ಸಾರಾಂಶ
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಕೆಆರ್ಎಸ್ ನಾಲಾ ವ್ಯಾಪ್ತಿಯ ರೈತರ ಕಷ್ಟ ಕೇಳುವವರಿಲ್ಲ .
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಜನಪ್ರತಿನಿಧಿಗಳಿಗೆ ಸ್ವಾಭಿಮಾನ ಇಲ್ಲದಿರುವುದು ದೊಡ್ಡ ದುರಂತ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್ ವಿಷಾಧಿಸಿದರು.ತಾಲೂಕಿನ ಕಿರುಗಾವಲು ಭಾರತೀ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗುತ್ತಿದೆ. ಕೆಆರ್ಎಸ್ ನಾಲಾ ವ್ಯಾಪ್ತಿಯ ರೈತರ ಕಷ್ಟ ಕೇಳುವವರಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕಳೆದ 151 ದಿನಗಳಿಂದ ರೈತ ನಾಯಕಿ ಸುನಂದಾ ಜಯರಾಮು, ಆತ್ಮಾನಂದ್, ಬೋರಯ್ಯ ಸೇರಿ ಹಲವರ ನೇತೃತ್ವದಲ್ಲಿ ಕಾವೇರಿ ಚಳವಳಿ ನಡೆಸಿದ್ದೇವೆ. ಮೈಷುಗರ್ ಖಾಸಗೀಕರಣ ವಿರೋಧ ಸೇರಿ ಕಳೆದ 20 ವರ್ಷಗಳಿಂದ ಜಿಲ್ಲೆಯ ಜಲ್ವಂತ ಸಮಸ್ಯೆಗಳನ್ನು ಬಗೆಹರಿಸಲು ಹೋರಾಡುತ್ತಲೇ ಬರಲಾಗುತ್ತಿದೆ. ಹೋರಾಟಕ್ಕೆ ಇಂದಿನ ಯುವ ಸಮೂಹ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಬಿ.ಮಹದೇವಪ್ಪ ಉದ್ಘಾಟಿಸಿದರು. ಪ್ರಾಂಶುಪಾಲ ಪುಟ್ಟಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು.ಗುಲ್ಬರ್ಗ ವಿವಿಯ ಆಂಗ್ಲಭಾಷಾ ಪ್ರಾಧ್ಯಾಪಕ ಟಿ.ನಿಂಗಣ್ಣ, ಪತ್ರಕರ್ತೆ ಮಂಜುಳಾ, ಜಿಪಂ ಮಾಜಿ ಸದಸ್ಯೆ ಸುಜಾತಾ ಕೆ.ಎಂ.ಪುಟ್ಟು, ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಮಂಚಲಿಂಗು, ಆಕಾಶವಾಣಿ ಕಲಾವಿದ ಗುರುಪ್ರಸಾದ್, ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ಚನ್ನಸಂದ್ರ ಮಹದೇವು, ಉಪನ್ಯಾಸಕರಾದ ಬಿ.ಬಸವಲಿಂಗೇಗೌಡ, ರಾಚಾಪ್ಪಾಜಿ, ಸೋಮಶೇಖರ್ ಪಾಲ್ಗೊಂಡಿದ್ದರು.