ತೃಪ್ತಿದಾಯಕ ಹಾಗೂ ಅವಿಸ್ಮರಣೀಯ. ಅದರಲ್ಲೂ ಕೋರೋನಾ ಭಾಗ-1 ಮತ್ತು 2ರಲ್ಲಿ ಸಾರ್ವಜನಿಕರು ನಮ್ಮೊಂದಿಗಿದ್ದು ಸಹಕರಿಸಿದ್ದು ನಮ್ಮ ವೃತ್ತಿ ಬದುಕಿನಲ್ಲಿ ನೆನಪಿಡುವಂತಾಗಿದೆ ಎಂದರು.

ಡಾ. ನಾಗರಾಜ ಹಿರೇಕೆರೂರು ಆಸ್ತತ್ರೆಗೆ ಮತ್ತು ಡಾ. ವೀರೇಶ ಹೊಸ್ಮನಿ ಶಿಗ್ಗಾಂವಿಗೆ ವರ್ಗಾವಣೆಯಾಗಿದ್ದಾರೆ, ವಿಶೇಷವಾಗಿ ಡಾ. ವೀರೇಶ ಹೊಸ್ಮನಿ ದಿನಕ್ಕೆ 500ಕ್ಕೂ ಹೆಚ್ಚು ರೋಗಿಗಳನ್ನು ತಾಳ್ಮೆಯಿಂದ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದರು. ಅವರ ಸೇವಾಮನೋಭಾವದಿಂದ ರೋಗಿಗಳ ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.

ಆಸ್ಪತ್ರೆಯ ಎಲ್ಲ ವಿಭಾಗಗಳ ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿ ಸಮರ್ಪಿತ ಸೇವೆ, ಪರಸ್ಪರ ಸಹಕಾರ ಮತ್ತು ರೋಗಿಗಳ ತೋರಿದ ಕಾಳಜಿಯಿಂದ ತಾಲೂಕು ಆಸ್ಪತ್ರೆ ಹಲವು ಪ್ರಶಸ್ತಿ ಪಡೆದು ರಾಜ್ಯದಲ್ಲಿ ಉತ್ತಮ ಹೆಸರು ಗಳಿಸಿದೆ. ಈ ಸಾಧನೆಯ ಹಿಂದೆ ಸಾರ್ವಜನಿಕರು ಹಾಗೂ ರೋಗಿಗಳ ಸಹಕಾರವೂ ಪ್ರಮುಖ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಸುರೇಶ ಗುಂಡಪಲ್ಲಿ, ಡಾ. ಮಹೇಶ ಭಜಂತ್ರಿ, ಡಾ. ಚಂದ್ರಕಾಂತ, ಸಿಬ್ಬಂದಿ ಸಂತೋಷ, ಡಿ.ಎನ್. ಚಂದ್ರಶೇಖರ ಉಪಸ್ಥಿತರಿದ್ದರು.ಬೀಳ್ಕೊಡುಗೆ-ಸನ್ಮಾನ: ಇತ್ತೀಚೆಗೆ ವರ್ಗಾವಣೆಯಾದ ಅರಿವಳಿಕೆ ತಜ್ಞ ಡಾ. ನಾಗರಾಜ, ತಜ್ಞ ವೈದ್ಯ ಡಾ. ವೀರೇಶ ಹೊಸಮನಿ, ಶುಶ್ರೂಷಕರಾದ ಪ್ರಕಾಶ್, ಅಮಿತಾ ರಾಯ್ಕರ್ ಹಾಗೂ ರೇಷ್ಮಾ ಅವರನ್ನು ಆಸ್ಪತ್ರೆ ಸಿಬ್ಬಂದಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.