ಸಾರಾಂಶ
ಕಾಂಗ್ರೆಸ್ನವರು ಕೌರವರಾಗಿರುವುದರಿಂದ ಇಂಡಿಯಾ ಒಕ್ಕೂಟದಿಂದ ಒಬ್ಬರಾದಂತೆ ಒಬ್ಬರು ಹೊರ ಹೋಗುತ್ತಿದ್ದಾರೆ.
ಹೊಸಪೇಟೆ: ಕಾಂಗ್ರೆಸ್ನವರು ಕೌರವರಾಗಿರುವ ಕಾರಣ ಇಂಡಿಯಾ ಮೈತ್ರಿ ಕೂಟದಿಂದ ಅನೇಕರು ಬಿಟ್ಟು ಹೋಗುತ್ತಿದ್ದಾರೆ. ಚುನಾವಣೆ ಪಲಿತಾಂಶದ ಬಳಿಕ ಪಾಂಡವರು, ಕೌರವರು ಯಾರೆಂದು ಜನರೇ ಉತ್ತರಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಲೇವಡಿ ಮಾಡಿದರು.
ನಗರದಲ್ಲಿ ರೋಡ್ ಶೋ ನಡೆಸಿ ಪ್ರಚಾರ ನಡೆಸಿ, ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಇತ್ತೀಚೆಗೆ ನಡೆದ ಪ್ರಚಾರ ಸಭೆಯಲ್ಲಿ ಈ ಲೋಕಸಭಾ ಚುನಾವಣೆ, ಕೌರವರು ಮತ್ತು ಪಾಂಡವರ ನಡೆಯುವ ಯುದ್ಧ ಎಂದು ಹೇಳಿ ಬಿಜೆಪಿಯವರನ್ನು ಕೌರವರಿಗೆ ಹೋಲಿಕೆ ಮಾಡಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಕೌರವರಾಗಿರುವುದರಿಂದ ಇಂಡಿಯಾ ಒಕ್ಕೂಟದಿಂದ ಒಬ್ಬರಾದಂತೆ ಒಬ್ಬರು ಹೊರ ಹೋಗುತ್ತಿದ್ದಾರೆ. ಜನರು ಪಾಂಡವರು, ಕೌರವರು ಯಾರೆಂದು ಮೇ ೭ರಂದು ನಡೆಯುವ ಚುನಾವಣೆಯಲ್ಲಿ ಜನರು ತೀರ್ಪು ನೀಡಲಿದ್ದಾರೆ ಎಂದರು.ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ:
ಪ್ರಧಾನಿ ನರೇಂದ್ರ ಮೋದಿಯವರ ಹತ್ತು ವರ್ಷದ ಸಾಧನೆಯನ್ನು ಮನೆ-ಮನೆಗೆ ತೆರಳಿ ಜನರಿಗೆ ತಿಳಿಸುವ ಕೆಲಸ ಮಾಡಲಾಗುತ್ತಿದೆ. ಮಾಜಿ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಅವರ ಅವಧಿಯಲ್ಲಿ ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ. ಈ ಬಾರಿ ಜನರು ಶ್ರೀರಾಮುಲು ಮತ್ತು ಮೋದಿಯವರನ್ನು ಗೆಲ್ಲಿಸಬೇಕು ಎಂಬ ಸಂಕಲ್ಪ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಚಿವ ಆನಂದ ಸಿಂಗ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಮಣಿಸಲು ಕಾಂಗ್ರೆಸ್ ಇಂಡಿಯಾ ಒಕ್ಕೂಟ ಮಾಡಿಕೊಂಡಿದೆ. ಹೀಗಾಗಿ ದೊಡ್ಡ ಗುಂಪುವನ್ನು ಮಾಡಿಕೊಂಡಿರುವ ಕಾಂಗ್ರೆಸ್ನವರು ಕೌರವರು ಎಂದು ವ್ಯಂಗ್ಯವಾಡಿದ ಅವರು, ಈ ಚುನಾವಣೆ ಭ್ರಷ್ಟಚಾರದ ವಿರುದ್ಧ ನಡೆಯುತ್ತಿರುವ ಧರ್ಮ ಯುದ್ದವಾಗಿದೆ ಬಣ್ಣಿಸಿದರು.