ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಿಜೆಪಿಯವರು ಎಂದು ಕೂಡ ಬಹುಮತ ಪಡೆದು ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ಎಂದು ಕೂಡ ಜನ ಅವರಿಗೆ ಆಶೀರ್ವಾದ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಪ್ರಚಾರಾರ್ಥ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಬಹಿರಂಗ ಪ್ರಚಾರ ಸಮಾವೇಶದಲ್ಲಿ ಸೋಮವಾರ ರಾತ್ರಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದ್ರು, ಹಿಂದೆ ಅಧಿಕಾರಕ್ಕೆ ಬಂದಾಗ ಮೂರು ಜನ ಸಿಎಂ ಆದರು. 2018ರಲ್ಲಿ ಪೂರ್ಣ ಬಹುಮತ ಬರಲಿಲ್ಲ. ಮತ್ತೆ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದರು. ನನ್ನನ್ನು ಅಟ್ಯಾಕ್ ಮಾಡೋದೇ ಬಿಜೆಪಿಯವರ ಪ್ರಚಾರ ತಂತ್ರ. ನಾನು ಹಾಗೂ ಕಾಂಗ್ರೆಸ್ ಪಕ್ಷ ಬಡವರ ಪರ ಇರೋದಕ್ಕೆ ಟಾರ್ಗೆಟ್ ಮಾಡ್ತಾರೆ. ಯಡಿಯೂರಪ್ಪ ನನಗೆ ನಂಬಿಕೆ ದ್ರೋಹಿ. ವಿಶ್ವಾಸ ದ್ರೋಹಿ, ಭ್ರಷ್ಟ ಅಂದರು. ನಿಜವಾದ ಭ್ರಷ್ಟ ಯಡಿಯೂರಪ್ಪ, ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಎಂದು ಕುಟುಕಿದರು.
ಸ್ವಿಸ್ ಬ್ಯಾಂಕ್ ನಿಂದ ₹15 ಲಕ್ಷ ಹಾಕ್ತಿವಿ ಎಂದು ಮೋದಿ ಹೇಳಿದ್ದರು. ಹದಿನೈದು ಪೈಸೆಯೂ ಬರಲಿಲ್ಲ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಅಂದರು, ಪ್ರಧಾನಿ ಆಗಿ 12 ವರ್ಷ ಆಯಿತು, 24 ಕೋಟಿ ಉದ್ಯೋಗ ಕೊಡಬೇಕಿತ್ತು ಕೊಟ್ಟರಾ? ರೈತರ ಆದಾಯ ದುಪ್ಪಟ್ಟು ಮಾಡ್ತಿನಿ ಅಂದ್ರು ಮಾಡಿದ್ರಾ! ಮೋದಿ ಅಧಿಕಾರಕ್ಕೆ ಬಂದಾಗ ಡಾಲರ್ ಬೆಲೆ ₹58 ಇತ್ತು. ಈಗ ₹95 ರೂಪಾಯಿ ಆಗಿದೆ ಎಂದು ಕಾಲೆಳೆದರು.ಭರ್ಜರಿ ರೋಡ್ ಶೋ:
ಸೋಮವಾರ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ರೋಡ್ ಶೋ ನಡೆಸಲಾಯಿತು, ತೆರೆದ ವಾಹನದಲ್ಲಿ ಹಳೆ ನಗರದ ಬೀದಿಗಳಲ್ಲಿ ಮತಯಾಚನೆ ಮಾಡಿದ ಸಿಎಂಗೆ ಸಚಿವ ಜಮೀರ್ ಅಹ್ಮದ್, ಮಾಜಿ ಸಚಿವ ಅಜಯಕುಮಾರ್ ಸರನಾಯಕ್, ಅಭ್ಯರ್ಥಿ ಉಮೇಶ್ ಮೇಟಿ ಸಾಥ್ ನೀಡಿದರು. ಅಪಾರ ಸಂಖ್ಯೆಯ ಕಾರ್ಯಕರ್ತರೊಂದಿಗೆ ನಡೆದ ರೋಡ್ ಶೋ ಬೀಳೂರ ಅಜ್ಜನ ದೇವಸ್ಥಾನದಿಂದ ಆರಂಭವಾಗಿ, ಟೆಂಗಿನಮಠ, ಪಂಕಾ ಮಸೀದಿ, ಎಂಜಿ ರಸ್ತೆ, ಬಸವೇಶ್ವರ ವೃತ್ತವರೆಗೆ ನಡೆಯಿತು.
ಆಝಾನ್ ವೇಳೆ ಭಾಷಣ ನಿಲ್ಲಿಸಿದ ಉಮೇಶ ಮೇಟಿ:
ನಗರದ ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಬಹಿರಂಗ ಬಹಿರಂಗ ಸಭೆಯಲ್ಲಿ ಅಭ್ಯರ್ಥಿ ಉಮೇಶ ಮೇಟಿ ಮಾತನಾಡುವ ಸಮಯಲ್ಲಿ ಆಝಾನ್ ಆರಂಭವಾಯಿತು. ಈ ವೇಳೆ ಭಾಷಣ ನಿಲ್ಲಿಸಿದ ಉಮೇಶ ಮೇಟಿ ಆಝಾನ್ ಮುಗಿಯುತ್ತಿದ್ದಂತೆಯೇ ಮತ್ತೆ ಭಾಷಣ ಆರಂಭಿಸಿ ಮತಯಾಚಿಸಿದರು.ಮಹಿಳೆ ಸಾವು ಮೌನಾಚರಣೆ: ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಪ್ರಚಾರಾರ್ಥ ಮೆರವಣಿಗೆಯಲ್ಲಿ ಭಾಗಿಯಾದ ಫಾಥಿಮಾ ಎಂಬ ಮಹಿಳೆ ಸಾವಿನ ಹಿನ್ನೆಲೆಯಲ್ಲಿ ವೇದಿಕೆಯಿಂದ ಒಂದು ನಿಮಿಷ ಮೌನಾಚರಣೆ ಮೂಲಕ ಕೈ ಮುಖಂಡರು, ಕಾರ್ಯಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.