ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸ್ಮಾರ್ಟ್ ಸಿಟಿಯ ಅವಾಂತರದಿಂದಾಗಿ ಸಣ್ಣಮಳೆ ಬಂದರೂ ಜನಸಾಮಾನ್ಯರ ಬದುಕು ಅಸ್ತವ್ಯಸ್ಥವಾಗುತ್ತಿದ್ದು, ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಲ್ಯಾಣ ಸಂಸ್ಥೆ ಹಾಗೂ ಅಪರಾಧ ನಿಯಂತ್ರಣ ಸಂಸ್ಥೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಸಾಮಾನ್ಯರ ಬದುಕು ಅಸ್ತವ್ಯಸ್ಥವಾಗಿದೆ. ಅದರಲ್ಲೂ ಅಣ್ಣಾನಗರ, ಆರ್ಎಂಎಲ್ ನಗರ, ಮಂಜುನಾಥ ಬಡಾವಣೆ, ಚಾನಲ್ ಸುತ್ತಮುತ್ತಲಿನ ಬಡಾವಣೆಗಳ ಜನರಿಗೆ ಸಂಕಷ್ಟ ಉಂಟಾಗಿದೆ. ಮಳೆ ಬಂದರೆ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಮನೆಯಲ್ಲಿನ ವಸ್ತುಗಳು ನೀರಲ್ಲಿ ಕೊಚ್ಚಿ ಹೋಗುತ್ತವೆ ಎಂದು ದೂರಿದರು. ಇದಕ್ಕೆ ಸ್ಮಾರ್ಟ್ ಸಿಟಿಯ ಅವಾಂತರ ಮತ್ತು ಅವೈಜ್ಞಾನಿಕ ಕಾಮಗಾರಿಯೇ ಮುಖ್ಯ ಕಾರಣ. ಬೇಕಾಬಿಟ್ಟಿಯಾಗಿ ಲೇವೌಟ್ಗಳು ನಿರ್ಮಾಣವಾಗುತ್ತಿವೆ. ಸ್ಮಾರ್ಟ್ ಸಿಟಿ ಎಂಬುವುದು ಕೇವಲ ಕಡತಕ್ಕೆ ಸೀಮಿತವಾಗಿದೆ ಎಂದರು. ಚಾನಲ್, ರಾಜಕಾಲುವೆ ಹಾಗೂ ಚರಂಡಿಗಳಿಗೆ ತಡೆಗೋಡೆ ನಿರ್ಮಿಸಬೇಕು. ಮಳೆಗಾಲದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಜಿಲ್ಲಾಡಳಿತ ಈ ಬಗ್ಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯದರ್ಶಿ ಸಾಧಿಕ್, ಎಸ್.ಎಂ.ಅಹಮ್ಮದ್, ನಗರ ಅಧ್ಯಕ್ಷ ಇಮ್ರಾನ್, ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಮೊದಲಾದವರು ಇದ್ದರು.