ಜನರಿಗೆ ಪ್ರಜಾಪ್ರಭುತ್ವದ ಸಮಗ್ರ ಅರಿವು ಅಗತ್ಯ: ಅಶೋಕ್ ರೈ

| Published : Sep 16 2024, 01:57 AM IST

ಜನರಿಗೆ ಪ್ರಜಾಪ್ರಭುತ್ವದ ಸಮಗ್ರ ಅರಿವು ಅಗತ್ಯ: ಅಶೋಕ್ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಕುಂಬ್ರದಿಂದ ಅಂಚಿನಡ್ಕ ತನಕ ಬೈಕ್ ರ‍್ಯಾಲಿ ನಡೆಸಲಾಯಿತು. ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಅವರ ನೇತೃತ್ವದಲ್ಲಿ ನಡೆದ ಬೈಕ್ ರ‍್ಯಾಲಿಯಲ್ಲಿ ೪೦ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ೩೦ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು, ೨೦ ಮಂದಿ ಸಾರ್ವಜನಿಕರು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಪ್ರಜಾಪ್ರಭುತ್ವದ ಬಗ್ಗೆ ಎಲ್ಲರಿಗೂ ಸಮಗ್ರ ಅರಿವು ಇರುವುದು ಅಗತ್ಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.

ಅವರು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾನುವಾರ ಪುತ್ತೂರು ವಿಧಾನಸಭಾ ಕ್ಷೇತ್ರದ ಪುತ್ತೂರಿನ ಕಬಕದಿಂದ ಕನಕಮಜಲು ತನಕ ಹೆದ್ದಾರಿಯ ರಸ್ತೆಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮವನ್ನು ಕಬಕ ವೃತ್ತದ ಬಳಿ ಉದ್ಘಾಟಿಸಿ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ ಭಾರತ ಎಂಬ ಪುಣ್ಯಭೂಮಿಯಲ್ಲಿ ಪ್ರಜಾಪ್ರಭುತ್ವದ ಅಡಿಯಲ್ಲಿ ಸೌಹಾರ್ದತೆಯ ನೆಲೆಯಲ್ಲಿ ನಾವು ಬದುಕಬೇಕಾಗಿದೆ ಎಂದರು. ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ನಗರಸಭಾ ಅಧ್ಯಕ್ಷೆ ಲೀಲಾವತಿ, ಉಪಾಧ್ಯಕ್ಷ ಬಾಲಚಂದ್ರ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೊಕೇಶ್ ಎಸ್.ಆರ್., ನಗರಸಭಾ ಆಯುಕ್ತ ಮಧು ಎಸ್. ಮನೋಹರ್, ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ನಿರ್ದೇಶಕ ಕೃಷ್ಣ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್. ರವಿ, ಕಬಕ ಗ್ರಾ.ಪಂ. ಅಧ್ಯಕ್ಷೆ ಸುಶೀಲಾ, ಕಬಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಮತ್ತಿತರರು ಇದ್ದರು. ತಹಸೀಲ್ದಾರ್ ಪುರಂದರ ಹೆಗ್ಡೆ ಸಂವಿಧಾನದ ಪೀಠಿಕೆ ಬೋಧಿಸಿದರು. ಆಕರ್ಷಕ ಮಾನವ ಸರಪಳಿ: ಪುತ್ತೂರಿನಲ್ಲಿ ಮಾನವ ಸರಪಳಿ ಕಾರ್ಯಕ್ರಮವು ಆಕರ್ಷಕವಾಗಿ ಮೂಡಿಬಂತು. ಕಬಕದಲ್ಲಿ ವಿದ್ಯಾರ್ಥಿಗಳಿಂದ ನಿರ್ಮಿತವಾದ ಭಾರತ, ಮಕ್ಕಳ ಬ್ಯಾಂಡ್‌ಸೆಟ್, ಕೊಂಬು ಕಹಳೆ, ಹೆದ್ದಾರಿಯುದ್ದಕ್ಕೂ ಪರಸ್ಪರ ಕೈ ಹಿಡಿದುಕೊಂಡು ವಿದ್ಯಾರ್ಥಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖಾ ಸಿಬ್ಬಂದಿ, , ತಾಲೂಕುಮಟ್ಟದ ಅಧಿಕಾರಿಗಳು ರಸ್ತೆಯುದ್ದಕ್ಕೂ ಇದ್ದರು. ಇದರೊಂದಿಗೆ ಪ್ರತಿ ಕಡೆಗಳಲ್ಲಿಯೂ ಸಂವಿಧಾನ ಪೀಠಿಕೆ ಬೋಧಿಸಲಾಯಿತು, ಕಬಕದಿಂದ ಸುಳ್ಯ ಗಡಿಯಲ್ಲಿನ ಪೆರ್ನಾಜೆ ತನಕ ತೆರೆದ ಜೀಪಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ, ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ, ತಹಸೀಲ್ದಾರ್ ಪುರಂದರ ಹೆಗ್ಡೆ ಸಾಗಿ ಮಾನವ ಸರಪಳಿಗೆ ಉತ್ತೇಜನ ನೀಡಿದರು. ಬೈಕ್ ರ‍್ಯಾಲಿ: ಕುಂಬ್ರದಿಂದ ಅಂಚಿನಡ್ಕ ತನಕ ಬೈಕ್ ರ‍್ಯಾಲಿ ನಡೆಸಲಾಯಿತು. ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ್ ಅವರ ನೇತೃತ್ವದಲ್ಲಿ ನಡೆದ ಬೈಕ್ ರ‍್ಯಾಲಿಯಲ್ಲಿ ೪೦ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ, ೩೦ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು, ೨೦ ಮಂದಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನೆನಪಿಗಾಗಿ ಪೆರ್ನಾಜೆ ಶಾಲಾ ಪರಿಸರದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮತ್ತು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ಎರಡು ಗಿಡಗಳನ್ನು ನೆಟ್ಟರು.